ವಿಧಾನಸೌಧದಲ್ಲಿ ಹಣ ಪತ್ತೆ : ಆರೋಪಿ ಪೊಲೀಸ್ ವಶಕ್ಕೆ, ಜಾಮೀನು ಇಲ್ಲ
ಬೆಂಗಳೂರು, ಜನವರಿ 09 : ವಿಧಾನಸೌಧದಲ್ಲಿ 25.7 ಲಕ್ಷ ಹಣದೊಂದಿಗೆ ಸಿಕ್ಕಿಬಿದ್ದಿದ್ದ ಮೋಹನ್ ಕುಮಾರ್ನನ್ನು ಮೂರು ದಿನಗಳ ಕಾಲ ಎಸಿಬಿ ಪೊಲೀಸರು ವಶಕ್ಕೆ ನೀಡಲಾಗಿದೆ. ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ.
ಬುಧವಾರ ಆರೋಪಿ ಮೋಹನ್ ಕುಮಾರ್ನನ್ನು ಎಸಿಬಿ ಪೊಲೀಸರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಆರೋಪಿಯನ್ನು ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸರು ವಶಕ್ಕೆ ನೀಡಿತು.
ಆರೋಪಿ ಮೋಹನ್ ಕುಮಾರ್ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಆದರೆ, ಸರ್ಕಾರಿ ವಕೀಲರು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದರು. ಆದ್ದರಿಂದ, ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಯಿತು.
ಮೋಹನ್ ಕುಮಾರ್ ಬಂಧನದ ಹಿನ್ನಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಆಗ್ರಹಿಸಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದೆ.....

ಎಸಿಬಿಯಿಂದ ಬಂಧನ
ವಿಧಾನಸೌಧದಲ್ಲಿ 25.7 ಲಕ್ಷ ಹಣದೊಂದಿಗೆ ಮೋಹನ್ ಕುಮಾರ್ ಸಿಕ್ಕಿ ಬಿದ್ದಿದ್ದರು. ಮೊದಲು ಈ ಪ್ರಕರಣದ ತನಿಖೆಯನ್ನು ವಿಧಾನಸೌಧ ಠಾಣೆ ಪೊಲೀಸರು ನಡೆಸುತ್ತಿದ್ದರು. ಬಳಿಕ ಪ್ರಕರಣವನ್ನು ಎಸಿಬಿಗೆ ವರ್ಗಾವಣೆ ಮಾಡಲಾಯಿತು. ಜನವರಿ 8ರಂದು ಎಸಿಬಿ ಪೊಲೀಸರು ಮೋಹನ್ ಕುಮಾರ್ ಬಂಧಿಸಿದ್ದರು.

ಸಚಿವರ ಕಚೇರಿ ಟೈಪಿಸ್ಟ್
ಮೋಹನ್ ಕುಮಾರ್ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಟೈಪಿಸ್ಟ್ ಆಗಿದ್ದರು. ಆದರೆ, ಅವರನ್ನು ಸರ್ಕಾರಿ ನೌಕರ ಎಂದು ಪರಿಗಣಿಸಿ ಪ್ರಕರಣದ ತನಿಖೆಯನ್ನು ಎಸಿಬಿಗೆ ಹಸ್ತಾಂತರ ಮಾಡಲಾಗಿದೆ.

ವಿಧಾನಸೌಧದಲ್ಲಿ ಬಂಧನ
ಜನವರಿ 4ರ ಶುಕ್ರವಾರ ಮೋಹನ್ ಕುಮಾರ್ 25.7 ಲಕ್ಷ ದಾಖಲೆ ಇಲ್ಲದ ಹಣವನ್ನು ತೆಗೆದುಕೊಂಡು ಹೋಗುವಾಗ ವಿಧಾನಸೌಧ ಪಶ್ಚಿಮ ದ್ವಾರದ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ ಹಣ ಯಾರಿಗೆ ಸೇರಿದ್ದು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
|
ಸಚಿವರ ರಾಜೀನಾಮೆಗೆ ಒತ್ತಾಯ
ಸಚಿವ ಸಿ.ಪುಟ್ಟರಂಗ ಶೆಟ್ಟಿ ರಾಜೀನಾಮೆಯನ್ನು ಪಡೆಯಬೇಕು ಎಂದು ಕರ್ನಾಟಕ ಬಿಜೆಪಿ ಆಗ್ರಹಿಸಿದೆ. ಈ ಕುರಿತು ಟ್ವೀಟ್ ಮಾಡಿದೆ.
|
ಸಚಿವರ ರಾಜೀನಾಮೆ ಕೊಡಿಸಿ
ವಿಧಾನಸೌಧದಲ್ಲಿಯೇ ದಂಧೆ ಶುರು ಮಾಡಿದ್ದೀರಿ. ಇದೇನಾ ನಿಮ್ಮ ಭ್ರಷ್ಟ ಮುಕ್ತ ಸರಕಾರ? ಮೊದಲು ಪುಟ್ಟರಂಗಶೆಟ್ಟಿ ಅವರಿಂದ ರಾಜೀನಾಮೆ ಕೊಡಿಸಿ ನಿಮ್ಮ ಪೌರುಷ ತೋರಿಸಿ ಎಂದು ಕರ್ನಾಟಕ ಬಿಜೆಪಿ ಆಗ್ರಹಿಸಿದೆ.












Click it and Unblock the Notifications