BS Yediyurappa ಮನೆ ಮೇಲೆ ದಾಳಿ: ಯಾರ 'ಸಂತೋಷ'ದ ಕಾರಣಕ್ಕೆ? ಬಿಎಲ್ ಸಂತೋಷ್ ಗುರಿಯಾಗಿಸಿ ಕಾಂಗ್ರೆಸ್ ಟ್ವೀಟ್
ಬೆಂಗಳೂರು, ಮಾರ್ಚ್ 28: ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪ ಮನೆ ಮೇಲೆ ದಾಳಿ ನಡೆದ ವಿಚಾರವೀಗ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಇದು ಕಾಂಗ್ರೆಸ್ನ ಕೆಲಸವೆಂದು ಬಿಜೆಪಿ ಹೇಳಿದರೆ, ಬಿಎಸ್ವೈ ಮುಗಿಸಲು ಬಿಜೆಪಿಯೇ ಕುತಂತ್ರ ರೂಪಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಸೋಮವಾರ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ರಾಜ್ಯ ಘಟಕವು, 'ಬಿಜೆಪಿ ಮಾಡುವ ಅವಾಂತರಗಳಿಗೆ ಬಿಜೆಪಿಯೇ ಶಿಕ್ಷೆ ಅನುಭವಿಸಲಿದೆ ಎಂಬುದು ಬಿಎಸ್ ಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲೆಸೆತವೇ ಉದಾಹರಣೆಯಾಗಿದೆ. ತಳಸಮುದಾಯಗಳಿಗೆ ದ್ರೋಹವೆಸಗುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಮೂಗಿಗೆ ತುಪ್ಪ ಸವರುವ ಕುತಂತ್ರ ಕರ್ನಾಟಕದ ಜನರಿಗೆ ಅರ್ಥವಾಗಿದೆ. ಸ್ವತಃ ಬಿಜೆಪಿಯ ಸಚಿವರೇ ಮೀಸಲಾತಿ ಅವಾಂತರದ ವಿರುದ್ಧ ನಿಂತಿರುವುದು ಕೇಸರಿ ಪಕ್ಷದ ಎಡಬಿಡಂಗಿ ನೀತಿಗೆ ಸಾಕ್ಷಿ' ಎಂದು ಟೀಕಿಸಿದೆ.

ಮೂಗಿಗೆ ತುಪ್ಪ ಸವರುವ ಬಿಜೆಪಿ ಸರ್ಕಾರದ ನವರಂಗಿ ಆಟಕ್ಕೆ ಜನ ಬ್ರೇಕ್ ಹಾಕುವುದು ನಿಶ್ಚಿತ ಎಂದಿರುವ ಕೆಪಿಸಿಸಿ, 'ಇದು ಕೇವಲ ಟ್ರೇಲರ್ ಅಷ್ಟೇ, ಪಿಚ್ಚರ್ ಮುಂದಿದೆ ಎನ್ನುತ್ತಿದೆ ಬಂಜಾರ ಸಮುದಾಯ, ಪಿಚ್ಚರ್ ನೋಡಲು ತಯಾರಿದ್ದೀರಾ ಬಸವರಾಜ ಬೊಮ್ಮಾಯಿ ಅವರೇ? ಬಿಜೆಪಿ ಜನರತ್ತ ದ್ರೋಹದ ಕಲ್ಲೆಸೆದರೆ, ಜನರ ಕಡೆಯಿಂದಲೂ ಕಲ್ಲು ತೂರಿ ಬರುತ್ತವೆ' ಎಂದೂ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
'ಮೋದಿ ಬಂದು ಕೈ ಬೀಸಿ ಹೋದರೆ ಕನ್ನಡಿಗರಿಗೆ ಬರೆ ಎಳೆದರೆಂದೇ ಅರ್ಥ ಎಂದು ಮೊದಲೇ ಹೇಳಿದ್ದೆವು. ನರೇಂದ್ರ ಮೋದಿ ಅವರೇ, ತಾವು ಬಂದು ಬಂಜಾರ ಸಮುದಾಯದ ನಿಮ್ಮ ಮಗ ದೆಹಲಿಯಲ್ಲಿ ಕುಳಿತಿದ್ದಾನೆ ಎಂದು ಹೇಳಿ ಹೋದ ನಂತರ ಇಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿದೆ, ಕಲ್ಲು ತೂರಾಟ ನಡೆದಿದೆ. ದೆಹಲಿಯಲ್ಲಿ ಕುಳಿತ ಮಗ ಬಂಜಾರರಿಗೆ ಕೈ ಕೊಟ್ಟನೇ' ಎಂದೂ ಕೆಪಿಸಿಸಿ ಟ್ವೀಟ್ ಮಾಡಿದೆ.

'ಬಿಜೆಪಿಯ ನಕಲಿ ಚುನಾವಣಾ ತಂತ್ರಗಳು ತಿರುಗು ಬಾಣವಾಗಿ ಬಿಜೆಪಿಯನ್ನೇ ಅಟ್ಟಾಡಿಸುತ್ತಿದೆ. ಬಂಜಾರಾ ಸೇರಿದಂತೆ ಹಲವು ಸಮುದಾಯಗಳು ಸರ್ಕಾರದ ವಿರುದ್ದ ಸಿಡಿದು ನಿಲ್ಲುವ ಮೂಲಕ ಬಿಜೆಪಿಯ ಅವನತಿಗೆ ಮುನ್ನುಡಿ ಬರೆಯುವುದು ನಿಶ್ಚಿತ. ಬಸವರಾಜ ಬೊಮ್ಮಾಯಿ ಅವರೇ, ಸಾಧನೆ, ಯೋಜನೆ ತೋರಿಸದೆ, ಮೂಗಿಗೆ ತುಪ್ಪ ಸವರುವ ರಾಜಕಾರಣವನ್ನು ಜನತೆ ತಿರಸ್ಕರಿಸಿದ್ದಾರೆ' ಎಂದೂ ಕಾಂಗ್ರೆಸ್ ಆರೋಪಿಸಿದೆ.
'ಗೃಹಸಚಿವರ ತವರು ಜಿಲ್ಲೆಯಲ್ಲಿ ಮಾಜಿ ಸಿಎಂ ಮನೆಗೆ ರಕ್ಷಣೆ ಇಲ್ಲವೆಂದರೆ ಏನರ್ಥ. ಗುಪ್ತಚರ ಇಲಾಖೆ ಯಾವ ಬಿಲದಲ್ಲಿ ಗೆಣಸನ್ನು ಹುಡುಕುತ್ತಿತ್ತು? ಅರಗ ಜ್ಞಾನೇಂದ್ರ ಅವರೇ? ಇದು ಕಾನೂನು ಸುವ್ಯವಸ್ಥೆಯ ವೈಫಲ್ಯವೇ ಅಥವಾ ಷಡ್ಯಂತ್ರವೇ? ಮೀಸಲಾತಿ ಅವಾಂತರಕ್ಕೆ ಹೊಣೆಗಾರರಲ್ಲದ BSYರ ಮನೆ ಮೇಲೆ ದಾಳಿ ಮಾಡಿದ್ದು ಯಾರ "ಸಂತೋಷ" ದ ಕಾರಣಕ್ಕೆ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಗುರಿಯಾಗಿದೆ.

ಮಾಡಾಳ್ ಬಂಧನ: ಬಿಜೆಪಿ ಸಿಕ್ಕ ಆಸ್ಕರ್ ಅವಾರ್ಡ್
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನದ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಇದು ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಿಕ್ಕಿರುವ ಆಸ್ಕರ್ ಅವಾರ್ಡಿನಂತೆ ಎಂದು ಟೀಕಿಸಿದೆ.
'ಮಾಡಾಳ್ ವಿರೂಪಾಕ್ಷಪ್ಪರ ಬಂಧನ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಿಕ್ಕಿರುವ ಆಸ್ಕರ್ ಅವಾರ್ಡಿನಂತೆ. #40percentsarkara ಭ್ರಷ್ಟರ ರಕ್ಷಣೆಯ ಪ್ರಯತ್ನದ ಹೊರತಾಗಿಯೂ ಈ ಬಂಧನವಾಗಿದ್ದು ಬಿಜೆಪಿಯ ಭ್ರಷ್ಟಾಚಾರದ ಪಾಪದ ಕೊಡ ತುಂಬಿರುವುದಕ್ಕೆ ಸಾಕ್ಷಿ. ಇಂಥಹ ಕಡುಭ್ರಷ್ಟ ಬಿಜೆಪಿಗೆ ಮತ ಕೇಳಲು ಜನರ ಮುಂದೆ ಹೋಗಲು ಯಾವುದೇ ನೈತಿಕ ಹಕ್ಕೂ ಇಲ್ಲ' ಎಂದು ಟ್ವೀಟ್ ಮಾಡಿದೆ.
'ಬಿಜೆಪಿಯ ಹಿಂದಿನ ಅಧಿಕಾರವಧಿಯಲ್ಲಿ ಸಿಎಂ ಸೇರಿ ಸಾಲು ಸಾಲಾಗಿ ಬಿಜೆಪಿಗರು ಪರಪ್ಪನ ಅಗ್ರಹಾರಕ್ಕೆ ಅತಿಥಿಗಳಾಗಿದ್ದರು. ಈಗ ಮಾಡಾಳ್ರಿಂದ ಮತ್ತೆ ಬಿಜೆಪಿಯ ಜೈಲು ಪರ್ವ ಶುರುವಾಗಿದೆ. ಕಾಕಂಬಿ ಹಗರಣದ ಪ್ರಾಮಾಣಿಕ ತನಿಖೆ ನಡೆದರೆ ಮಾಡಾಳ್ರಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರೂ ಜೈಲಿನ ಸಂಗಾತಿಯಾಗಿ ಹೋಗಬೇಕಾಗುತ್ತದೆ' ಎಂದೂ ಕಾಂಗ್ರೆಸ್ ಹೇಳಿದೆ.












Click it and Unblock the Notifications