ಬಿಜೆಪಿಗೆ 'ಕೈ'ಕೊಟ್ಟ ರಾಮನಗರ ಅಭ್ಯರ್ಥಿ: ಎರಡೇ ದಿನ ಇರುವಾಗ ಕಾಂಗ್ರೆಸ್ ಸೇರ್ಪಡೆ
Recommended Video

ರಾಮನಗರ, ನವೆಂಬರ್ 1: ಚುನಾವಣೆಯ ಹೊಸ್ತಿಲಿನಲ್ಲಿಯೇ ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಭಾರಿ ಆಘಾತ ಎದುರಾಗಿದೆ.
ಚುನಾವಣೆಗೆ ಕೇವಲ ಎರಡೇ ದಿನ ಬಾಕಿ ಇರುವಾಗಲೇ ರಾಮನಗರ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಮರಳಿ ಸೇರ್ಪಡೆಗೊಂಡು ಬಿಜೆಪಿ ಭಾರಿ ಮುಖಭಂಗ ಉಂಟುಮಾಡಿದ್ದಾರೆ. ಈ ಮೂಲಕ ಉಪ ಚುನಾವಣೆಗೆ ಭಾರಿ ಟ್ವಿಸ್ಟ್ ಸಿಕ್ಕಿದೆ.
ರಾಮನಗರದಲ್ಲಿ ಜೆಡಿಎಸ್ಗೆ ಬೆಂಬಲ ನೀಡುವ ಕಾಂಗ್ರೆಸ್ ತೀರ್ಮಾನವನ್ನು ವಿರೋಧಿಸಿ ತಿಂಗಳ ಹಿಂದಷ್ಟೇ ಬಿಜೆಪಿ ಸೇರ್ಪಡೆಗೊಂಡು, ಅದರ ಅಭ್ಯರ್ಥಿಯಾಗಿಯೂ ಕಣಕ್ಕೆ ಇಳಿದಿದ್ದ ಚಂದ್ರಶೇಖರ್ ಬಿಜೆಪಿಗೆ 'ಕೈ' ಕೊಟ್ಟು ಮತ್ತೆ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ.
ಕಾಂಗ್ರೆಸ್ನ ಪ್ರಮುಖ ಮುಖಂಡನನ್ನೇ ಪಕ್ಷಕ್ಕೆ ಸೆಳೆದುಕೊಂಡು ಸಮ್ಮಿಶ್ರ ಸರ್ಕಾರದ ವಿರುದ್ಧದ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಕಾಂಗ್ರೆಸ್ಗೆ ಮುಜುಗರ ಉಂಟು ಮಾಡಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ, ಈಗ ಅದರ ಬಾಣವೇ ಹಿಂದಿರುಗಿ ಬಂದು ಬಿಜೆಪಿಗೆ ತಗುಲಿದೆ.
ಬೆಂಗಳೂರಿನ ಸದಾಶಿವನಗರದಲ್ಲಿ ಸಂಸದ ಡಿ.ಕೆ. ಸುರೇಶ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಚಂದ್ರಶೇಖರ್, ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಾಗಿ ಘೋಷಿಸಿದ್ದಾರೆ.

ಮರಳಿ ಕಾಂಗ್ರೆಸ್ ಸೇರ್ಪಡೆ
ನಾನು ಮೂಲತಃ ಕಾಂಗ್ರೆಸ್ಸಿಗ. ಬಿಜೆಪಿಯಿಂದ ಟಿಕೆಟ್ ಕೊಟ್ಟರು, ಕೈಯಲ್ಲಿ ಬಾವುಟ ಇಟ್ಟರು, ಆದರೆ ಯಾರೂ ನನ್ನ ಪರ ಪ್ರಚಾರಕ್ಕೆ ಬರಲಿಲ್ಲ. ಹೀಗಾಗಿ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿದ್ದೇನೆ. ಮರಳಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದೇನೆ., ಇದಕ್ಕೆಲ್ಲ ಸಿಪಿ ಯೋಗೇಶ್ವರ್ ಕಾರಣ. ಅವರು ಎಲ್ಲಿಯೂ ಕುಳಿತು ಸುದ್ದಿಗೋಷ್ಠಿ ಮಾಡುತ್ತಾರೆ. ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಬಿಜೆಪಿಯ ಸಹವಾಸವೇ ಬೇಡ ಎಂದು ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಾಗಿ ತಿಳಿಸಿದರು.

ಒಬ್ಬರನ್ನೊಬ್ಬರು ಕಂಡರಾಗದು
ಬಿಜೆಪಿಯಲ್ಲಿ ಒಬ್ಬರನ್ನೊಬ್ಬರಿಗೆ ಕಂಡರೆ ಆಗುವುದಿಲ್ಲ. ಬಿಜೆಪಿಯಿಂದ ಟಿಕೆಟ್ ಕೊಟ್ರು, ಕೈಯಲ್ಲಿ ಬಾವುಟ ಇಟ್ಟರು. ಸಿಪಿ ಯೋಗೇಶ್ವರ್ ಕರೆದುಕೊಂಡು ಬಂದರು. ಆದರೆ ನನ್ನ ಪರವಾಗಿ ಯಡಿಯೂರಪ್ಪ ಪ್ರಚಾರಕ್ಕೆ ಬರಲೇ ಇಲ್ಲ. ಬಿಜೆಪಿಯಲ್ಲಿ ಒಬ್ಬರನ್ನೊಬ್ಬರಿಗೆ ಕಂಡರೆ ಆಗುವುದಿಲ್ಲ. ಅವರಿಗೆ ಕರೆ ಮಾಡಿದರೂ ಸ್ಪಂದಿಸಲಿಲ್ಲ. ಯಾರೂ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಎಲ್ಲ ಮುಖಂಡರೂ ಶಿವಮೊಗ್ಗ, ಬಳ್ಳಾರಿ, ಮಂಡ್ಯಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ.

15 ದಿನದಲ್ಲೇ ಬಂಡವಾಳ ಗೊತ್ತಾಯಿತು
ಸದಾನಂದಗೌಡರು ಸುಮ್ನೆ ಬಂದು ಸುದ್ದಿಗೋಷ್ಠಿ ಮಾಡುತ್ತಾರೆ. ಚುನಾವಣೆ ಮುಗಿದ ಬಳಿಕ ಸರ್ಕಾರ ಬೀಳಿಸುವುದಾಗಿ ಸಿಪಿ ಯೋಗೀಶ್ವರ್ ಹೇಳಿದ್ದರು. ನಮ್ಮ ಜತೆ ಹತ್ತು ಜನ ಇದ್ದಾರೆ ಎಂದು ತಿಳಿಸಿದ್ದರು. ಚುನಾವಣೆಯ ಸಂಪೂರ್ಣ ಖರ್ಚು ವೆಚ್ಚ ನೋಡಿಕೊಳ್ಳುವುದಾಗಿ ಹೇಳಿದ್ದರು. ಆರ್. ಅಶೋಕ್ ಮಂಡ್ಯ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗುತ್ತಾರೆ. ಆದರೆ ರಾಮನಗರದಲ್ಲಿ ಗಾಡಿಯನ್ನೇ ನಿಲ್ಲಿಸುವುದಿಲ್ಲ. ಸದಾನಂದಗೌಡ ಮತ್ತು ಯೋಗೀಶ್ವರ್ ಅವರಿಗೆ ಪರಸ್ಪರ ಆಗುವುದಿಲ್ಲ. ಬಿಎಸ್ ಯಡಿಯೂರಪ್ಪ ನನ್ನ ಬಳಿ ಒಮ್ಮೆಯೂ ಮಾತನಾಡಿಲ್ಲ. ಹದಿನೈದು ದಿನಲ್ಲಿಯೇ ಬಿಜೆಪಿಯ ಬಂಡವಾಳ ಗೊತ್ತಾಗಿದೆ ಎಂದು ಚಂದ್ರಶೇಖರ್ ಹೇಳಿದರು.

ಯಡಿಯೂರಪ್ಪ ಗರಂ
ಚಂದ್ರಶೇಖರ ಅವರ ನಡೆ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು ತೀವ್ರ ಸಿಟ್ಟಿಗೇಳಿಸಿದೆ. ಶಿವಮೊಗ್ಗದ ಶಿಕಾರಿಪುರದಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ನವರು ಚಂದ್ರಶೇಖರ್ ಅವರನ್ನು ಹಣಕೊಟ್ಟು ಖರೀದಿ ಮಾಡಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ' ಎಂದು ಕೋಪದಿಂದ ಹೇಳಿದರು. ಮಾಧ್ಯಮಗಳ ಮುಂದೆ ಹೆಚ್ಚು ಮಾತನಾಡದೆ ಅಲ್ಲಿಂದ ಹೊರಟರು.

ಕಾರ್ಯಕರ್ತರು ಕಂಗಾಲು
ರಾಮನಗರ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರು ಜಮಾಯಿಸಿದ್ದಾರೆ. ಇಷ್ಟು ದಿನ ಚಂದ್ರಶೇಖರ್ ಅವರ ಪರ ಪ್ರಚಾರಕ್ಕಾಗಿ ಓಡಾಡಿದ್ದ ಪಕ್ಷದ ಕಾರ್ಯಕರ್ತರು ಈಗ ಕಂಗಾಲಾಗಿದ್ದಾರೆ. ಸ್ಥಳೀಯ ಮುಖಂಡರು ಕೂಡ ತೀವ್ರ ಮುಜುಗರಕ್ಕೆ ಸಿಲುಕಿದ್ದಾರೆ. ಕೆಲವು ಅಸಮಾಧಾನಗಳ ನಡುವೆಯೂ ಸ್ಥಳೀಯ ಮುಖಂಡರು ಚಂದ್ರಶೇಖರ್ ಅವರಿಗೆ ಬೆಂಬಲ ನೀಡಲು ಮುಂದಾಗಿದ್ದರು.












Click it and Unblock the Notifications