ಕದಂಬ ನೌಕಾ ನೆಲೆ ಮೇಲೆ ದಾಳಿ, ಇಬ್ಬರು ಅಧಿಕಾರಿಗಳು ಸಿಬಿಐ ವಶಕ್ಕೆ
ಕಾರವಾರ, ಜುಲೈ 28: ಉತ್ತರಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಐಎನ್ಎಸ್ ಕದಂಬ ನೌಕಾನೆಲೆಯ ಮೇಲೆ ಗುರುವಾರ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಿಲಿಟರಿ ಇಂಜಿನಿಯರಿಂಗ್ ಸರ್ವಿಸ್ ಅಧಿಕಾರಿಗಳ ಮೇಲೆ ಸಿಬಿಐ ದಾಳಿ ನಡೆದಿದೆ.
ಭ್ರಷ್ಟಾಚಾರ ಆರೋಪದಡಿ ಗ್ಯಾರಿಸನ್ ಇಂಜಿನಿಯರ್ ಜಿ.ಎಸ್.ದಾಸ್ ಹಾಗೂ ಸಹಾಯಕ ಗ್ಯಾರಿಸನ್ ಇಂಜಿನಿಯರ್ ಎಂ.ಚೌಹಾಣ್ ಎಂಬ ಇಬ್ಬರು ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಭಾರೀ ವಂಚನೆ
ಈ ಇಬ್ಬರು ಅಧಿಕಾರಿಗಳು ನೌಕಾನೆಲೆಯ ವಸ್ತುಗಳನ್ನು ಖರೀದಿಸಲು ಭಾರೀ ವಂಚನೆಯನ್ನು ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಈ ದಾಳಿ ನಡೆದಿದೆ.
ನೌಕಾನೆಲೆಯಲ್ಲಿ ಸಂಪೂರ್ಣ ಕಣ್ಗಾವಲು ಇರುವುದರಿಂದ ಈ ಅಧಿಕಾರಿಗಳು ಗುತ್ತಿಗೆದಾರರು ಹಾಗೂ ವಸ್ತು ಸರಬರಾಜುದಾರರೊಂದಿಗೆ ಕೋಡ್ ವರ್ಡ್ ಬಳಸಿ ಮಾತನಾಡಿ ಲಂಚ ಸ್ವೀಕರಿಸುತ್ತಿದ್ದರು.
ಇವರು ಅನೇಕ ಉನ್ನತ ಅಧಿಕಾರಿಗಳು, ಶ್ರೀಮಂತ ವ್ಯಕ್ತಿಗಳ ಸಂಪರ್ಕ ಹೊಂದಿದ್ದು, ಏಜೆಂಟ್ಗಳ ಮೂಲಕ ಹಣ ಪಡೆಯುತ್ತಿದ್ದರು ಎನ್ನಲಾಗಿದೆ.
ಕೋಡ್ ವರ್ಡ್ ಬಳಕೆ
ಇವರು ಸಕ್ಕರೆ ಹಾಗೂ ಚಿಕನ್ ಕೋಡ್ ವರ್ಡ್ ಬಳಸಿ ವ್ಯವಹಾರ ನಡೆಸುತ್ತಿದ್ದರು. 1 ಕೆಜಿ ಸಕ್ಕರೆಗೆ 2 ಲಕ್ಷ ರೂ. ಹಾಗೂ 1 ಕೆಜಿ ಚಿಕನ್ ಗೆ 3 ಲಕ್ಷ ನಿಗದಿಪಡಿಸಿದ್ದರು. ಗುತ್ತಿಗೆದಾರರೊಂದಿಗೆ ಇದೇ ಕೋಡ್ ವರ್ಡ್ ನ್ನು ಬಳಸಿ ಭ್ರಷ್ಟಾಚಾರ ನಡೆಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ನಿಖರ ಮಾಹಿತಿ ಪಡೆದ ಸಿಬಿಐ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಾಯದಿಂದ ಇಂಜಿನಿಯರಿಂಗ್ ವಿಭಾಗಕ್ಕೆ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.












Click it and Unblock the Notifications