ಸಚಿವ ಸಂಪುಟ ಸಭೆಯಲ್ಲಿ ವಿವಿಧ ಯೋಜನೆಗಳಿಗೆ ಅನುಮೋದನೆ
ಬೆಂಗಳೂರು, ಅಕ್ಟೋಬರ್ 27: ಹುಬ್ಬಳ್ಳಿ ನಗರದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ 73 ರ 2.2 ಕಿ. ಮೀ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಕರೆಯಲು ನಿನ್ನೆ(ಅ.26)ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ರಾಜ್ಯ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗಳ 13 ಪರಿಷ್ಕೃತ ಯೋಜನೆಗಳಿಗೆ 398.30 ಕೋಟಿ ರೂ ಅಂದಾಜಿಗೆ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾದ ಯೋಜನೆಗಳ ವಿವರ ಇಂತಿದೆ.
ಬಡ ಜನರಿಗೆ 'ವಸತಿ ಭಾಗ್ಯ' ಘೋಷಿಸಿದ ಸಿಎಂ ಸಿದ್ದರಾಮಯ್ಯ
* ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ವಸತಿ ಶಿಕ್ಷಣ ಸಮಿತಿಯ ಸಂಘದ ವತಿಯಿಂದ 64.53 ಕೋಟಿ ರೂ. ವೆಚ್ಚದಲ್ಲಿ ಒಂಭತ್ತು ವಿದ್ಯಾರ್ಥಿ ನಿಲಯ ಸಮುಚ್ಛಯ ನಿರ್ಮಾಣಕ್ಕೆ ಅನುಮೋದನೆ * ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಹಿತ್ಲಕಾರಗದ್ದೆ ವಾರ್ಡ್ ನಂ 12 ಕ್ಕೆ ಬಾಳಗಿಮನೆ ವಾರ್ಡ್ ನಂ. 5 ಭಾಗಶಃ ಪ್ರದೇಶವನ್ನು ಸೇರ್ಪಡೆ ಮಾಡಲು ಸಮ್ಮತಿ
* ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸೂರತ್ಕಲ್ ಪ್ರದೇಶದಲ್ಲಿ 61 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಕಾಮಗಾರಿಗಳಿಗೆ ಅನುಮೋದನೆ.
* ಹೇಮಾವತಿ ಎಡದಂಡೆ ನಾಲೆ (ಸಾಹುಕಾರ್ ಚೆನ್ನಯ್ಯ ನಾಲೆ) ಸರಪಳಿ 72.26 ಕಿ. ಮೀ ನಿಂದ 214.30 ಕಿ. ಮೀ ವರೆಗಿನ ನಾಲೆಯ ಆಧುನೀಕರಣ ಕಾಮಗಾರಿಯ ಅಂದಾಜು 809.58 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ
*ಮಲಪ್ರಭಾ ನದಿಯಿಂದ ಬೆಳಗಾವಿ ಜಿಲ್ಲೆಯ ಕಿತ್ತೂರು ಮತ್ತು ಬೈಲಹೊಂಗಲ ವ್ಯಾಪ್ತಿಯಲ್ಲಿನ 64 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 248.20 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಸಂಪುಟದಿಂದ ಸಮ್ಮತಿ.
* ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಬೀಳಗಿ ಕ್ಷೇತ್ರದ ಹೆರಕಲ್ ಏತ ನೀರಾವರಿ ಯೋಜನೆಯಡಿ 6,100 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ವಿಸ್ತರಿಸುವ ಸಂಬಂಧ ತಯಾರಿಸಲಾದ 238 ಕೋಟಿ ರೂ ಪರಿಷ್ಕೃತ ಅಂದಾಜಿಗೆ ಅನುಮತಿ.
* ಭೀಮಾ ನದಿಯ ಯಾದಗಿರಿ ಬ್ಯಾರೇಜಿನ ಹಿನ್ನೀರಿನಿಂದ ನೀರನ್ನು ಮೇಲೆತ್ತಿ ಯಾದಗಿರಿ ತಾಲ್ಲೂಕಿನ 35 ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯತ್ ನ ಕೆರೆಗಳನ್ನು ತುಂಬಿಸುವ 440 ಕೋಟಿ ರೂ. ಅಂದಾಜು ಮೊತ್ತದ ಹೊಸ ಸೊಂತಿ ಏತ ನೀರಾವರಿ ಯೋಜನೆಗೆ ಅನುಮೋದನೆ.
* ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಅಮ್ಮುಂಜೆ ಗ್ರಾಮದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಮತ್ತು ಬಳ್ಳಾರಿಯ ಕಮಲಾಪುರದಲ್ಲಿರುವ ಕಿರು ಮೃಗಾಲಯವನ್ನು ಬಳಿಕಲ್ಲಿಗೆ ವರ್ಗಾವಣೆ ಮಾಡಿ 65.63 ಕೋಟಿ ರೂ ವೆಚ್ಚದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ ಎಂದು ಅಭಿವೃದ್ಧಿಪಡಿಸಲು ಸಮ್ಮತಿ.
* ಕಲಬುರಗಿ ಜಿಲ್ಲೆಯ ಕೊಟ್ನೂರು ಗ್ರಾಮದಲ್ಲಿ ತೊಗರಿ ಅಭಿವೃದ್ಧಿ ಮಂಡಳಿಯ ಕಚೇರಿ ಹಾಗೂ ಬೇಳೆ ಸಂಸ್ಕರಣಾ ಘಟಕ ಸ್ಥಾಪನೆಗೆ 2.4 ಹೆಕ್ಟೇರ್ ಜಾಗವನ್ನು ಗುತ್ತಿಗೆ ಆಧಾರದ ಮೇರೆಗೆ ಮಂಜೂರು ಮಾಡಲು ಒಪ್ಪಿಗೆ.