ಬೆಂಗಳೂರಿನಿಂದ ಸಾಮೂಹಿಕ ವಲಸೆ; ಆತಂಕ ವ್ಯಕ್ತಪಡಿಸಿದ ತಜ್ಞರು
ಬೆಂಗಳೂರು, ಮೇ 11; ಕೋವಿಡ್ 2ನೇ ಅಲೆ ತಡೆಯುವಿಕೆಗೆ ಕರ್ನಾಟಕ ಸರ್ಕಾರ 14 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದೆ. ಇದರಿಂದಾಗಿ ಬೆಂಗಳೂರು ಸೇರಿದಂತೆ ವಿವಿಧ ನಗರದಿಂದ ಜನರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಕೆಲಸ, ಆಹಾರಕ್ಕಾಗಿ ಪರದಾಡುವ ಬದಲು ಊರಿಗೆ ಹೋಗೋಣ ಎಂದು ಜನರು ಲಾಕ್ಡೌನ್ ಘೋಷಣೆಯಾದ ಬಳಿಕ ಸಾಮೂಹಿಕವಾಗಿ ವಲಸೆ ಹೋಗಿದ್ದಾರೆ. ಇದರಿಂದಾಗಿ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುವ ನಿರೀಕ್ಷೆ ಇದೆ.
ನಗರದಿಂದ ವಲಸೆ ಹೋಗಿರುವ ಜನರ ಮೂಲಕ ಗ್ರಾಮಗಳಲ್ಲಿ ಸೋಂಕು ಹರಡಿದರೆ ತಮ್ಮ ಸ್ವಂತ ಊರು ಸಹ ಜನರಿಗೆ ಸುರಕ್ಷಿತವಲ್ಲ ಎಂಬುದು ತಜ್ಞರ ಅಭಿಮತ. ಕೂಲಿ ಕಾರ್ಮಿಕರು ಮಾತ್ರವಲ್ಲ, ಮನೆಯಿಂದ ಕೆಲಸ ಮಾಡುವ ಆಯ್ಕೆ ಸಿಕ್ಕ ಬಳಿಕ ಐಟಿ ಉದ್ಯೋಗಿಗಳು ಸಹ ಊರಿಗೆ ತೆರಳಿದ್ದಾರೆ.

ಲಾಕ್ಡೌನ್ ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, "ಜನರು ನಗರ ಪ್ರದೇಶ ಬಿಟ್ಟು ಹೋಗಬಾರದು. ಇದರಿಂದಾಗಿ ಜಿಲ್ಲೆಗಳಿಗೆ ಸೋಂಕು ಹಬ್ಬಲಿದೆ" ಎಂದು ಮನವಿ ಮಾಡಿದ್ದರು. ಆದರೆ, ಶನಿವಾರ ಮತ್ತು ಭಾನುವಾರ ನೂರಾರು ಸಂಖ್ಯೆಯಲ್ಲಿ ಜನರು ತವರಿಗೆ ಮರಳಿದ್ದಾರೆ.
ಕೆಲವು ಕುಟುಂಬಗಳು ತಮ್ಮ ಎಲ್ಲಾ ವಸ್ತುಗಳನ್ನು ಕಟ್ಟಿಕೊಂಡು ವಾಪಸ್ ನಗರಕ್ಕೆ ಬರುವ ಯೋಜನೆ ಇಲ್ಲದೇ ತೆರಳಿದ್ದಾರೆ. ಆದರೆ, ಕೆಲವು ಜನರು ಕೆಲವು ತಿಂಗಳು ಬಿಟ್ಟು ವಾಪಸ್ ಆಗುವ ಆಲೋಚನೆಯಲ್ಲಿ ಬೆಂಗಳೂರು ನಗರ ಬಿಟ್ಟು ಹೋಗಿದ್ದಾರೆ.
ಜಿಲ್ಲೆಗಳಲ್ಲಿ ಸೋಂಕು ಹಬ್ಬಿದರೂ ನಗರ ಪ್ರದೇಶಕ್ಕಿಂತ ಪರಿಸ್ಥಿತಿ ಭಿನ್ನವಾಗಿರುವುದಿಲ್ಲ. ಜಿಲ್ಲೆ, ತಾಲೂಕುಗಳಲ್ಲಿರುವ ಕೆಲವೇ ಆರೋಗ್ಯ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಬೆಡ್, ಆಕ್ಸಿಜನ್ ಸಮಸ್ಯೆಗಳು ನಗರದಂತೆಯೇ ಇರುತ್ತವೆ.
ಏಪ್ರಿಲ್ ಮೊದಲ ವಾರದಲ್ಲಿ ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಯಿತು. ಆಗಲೇ ಸಾಮೂಹಿಕ ವಲಸೆ ಆರಂಭವಾಯಿತು. ಇದರಿಂದಾಗಿ ಸುಮಾರು 14 ಜಿಲ್ಲೆಗಳಲ್ಲಿ ಸೋಂಕಿತ ಪ್ರಮಾಣ ಹೆಚ್ಚಾಗಿದೆ.
"ಬೆಂಗಳೂರು ನಗರದ ಟ್ರಾವೆಲ್ ಹಿಸ್ಟರಿ ಹೊಂದಿರುವ ಶೇ 80ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ" ಎಂದು ಕೊಡಗು ಜಿಲ್ಲೆಯ ವೈದ್ಯ ಡಾ. ಕಾವೇರಪ್ಪ ಹೇಳಿದ್ದಾರೆ.
ಜಿಲ್ಲೆಗಳಲ್ಲಿ ಹೊಸ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದಂತೆ ಜಿಲ್ಲಾಡಳಿತ ಹಾಸಿಗೆ, ಆಕ್ಸಿಜನ್, ಐಸಿಯು ಬೆಡ್ಗಳನ್ನು ಹೆಚ್ಚಳ ಮಾಡುವ ಪ್ರಕ್ರಿಯೆ ಕೈಗೊಂಡಿದೆ. ಮೇ 24ರ ತನಕ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುತ್ತದೆ.











Click it and Unblock the Notifications