ಮಂತ್ರಿ ಪದವಿ ಪಡೆಯಲು ಕೊನೆಯ ಕ್ಷಣದ ಕಸರತ್ತು!
ಬೆಂಗಳೂರು, ಫೆ. 04: ಕರ್ನಾಟಕ ಸಂಪುಟ ವಿಸ್ತರಣೆಗೆ ಗುರುವಾರದಂದು ಮುಹೂರ್ತ ನಿಗದಿಯಾಗಿದೆ. ದಿನಾಂಕ ನಿಗದಿಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗುತ್ತಿದೆ. ಸೋತವರಿಗೆ ಸಾಲು ಸಾಲು ಮಂತ್ರಿಸ್ಥಾನ ನೀಡುತ್ತಿರುವುದಕ್ಕೆ ಮೂಲ ಬಿಜೆಪಿ ಶಾಸಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಒಂದೆಡೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಟೀಂ ಬೇಡಿಕೆ ಈಡೇರಿಸುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕದ ಶಾಸಕರು ಒಗ್ಗಟ್ಟಾಗಿದ್ದಾರೆ. ಅವರಿಗೆ ದಕ್ಷಿಣ ಕರ್ನಾಟಕ ಬಿಜೆಪಿ ನಾಯಕರ ಬೆಂಬಲ ಸಿಕ್ಕಿರುವುದು ಬಿಜೆಪಿಯಲ್ಲಿ ಮತ್ತೊಂದು ಹಂತದ ಬೆಳವಣಿಗೆಗೆ ಕಾರಣವಾಗಲಿದೆ.
ಬೆಳಗ್ಗೆಯಿಂದಲೇ ಸಿಎಂ ಯಡಿಯೂರಪ್ಪ ಅವರ ಡಾಲರ್ಸ್ ಕಾಲನಿ ನಿವಾಸಕ್ಕೆ ಮಂತ್ರಿಸ್ಥಾನದ ಆಕಾಂಕ್ಷಿಗಳು ಭೇಟಿಕೊಟ್ಟು ಒತ್ತಡ ಹಾಕುತ್ತಿದ್ದಾರೆ. ಅಸಮಾಧಾನಿತ ಶಾಸಕರು ನಿಯೋಗದ ಮೂಲಕ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನು ಇಂದು ಭೇಟಿ ಮಾಡಲಿದ್ದಾರೆ.
ಯೋಗೀಶ್ವರ್ಗೆ ಮಂತ್ರಿಸ್ಥಾನ ಕೊಡಬೇಡಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವ ಸಿಪಿ ಯೋಗೇಶ್ವರ್ ಆವರನ್ನು ಮಂತ್ರಿ ಮಾಡುವುದಕ್ಕೆ ಬಿಜೆಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಚುನಾವಣೆಯಲ್ಲಿ ಗೆದ್ದವರನ್ನು ಬಿಟ್ಟು ಸೋತವರಿಗೆ ಯಾಕೇ ಮಂತ್ರಿಸ್ಥಾನ ಎಂದು ಶಾಸಕರು ಪ್ರಶ್ನಿಸುತ್ತಿದ್ದಾರೆ. ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಆವರನ್ನು ಮಂತ್ರಿ ಮಾಡಲು ಬಿಜೆಪಿ ಹೈಕಮಾಂಡ್ ಸಿದ್ಧವಾಗಿದೆ ಎಂಬ ವಿಷಯ ಬರುತ್ತಿದ್ದಂತೆಯೆ ಮೂಲ ಬಿಜೆಪಿಯ ಶಾಸಕರು ಒಗ್ಗಟ್ಟಾಗಿ ವಿರೋಧಿಸಿದ್ದಾರೆ. ನಿನ್ನೆ ಸಭೆ ನಡೆಸಿ ಸಿಎಂ ಮೇಲೆ ಒತ್ತಡವನ್ನೂ ಹಾಕಿದ್ದಾರೆ.
ಸೋತ ಯೋಗೇಶ್ವರ್ ಗೆ ಮಂತ್ರಿಗಿರಿ 'ಬಹುಮಾನ'?: ಚುನಾವಣೆ ಗೆದ್ದವರ ಗತಿಯೇನು?
ಶಾಸಕರ ಭವನದಲ್ಲಿ ಬಿಜೆಪಿ ಶಾಸಕರ ಸಭೆ
ಕಲ್ಯಾಣ ಕರ್ನಾಟಕ ಭಾಗಕ್ಕೆ ಎರಡು ಸಚಿವ ಸ್ಥಾನಗಳಿಗೆ ಒತ್ತಾಯ ಮಾಡುತ್ತಿರುವ ಬಿಜೆಪಿ ಶಾಸಕರು, ಇಂದೂ ಸಭೆ ನಡೆಸಲಿದ್ದಾರೆ. ಶಾಸಕರಾದ ರಾಜುಗೌಡ, ರಾಜಕುಮಾರ್ ಪಾಟೀಲ್ ತೇಲ್ಕೂರ, ದತ್ತಾತ್ರೇಯ ಪಾಟೀಲ್ ರೇವೂರ, ಶಿವರಾಜ್ ಪಾಟೀಲ್, ಪರಣ್ಣ ಮುನವಳ್ಳಿ, ಮುರುಗೇಶ್ ನಿರಾಣಿ, ಹಾಲಪ್ಪಾ ಆಚಾರ್, ಬಸವನಗೌಡ ಮತ್ತಿಮೋಡ್ ಸೇರಿದಂತೆ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಹಲವು ಶಾಸಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂಪಿ ರೇಣುಕಾಚಾರ್ಯ ಕೂಡ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಜೊತೆಗೆ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ಕೂಡ ಯೋಗೇಶ್ವರ್ ಅವರಿಗೆ ಮಂತ್ರಿಸ್ಥಾನ ವಿರೋಧಿಸಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಎಂಟಿಬಿ, ವಿಶ್ವನಾಥ್ ಅವರಿಗೆ ಮಂತ್ರಿಸ್ಥಾನ ಕೊಡಿ
ಸೋತಿರುವವರಿಗೆ ಮಂತ್ರಿಸ್ಥಾನ ಕೊಡುವುದಾದರೆ ಮಾಜಿ ಸಚಿವರಾದ ಎಂಟಿಬಿ ನಾಗರಾಜ್ ಹಾಗೂ ಎಚ್. ವಿಶ್ವನಾಥ್ ಅವರಿಗೂ ಮಂತ್ರಿಸ್ಥಾನ ಕೊಡಿ ಎಂದು ಬಿಜೆಪಿಯಲ್ಲಿನ ಶಾಸಕರು ಒತ್ತಾಯಿಸಿದ್ದಾರೆ.
ಸಂಪುಟ ವಿಸ್ತರಣೆ: ಮೂಲ ಬಿಜೆಪಿಗರಲ್ಲಿ ಹತ್ತು ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ
ಬಿಜೆಪಿಗೆ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಅವರ ಕೊಡುಗೆ ಏನು ಅಂತಾ ಮೂಲ ಬಿಜೆಪಿ ಶಾಸಕ ರಾಜೂಗೌಡ ಬಹಿರಂಗವಾಗಿಯೆ ಪ್ರಶ್ನಿಸಿದ್ದಾರೆ. ಲಕ್ಷ್ಮಣ ಸವದಿ ಅವರಿಗೆ ಮಂತ್ರಿಸ್ಥಾನ ಕೊಟ್ಟಿದ್ದು ಹೈಕಮಾಂಡ್ ಅದನ್ನ ನಾವು ಪ್ರಶ್ನೆ ಮಾಡಲ್ಲ, ಇದೀಗ ಯೋಗೇಶ್ವರ್ ಅವರಿಗೆ ಮಂತ್ರಿಸ್ಥಾನ ಕೊಡುತ್ತಿರುವುದು ಸರಿಯಲ್ಲ. ನಾವು 104 ಜನರು ಗೆದ್ದಿದ್ದೇವೆ. ಮೊದಲು ನಮ್ಮನ್ನು ಪರಿಗಣಿಸಿ ಎಂದು ಹೈಕಮಾಂಡ್ ಮೇಲೆ ಬಿಜೆಪಿ ಶಾಸಕರು ಒತ್ತಡ ಹಾಕಿದ್ದಾರೆ.
ಮಂತ್ರಿ ಸ್ಥಾನಕ್ಕೆ ಕೊನೆ ಕ್ಷಣದ ಕಸರತ್ತು!
ಬೆಳಗ್ಗೆಯಿಂದಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳು ಭೇಟಿ ಕೊಡುತ್ತಿದ್ದಾರೆ. ಅನರ್ಹ ಶಾಸಕ ಆರ್. ಶಂಕರ್, ಮಾಜಿ ಸಚಿವ ಉಮೇಶ್ ಕತ್ತಿ, ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ಸೇರಿದಂತೆ ಹಲವರು ಸಿಎಂ ಯಡಿಯೂರಪ್ಪ ಭೇಟಿ ಮಾಡಿದ್ದಾರೆ.
ಇದೇ ಫೆಬ್ರುವರಿ 6 ರಂದೇ ಸಚಿವರನ್ನಾಗಿ ಮಾಡಿ ಎಂದು ಅನರ್ಹ ಶಾಸಕ ಪಟ್ಟು ಹಿಡಿದಿದ್ದಾರೆ. ಆದರೆ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಬಿಎಸ್ವೈ ಶಂಕರ್ಗೆ ವಿವರಿಸಿದ್ದಾರೆ. ಜೊತೆಗೆ ನಂಬಿ ಬಂದವರನ್ನು ಕೈಬಿಡುವ ಪ್ರಶ್ನೆ ಇಲ್ಲ ಎಂದು ಸಮಾಧಾನ ಹೇಳಿದ್ದಾರಂತೆ. ಆದರೆ ಇದ್ಯಾವುದನ್ನೂ ಕೇಳುವ ಸ್ಥಿತಿಯಲ್ಲಿ ಶಂಕರ್ ಇಲ್ಲ. ಇದ್ದ ಸಚಿವಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಈಗಲೇ ಮಂತ್ರಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಸಂಪುಟ ಸಂಕಟ ದಿನದಿಂದ ದಿನಕ್ಕೆ ಯಡಿಯೂರಪ್ಪ ಅವರಿಗೆ ಹೆಚ್ಚಾಗುತ್ತಿದೆ. ಹಲವು ಶಾಸಕರು ಈಗಾಗಲೇ ರಾಜೀನಾಮೆ ಬೆದರಿಕೆಯನ್ನೂ ಹಾಕಿದ್ದಾರೆ. ಇದೆಲ್ಲವನ್ನೂ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ಹೈಕಮಾಂಡ್ ಹೇಗೆ ನಿಭಾಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.