ಪಕ್ಷದ ರೆಬಲ್ ಸ್ಟಾರ್ಗಳಿಗೆ ಎಚ್ಚರಿಕೆ ಕೊಟ್ಟ ಪರಂ!
ಬೆಂಗಳೂರು, ಜನವರಿ 29 : 'ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು ಪಕ್ಷದ ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದರು.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪರಮೇಶ್ವರ ಅವರು, 'ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್, ಬಿಜೆಪಿ ಮಾತ್ರ ಎದುರಾಳಿಗಳಲ್ಲ. ಪಕ್ಷದ ಒಳಗೇ ನಮಗೆ ಎದುರಾಳಿಗಳಿದ್ದಾರೆ. ಆದ್ದರಿಂದ, ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಲಾಗುತ್ತಿದೆ ಎಂದು ಹೇಳಿದರು. [ಮೂವರು ಅಭ್ಯರ್ಥಿಗಳ ಆಯ್ಕೆಗೆ ಸಿಂಗ್ ಬರಬೇಕಿತ್ತೇ?]

ಫೆಬ್ರವರಿ 13ರಂದು ಹೆಬ್ಬಾಳ, ಬೀದರ್ ಮತ್ತು ದೇವದುರ್ಗ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಹೆಬ್ಬಾಳ ಕ್ಷೇತ್ರದಲ್ಲಿ ರೆಹಮಾನ್ ಷರೀಫ್, ದೇವದುರ್ಗ ಕ್ಷೇತ್ರದಲ್ಲಿ ರಾಜಶೇಖರ ನಾಯಕ್ ಹಾಗೂ ಬೀದರ್ ಕ್ಷೇತ್ರದಲ್ಲಿ ರಹೀಂ ಖಾನ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. [ಖರ್ಗೆ ಸೇಡಿನಾಟದಲ್ಲಿ ಸಿದ್ದುಗೆ ಭಾರೀ ಮುಖಭಂಗ!]
ಉಪ ಚುನಾವಣೆಯಲ್ಲಿ ಅನ್ಯ ಪಕ್ಷಗಳ ಜತೆ ಒಳ ಒಪ್ಪಂದ ಮಾಡಿಕೊಂಡು, ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡುವ ನಾಯಕರು ಎಷ್ಟೇ ದೊಡ್ಡವರಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಾಗಿ ಎಚ್ಚರಿಕೆ ನೀಡುವ ಮೂಲಕ ಪರಮೇಶ್ವರ ಅವರು ಬಂಡಾಯದ ಬಾವುಟ ಹಾರಿಸದಂತೆ ನಾಯಕರಿಗೆ ಸೂಚನೆ ರವಾನಿಸಿದ್ದಾರೆ. [ಹೆಬ್ಬಾಳದಲ್ಲಿ ದಿಗ್ಗಜರಿಗೆ ನೀರು ಕುಡಿಸುವರೆ ಚಾಯ್ ವಾಲಾ?]
ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಲ್ಲಿ ಟಿಕೆಟ್ ಪಡೆಯಲು ಭಾರೀ ಪೈಪೋಟಿ ಎದುರಾಗಿತ್ತು. ಎಚ್.ಎಂ.ರೇವಣ್ಣ ಮತ್ತು ಭೈರತಿ ಸುರೇಶ್ ಅವರು ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೈರತಿ ಸುರೇಶ್ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದರು. [3 ಕ್ಷೇತ್ರಗಳ ಉಪ ಚುನಾವಣೆ : ಪಕ್ಷಗಳ ಅಭ್ಯರ್ಥಿಗಳ ಪಟ್ಟಿ]
ಆದರೆ, ಹೈಕಮಾಂಡ್ ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಅವರ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಟಿಕೆಟ್ ನೀಡಿ, ಸಿದ್ದರಾಮಯ್ಯ ಅವರಿಗೂ ಹಿನ್ನಡೆ ಆಗುವಂತೆ ಮಾಡಿತ್ತು. ಇದರಿಂದಾಗಿ ಅಸಮಾಧಾನಗೊಂಡಿರುವ ನಾಯಕರು ಪಕ್ಷದ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡಬಹುದು ಎಂಬ ಹಿನ್ನೆಲೆಯಲ್ಲಿ ಪರಮೇಶ್ವರ ಅವರು ಈ ಸೂಚನೆ ಕೊಟ್ಟಿದ್ದಾರೆ. ಪೆ.13ರಂದು ಮೂರು ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು, ಫೆ.16ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications