ಆರಿದ್ರಾ ಲಗ್ನದಲ್ಲಿ ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯಲ್ಲಿ ಅಚ್ಚರಿ
ಬೆಂಗಳೂರು, ಫೆಬ್ರವರಿ 05: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಫೆ. 6ರಂದು ಜ್ಯೋತಿಷಿಗಳ ಸಲಹೆ ಮೇರೆಗೆ ಆರಿದ್ರಾ ನಕ್ಷತ್ರದ ಲಗ್ನದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಕಾರ್ಯವನ್ನು ರಾಜಭವನದಲ್ಲಿ ನಡೆಸಲು ಬಿಜೆಪಿ ಹೈಕಮಾಂಡ್ ನಾಯಕರು ಸಮ್ಮತಿಸಿದ್ದಾರೆ. ಸಂಪುಟ ಸೇರ್ಪಡೆಗೊಳ್ಳುವವರ ಹೆಸರು, ಸಮಯ ಮತ್ತು ಸಂಭಾವ್ಯ ಪಟ್ಟಿ ಸಿದ್ಧವಾಗಿದೆ. ಸಂಪುಟದಲ್ಲಿ ಯಾರಿಗೆ ಯಾವ ಖಾತೆ ಸಿಗಬಹುದು ಎಂಬ ಸಂಭಾವ್ಯ ಪಟ್ಟಿ ಇಲ್ಲಿದೆ...
ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿ ಅನರ್ಹಗೊಂಡು ಮತ್ತೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಳಿಸಿ ಸ್ಪರ್ಧಿಸಿ ಗೆದ್ದು ಶಾಸಕರಾಗಿರುವ ರಮೇಶ್ ಜಾರಕಿ ಹೊಳಿ, ಗೋಪಾಲಯ್ಯ, ಎಸ್.ಟಿ. ಸೋಮಶೇಖರ್, ನಾರಾಯಣ ಗೌಡ, ಶ್ರೀಮಂತ್ ಪಾಟೀಲ್, ಶಿವರಾಂ ಹೆಬ್ಬಾರ್, ಆನಂದ್ ಸಿಂಗ್, ಕೆ. ಸುಧಾಕರ್ ಹಾಗೂ ಬಿ.ಸಿ. ಪಾಟೀಲ್ ಮಂತ್ರಿಯಾಗಲಿದ್ದಾರೆ. ಮಹೇಶ್ ಕುಮಟಳ್ಳಿ ಅವಕಾಶ ವಂಚಿತರಾಗುತ್ತಿದ್ದಾರೆ. 10+ 3 ಫಾರ್ಮೂಲಾ ಖಚಿತವಾಗಿದ್ದು, ವಲಸಿಗರು 10 ಶಾಸಕರು ಹಾಗೂ ಮೂಲ ಬಿಜೆಪಿಗರು 3 ಮಂದಿಗೆ ಅವಕಾಶ ಸಿಗಲಿದೆ.
ಬಿಜೆಪಿಯ ಹಿರಿಯ ನಾಯಕರು ಮತ್ತು ಶಾಸಕರಾದ ಬೆಳಗಾವಿಯ ಉಮೇಶ್ ಕತ್ತಿ, ಸಿಪಿ ಯೋಗೇಶ್ವರ್ ಹೆಸರು ಖಚಿತವಾಗಿದ್ದು, ಮತ್ತೊಂದು ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಅಂಗಾರ, ಬಸನಗೌಡ ಪಾಟೀಲ್ ಯತ್ನಾಳ್, ಚಿತ್ರದುರ್ಗ ಜಿಲ್ಲೆಯ ತಿಪ್ಪಾರೆಡ್ಡಿ, ಹಾಲಪ್ಪ ಆಚಾರ್ ಹೆಸರು ಚಾಲ್ತಿಯಲ್ಲಿದೆ. ಆರ್ ಶಂಕರ್ ಅವರು ಎಂಎಲ್ಸಿ ಆದ ಬಳಿಕ ಸಚಿವ ಸ್ಥಾನ ಖಾತ್ರಿಯಾಗಲಿದೆ.

ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ
ಮುಖ್ಯಮಂತ್ರಿ ಯಡಿಯೂರಪ್ಪರನ್ನು ಸೇರಿಸಿದಂತೆ 18 ಸಚಿವರುಗಳು ಸಚಿವ ಸಂಪುಟದಲ್ಲಿದ್ದಾರೆ. ಒಟ್ಟು 34 ಸ್ಥಾನಗಳ ತನಕ ಕ್ಯಾಬಿನೆಟ್ ಗರಿಷ್ಠ ಮಿತಿಯಿದೆ. ಸದ್ಯ 16 ಸ್ಥಾನಗಳು ಬಾಕಿ ಉಳಿದಿವೆ. 15 ಕ್ಷೇತ್ರಗಳಲ್ಲಿನ ಫಲಿತಾಂಶದ ನಂತರ ಇತ್ತೀಚೆಗೆ ಬಿಜೆಪಿ ಸೇರಿದವರ ಪೈಕಿ ಗೆದ್ದವರೆಲ್ಲರಿಗೂ ಸಚಿವ ಸ್ಥಾನ ಖಾತ್ರಿಯಾಗಿದೆ. ಸೋಲು ಅನುಭವಿಸಿದವರಿಗೆ ಸಚಿವ ಸ್ಥಾನ ಬೇಡ ಎಂದು ಬಿಜೆಪಿ ಹೈಕಮಾಂಡ್ ಸೂಚಿಸಿದೆ. ಹೀಗಾಗಿ, ಎಚ್ ವಿಶ್ವನಾಥ್, ಎಂಟಿಬಿ ನಾಗರಾಜ್ ಅವಕಾಶ ವಂಚಿತರ ಪಟ್ಟಿ ಸೇರಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಈಗ 117ಕ್ಕೇರಿದೆ.

ಸೋತವರ ಕಥೆ ಏನು? ಮುಂದಿನ ನಡೆಯೇನು?
ಸೋತವರ ಕಥೆ ಏನು? ಚುನಾವಣೆಯಲ್ಲಿ ಸೋತಿರುವ ಎಚ್. ವಿಶ್ವನಾಥ್ ಮತ್ತು ಎಂ.ಟಿ.ಬಿ. ನಾಗರಾಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ವಲಸೆ ಬಂದಿರುವ ಶಾಸಕರ ದಂಡು ಬಿ.ಎಸ್ ಯಡಿಯೂರಪ್ಪರನ್ನು ಆಗ್ರಹಿಸುತ್ತಲೇ ಇದೆ. ಈ ಮೊದಲಿನ ತೀರ್ಮಾನದಂತೆ ರಮೇಶ್ ಜಾರಕಿಹೊಳಿ ಮತ್ತು ವಿಶ್ವನಾಥ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಬೇಡಿಕೆಯೂ ಬಲವಾಗಿ ಕೇಳಿ ಬಂದಿದೆ. ಆದರೆ, ಸದ್ಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಯಾರಿಗೂ ಇಲ್ಲ ಎಂಬುದು ಹೈಕಮಾಂಡ್ ಹೊರಡಿಸಿದ ಆಜ್ಞೆಯಾಗಿದೆ.

ಯಡಿಯೂರಪ್ಪ ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆ
ಯಡಿಯೂರಪ್ಪ ತಮ್ಮ ಬಳಿ 20ಕ್ಕೂ ಹೆಚ್ಚು ಖಾತೆ ಉಳಿಸಿಕೊಂಡಿದ್ದಾರೆ. ಅತೃಪ್ತರಾಗಿ ಅನರ್ಹರಾಗಿ, ಮುಂದೆ ಬಿಜೆಪಿ ಸೇರಿದ ನೂತನ ಶಾಸಕರಿಗೆ ಈ ಖಾತೆಗಳು ಮೀಸಲಾಗಿಡಲಾಗಿದೆ. ಇಂಧನ, ಜಲಸಂಪನ್ಮೂಲ, ಕೃಷಿ, ರೇಷ್ಮೆ, ತೋಟಗಾರಿಕೆ, ನಗರಾಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ, ಅರಣ್ಯ, ಸಹಕಾರ, ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ, ಪೌರಾಡಳಿತ, ಹಣಕಾಸು, ವೈದ್ಯಕೀಯ ಶಿಕ್ಷಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಮೂಲಸೌಕರ್ಯ, ಆಹಾರ, ಕಾರ್ವಿುಕ, ಕೌಶಲಾಭಿವೃದ್ಧಿ, ಕಾರ್ವಿುಕ, ಅಲ್ಪಸಂಖ್ಯಾತ ಕಲ್ಯಾಣ, ಡಿಪಿಎಆರ್, ಗುಪ್ತವಾರ್ತೆ ಖಾತೆ ಸಿಎಂ ಬಳಿಯಿವೆ

ಯಾರಿಗೆ ಯಾವ ಖಾತೆ ಸಿಗಬಹುದು
ರಮೇಶ್ ಜಾರಕಿಹೊಳಿ: ಸಕ್ಕರೆ, ಜಲಸಂಪನ್ಮೂಲ ಖಾತೆ?
ಬೈರತಿ ಬಸವರಾಜ್: ಇಂಧನ / ಕಾರ್ಮಿಕ ಮತ್ತು ಕೌಶಲಾಭಿವೃದ್ಧಿ ಖಾತೆ
ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ. ಗೋಪಾಲಯ್ಯ-ಪೌರಾಡಳಿತ
ಡಾ. ಸುಧಾಕರ್: ವೈದ್ಯಕೀಯ ಶಿಕ್ಷಣ, ಆರೋಗ್ಯ
ಶಿವರಾಂ ಹೆಬ್ಬಾರ್: ತೋಟಗಾರಿಕೆ, ಒಳನಾಡು ಹಾಗೂ ಬಂದರು.
ಆನಂದ್ ಸಿಂಗ್: ಗಣಿ ಮತ್ತು ಭೂ ವಿಜ್ಞಾನ/ಪ್ರವಾಸೋದ್ಯಮ.
ಎಸ್. ಟಿ ಸೋಮಶೇಖರ್: ನಗರಾಭಿವೃದ್ಧಿ
ಮಹೇಶ್ ಕುಮಟಳ್ಳಿ: ಯುವಜನ ಮತ್ತು ಕ್ರೀಡಾ ಇಲಾಖೆ ---ಸಿಪಿವೈ
ನಾರಾಯಣಗೌಡ: ಸಣ್ಣ ಕೈಗಾರಿಕೆ.
ಬಿ. ಸಿ ಪಾಟೀಲ್: ಆಹಾರ, ನಾಗರಿಕ ಪೂರೈಕೆ ಮತ್ತು ಬಂದಿಖಾನೆ
ಆರ್ ಶಂಕರ್: ಅರಣ್ಯ -ವಿಳಂಬ(ನಾಳೆಗೆ ಇಲ್ಲ)
ಶ್ರೀಮಂತ ಪಾಟೀಲ್: ರೇಷ್ಮೆ
ಉಮೇಶ್ ಕತ್ತಿ: ಸಹಕಾರಿ












Click it and Unblock the Notifications