ಸಂಪುಟ ವಿಸ್ತರಣೆ : ಖಾತೆ, ವ್ಯಕ್ತಿಯೂ ಬದಲಾಗಬಹುದು!
ಬೆಂಗಳೂರು, ಏ. 6 : 'ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯ ಎರಡೂ ಪ್ರಸ್ತಾವಗಳಿವೆ. ಖಾತೆಯೂ ಬದಲಾಗಬಹುದು. ವ್ಯಕ್ತಿಯೂ ಬದಲಾಗಬಹುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಹೇಳಿದ್ದು, ಕರ್ನಾಟಕ ಕಾಂಗ್ರೆಸ್ನಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ.
ಈಗಾಗಲೇ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರು ದೆಹಲಿಗೆ ತೆರಳಿದ್ದು, ಕೇಂದ್ರ ನಾಯಕರಿಗೆ ಬೇಡಿಕೆ ಸಲ್ಲಿಸಲು ಸಿದ್ಧವಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಕುರಿತು ಇಂದು ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. [ಪರಮೇಶ್ವರಗೆ ಡಿಸಿಎಂ ಪಟ್ಟ, ಸಿಎಂ ಘೋಷಣೆ]

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಎರಡು ದಿನಗಳಿಂದ ದೆಹಲಿಯಲ್ಲಿದ್ದು, ಸೋಮವಾರ ಉಭಯ ನಾಯಕರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.[ಸಚಿವ ಸ್ಥಾನಕ್ಕಾಗಿ ದೆಹಲಿಗೆ ಹೋದ ಶಾಸಕರು]
ಪರಮೇಶ್ವರ್ ಸಂಪುಟ ಸೇರಲಿದ್ದಾರೆಯೇ? : ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ 4 ಸ್ಥಾನಗಳು ಖಾಲಿಇವೆ. ಸಕ್ರಿಯವಾಗಿಲ್ಲದ 6 ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಹೊಸದಾಗಿ 10 ಮಂದಿಗೆ ಅವಕಾಶ ಕಲ್ಪಿಸುವುದು ಮುಖ್ಯಮಂತ್ರಿಗಳ ಚಿಂತನೆ. ಕೆಲವರ ಖಾತೆಗಳನ್ನು ಬದಲಾವಣೆ ಮಾಡುವ ಉದ್ದೇಶವೂ ಮುಖ್ಯಮಂತ್ರಿಗಳ ಮುಂದಿದೆ. ಆದರೆ, ಹೈಕಮಾಂಡ್ ಒಪ್ಪಿಗೆ ನೀಡಲಿದೆಯೇ?.
ಡಿಸಿಎಂ ಹುದ್ದೆ ಸೃಷ್ಟಿಸುವುದಿಲ್ಲ ಎಂದು ಸಿದ್ದರಾಮಯ್ಯ ಹಲವಾರು ಬಾರಿ ಹೇಳಿದ್ದಾರೆ. ಡಾ.ಜಿ.ಪರಮೇಶ್ವರ ಅವರು ಸಂಪುಟ ಸೇರಲಿದ್ದಾರೆಯೇ?. ಪರಮೇಶ್ವರ ಉಪಮುಖ್ಯಮಂತ್ರಿಯಾಗುತ್ತಾರೋ? ಸಚಿವರಾಗುತ್ತಾರೋ? ಎಂಬ ಪ್ರಶ್ನೆಗೆ ಹೈಕಮಾಂಡ್ ನಾಯಕರು ಉತ್ತರ ನೀಡಬೇಕು.
ದೆಹಲಿ ವಿಮಾನ ಹತ್ತಿದ ಶಾಸಕರು : ಸಂಪುಟ ವಿಸ್ತರಣೆ ಚರ್ಚೆಗಳು ಆರಂಭವಾಗುತ್ತಿದ್ದಂತೆ ಹಲವು ಶಾಸಕರು ದೆಹಲಿ ವಿಮಾನವೇರಿದ್ದಾರೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸೇರಿದಂತೆ ಕೇಂದ್ರದ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಸಚಿವ ಸ್ಥಾನದ ಬೇಡಿಕೆ ಮುಂದಿಡಲು ಸಿದ್ಧವಾಗಿದ್ದಾರೆ.












Click it and Unblock the Notifications