ಚಂದ್ರಶೇಖರ್ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು: ಚುನಾವಣೆ ಮುಂದೂಡಲು ಮನವಿ
ಬೆಂಗಳೂರು, ನವೆಂಬರ್ 2: ಚುನಾವಣೆಗೆ ಎರಡು ದಿನ ಬಾಕಿ ಇರುವಾಗ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡಿರುವ ರಾಮನಗರದ ಅಭ್ಯರ್ಥಿ ಎಲ್. ಚಂದ್ರಶೇಖರ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಸೂಚನೆಯಂತೆ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿ ಚಿ.ನಾ ರಾಮು ಅವರು ಗುರುವಾರ ರಾತ್ರಿ ಇ-ಮೇಲ್ ಮೂಲಕ ಚುನಾವಣಾ ಆಯೋಗಕ್ಕೆ ದೂರನ್ನು ರವಾನಿಸಿದ್ದಾರೆ.
ಬಿಜೆಪಿಗೆ 'ಕೈ'ಕೊಟ್ಟ ರಾಮನಗರ ಅಭ್ಯರ್ಥಿ: ಎರಡೇ ದಿನ ಇರುವಾಗ ಕಾಂಗ್ರೆಸ್ ಸೇರ್ಪಡೆ
ಚಂದ್ರಶೇಖರ್ ಅವರು ಬಿಜೆಪಿಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ಚುನಾವಣೆಗೆ ಎರಡು ದಿನ ಇರುವಾಗ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಹೀಗಾಗಿ ಅವರ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಬೇಕು.
ಕಣದಲ್ಲಿರುವ ಅಭ್ಯರ್ಥಿಯೇ ಪಕ್ಷ ಬದಲಾವಣೆ ಮಾಡಿರುವುದರಿಂದ ರಾಮನಗರ ಚುನಾವಣೆಯನ್ನು ಮುಂದೂಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಬೆದರಿಕೆ ಹಾಕಿದ್ದಾರೆ
ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರನ್ನು ಬೆದರಿಸುವ ಮೂಲಕ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಕಾಂಗ್ರೆಸ್ನತ್ತ ಬರುವಂತೆ ಮಾಡಿಕೊಂಡಿದ್ದಾರೆ ಎಂದು ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ರುದ್ರೇಶ್ ಆರೋಪಿಸಿದ್ದಾರೆ.
ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ಅವರಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಅಣ್ಣ ತಮ್ಮಂದಿರ ಮಧ್ಯೆ ಇರಲಾಗದೆ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದರು. ಆದರೆ, ಈಗ ವಾಪಸ್ ಅಲ್ಲಿಗೆ ಹೋಗುವಂತೆ ಮಾಡಿದ್ದಾರೆ ಎಂದು ದೂರಿದರು.
ಕತ್ತುಕೊಯ್ದುಕೊಳ್ಳುತ್ತೇವೆ
ಬಿಜೆಪಿ ಮುಖಂಡರಿಂದ ಮತ್ತು ಕಾರ್ಯಕರ್ತರಿಂದ ಚಂದ್ರಶೇಖರ್ ಅವರಿಗೆ ಯಾವುದೇ ಮೋಸ ಆಗಿಲ್ಲ. ರಾಮನಗರದ ಬಿಜೆಪಿ ಮುಖಂಡರಿಂದ ತಮಗೆ ಮೋಸ ಆಗಿದೆ ಎಂದು ಅವರು ಹೇಳಿದರೆ ನಾವು ಕತ್ತುಕೊಯ್ದುಕೊಂಡು ಸಾಯುತ್ತೇವೆ ಎಂದು ರುದ್ರೇಶ್ ಹೇಳಿದರು.
ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಲು ಚಂದ್ರಶೇಖರ್ ನೀಡಿದ 4 ಕಾರಣ
ಬಿಜೆಪಿ ಗೆದ್ದರೆ...?
ಚಂದ್ರಶೇಖರ್ ಅವರು ಕಾಂಗ್ರೆಸ್ ಸೇರ್ಪಡೆಗೊಂಡು, ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರೂ, ಅವರು ಬಿಜೆಪಿ ಅಭ್ಯರ್ಥಿಯಾಗಿಯೇ ಮುಂದುವರಿಯಲಿದ್ದಾರೆ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಬಲ ಹೆಚ್ಚು ಎಂದೇ ವಿಶ್ಲೇಷಿಸಲಾಗಿದೆ.
ಒಂದು ವೇಳೆ ಬಿಜೆಪಿ ಅಭ್ಯರ್ಥಿ ಗೆದ್ದರೆ ಹೇಗಿರುತ್ತದೆ ಎಂಬ ಚರ್ಚೆಯೂ ನಡೆಯುತ್ತಿದೆ. ಒಂದು ವೇಳೆ ಚಂದ್ರಶೇಖರ್ ಗೆದ್ದರೆ, ಮುಜುಗರ ಅನುಭವಿಸಿರುವ ಬಿಜೆಪಿ ಬೀಗಲಿದೆ. ಕಾಂಗ್ರೆಸ್-ಜೆಡಿಎಸ್ಗೆ ಭಾರಿ ಮುಖಭಂಗವಾಗಲಿದೆ. ಗೆದ್ದರೂ ಪಕ್ಷ ಬದಲಿಸಿರುವುದರಿಂದ ಚಂದ್ರಶೇಖರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಆದರೆ, ಈ ರೀತಿ ಫಲಿತಾಂಶ ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗುತ್ತಿದೆ.
ರಾಮನಗರ ಚುನಾವಣೆ : ಕಾಂಗ್ರೆಸ್ ನಾಯಕರಿಗೆ ಪ್ರಚಾರಕ್ಕೆ ಆಸಕ್ತಿಯೇ ಇಲ್ಲ!
ಅನಿತಾಗೆ ಸೋಲುವ ಭಯ
ರಾಮನಗರದ ಅಭ್ಯರ್ಥಿಯನ್ನು ಅಳೆದು ತೂಗಿ ಆಯ್ಕೆ ಮಾಡಬೇಕಿತ್ತು. ಅನಿತಾ ಕುಮಾರಸ್ವಾಮಿ ಅವರು ಹೋದ ಕಡೆಯಲ್ಲ ಜನರು ಅವರ ವಿರುದ್ಧ ಕಿಡಿಕಾರಿದ್ದರು. ಇದರಿಂದ ಅವರಿಗೆ ಸೋಲುವ ಭಯ ಉಂಟಾಗಿತ್ತು. ಹೀಗಾಗಿ ಚಂದ್ರಶೇಖರ್ ಅವರಿಗೆ ಆಮಿಷವೊಡ್ಡಿ ಪಕ್ಷಕ್ಕೆ ಸೆಳೆದುಕೊಂಡಿದ್ದಾರೆ ಎಂದು ರುದ್ರೇಶ್ ಆರೋಪ ಮಾಡಿದ್ದಾರೆ.
ರಾಮನಗರ ಚುನಾವಣೆ : ಎಲ್.ಚಂದ್ರಶೇಖರ್ ಬಿಜೆಪಿ ಅಭ್ಯರ್ಥಿ ಆಗಿದ್ದು ಹೇಗೆ?