ಯಡಿಯೂರಪ್ಪ ಸಿಎಂ ಆಗ್ತಾರೆ ಎಂದಿದ್ದ ಕೇರಳ ಜ್ಯೋತಿಷಿ ಮಾತು ನಿಜವಾಗುತ್ತಾ?
Recommended Video

ಬೆಂಗಳೂರು, ಜನವರಿ 18: "ಸಂಕ್ರಾಂತಿ ನಂತರ ನಿಮಗೆ ಒಳ್ಳೆಯ ದೆಸೆ ಇದೆ. ನೀವು ಮತ್ತೆ ಮುಖ್ಯಮಂತ್ರಿಯಾಗ್ತೀರಾ..." ಎಂದಿದ್ದ ಕೇರಳದ ಜ್ಯೋತಿಷಿಯೊಬ್ಬರ ಮಾತು ಬಿಜೆಪಿ ಶಾಸಕರನ್ನೆಲ್ಲ ಗುರುಗ್ರಾಮದ ರೆಸಾರ್ಟ್ ವರೆಗೆ ಕರೆದೊಯ್ದಿದೆ!
ಆದರೆ 'ಆಪರೇಶನ್' ಫೇಲ್ಯೂರ್ ಆಗಿ, ಬಿಜೆಪಿಗೆ ಭ್ರಮನಿರಸನವಾಗಿದೆಯಾದರೂ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಲ್ಲಿ ಮಾತ್ರ ಭರವಸೆ ಬತ್ತಿಲ್ಲ. ತಾವು ಮುಖ್ಯಮಂತ್ರಿಯಾಗಿಯೇ ಆಗುತ್ತೇನೆ ಎಂಬ ವಿಶ್ವಾಸದಿಂದ ಅವರು ಕಾರ್ಯತಂತ್ರ ರೂಪಿಸುತ್ತಲೇ ಇದ್ದಾರೆ.
ರಾಜ್ಯ ರಾಜಕೀಯದಲ್ಲಿ ಅತೃಪ್ತರ ಬಂಡಾಯ, ಬ್ರೇಕಪ್ ಸೂಚನೆ, ಮತ್ತೆ ರಾಜಿ, ತೇಪೆ ಮತ್ತು ಬಂಡಾಯ ಶಮನ... ಇವೆಲ್ಲ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಲಾಗಾಯ್ತೂ ಮಾಮೂಲಾಗಿದೆ. ಈ ಬಾರಿ ಸಂಕ್ರಾಂತಿಯ ಗಡುವು ಮುಗಿದರೂ, ಜನವರಿ 19 ರಂದು ರಾಜ್ಯ ರಾಜಕಾರಣದಲ್ಲಿ ಮಹತ್ವದ ಘಟನೆ ಘಟಿಸಲಿದೆ ಎನ್ನಲಾಗುತ್ತದೆ. ಜ.18 ರಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಯಡಿಯೂರಪ್ಪ ಅವರ ಮುಖ್ಯಮಂತ್ರಿ ಹುದ್ದೆಯ ಕನಸಿಗೆ ಈ ಎಲ್ಲಾ ವಿದ್ಯಮಾನಗಳೂ ನೀರೆರೆಯುತ್ತವೋ, ನೆಲಸಮವಾಗುವಂತೆ ಮಾಡುತ್ತವೋ ಎಂಬುದು ಸದ್ಯದಲ್ಲೇ ತಿಳಿಯಲಿದೆ.

ಸಂಕ್ರಾಂತಿ ನಂತರ ಶುಭಶಕುನ!
ಕೇರಳದ ಪ್ರಸಿದ್ಧ ಜ್ಯೋತಿಷಿಯೊಬ್ಬರು ಬಿ ಎಸ್ ಯಡಿಯೂರಪ್ಪ ಅವರ ಅದೃಷ್ಟ ಸಂಕ್ರಾಂತಿಯ ನಂತರ ಕುದುರಲಿದ್ದು, ಅವರು ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದಿದ್ದಾರೆ. ಇದುವರೆಗೂ ಆ ಜ್ಯೋತಿಷಿ ಆಡಿದ ಮಾತುಗಳಲ್ಲಿ ಬಹುಪಾಲು ಸತ್ಯವಾಗಿರುವುದರಿಂದ ಯಡಿಯೂರಪ್ಪ ಅವರ ಮನಸ್ಸಲ್ಲಿ ಮತ್ತೆ ಮುಖ್ಯಮಂತ್ರಿಯಾಗುವ ಕನಸು ಮೊಳೆತಿದೆ.

ಜನವರಿ 19 ರಂದು ಏನಾಗಲಿದೆ?
ಜನವರಿ 19 ರಂದು ಕಾಂಗ್ರೆಸ್ ನ 19 ಶಾಸಕರನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ಕಾರ್ಯತಂತ್ರರೂಪಿಸಿದೆ. ಈ ಮಿಶನ್ ನ ಹೆಸರೇ 19-19-19! ಜನವರಿ 19 , 2019 ರಂದು 19 ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿರುವುದರಿಂದ ಇದಕ್ಕೆ ಈ ಹೆಸರು! ಜನವರಿ 19 ರಂದು ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಘಟನೆ ನಡೆಯಲಿದೆ ಎಂದು ಸ್ವತಃ ಬಿ ಎಸ್ ಯಡಿಯೂರಪ್ಪ ಅವರ ಸಿಕ್ತ್ ಸೆನ್ಸ್ ಹೇಳುತ್ತಿದೆ ಎಂದು ಅವರೇ ಹೇಳಿದ್ದಾರೆ!

ಅತೃಪ್ತರ ನಡೆ ನಿಗೂಢ
ಸಮ್ಮಿಶ್ರ ಸರ್ಕಾರದಲ್ಲಿ ನಿರೀಕ್ಷಿತ ಸ್ಥಾನಮಾನ ಸಿಗದ ಕಾರಣಕ್ಕೆ ಮುನಿಸಿಕೊಂಡಿರುವ ಕೆಲ ಅತೃಪ್ತ ಶಾಸಕರೇ ಬಿ ಎಸ್ ಯಡಿಯೂರಪ್ಪ ಅವರಿಗೆ ಸದ್ಯಕ್ಕಿರುವ ಭರವಸೆ. ಆದರೆ ಇಂದು ಮಧ್ಯಾಹ್ನ ಕಾಂಗ್ರೆಸ್ ನ ಶಾಸಕಾಂಗ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪ್ರತಿಯೊಬ್ಬ ಶಾಸಕರೂ ಕಡ್ಡಾಯವಾಗಿ ಭಾಗವಹಿಸಬೇಕು, ಇಲ್ಲವೆಂದರೆ ಶಿಸ್ತುಕ್ರಮ ತೆಗೆದುಕೊಳ್ಳುವುದಾಗಿ ಈಗಾಗಲೇ ಕಾಂಗ್ರೆಸ್ ಲಿಖಿತ ಸೂಚನೆ ನೀಡಿದೆ. ಈ ಸಭೆಗೆ ನಾಪತ್ತೆಯಾಗಿರುವ ಕಾಂಗ್ರೆಸ್ ಶಾಸಕರೂ ಹಾಜರಾದರೆ ಬಿಜೆಪಿ ಕಾರ್ಯತಂತ್ರ ವಿಫಲವಾದಂತೆ. ಅಕಸ್ಮಾತ್ ಕೆಲವರಾದರೂ ಗೈರಾದರೆ, ಬಿಜೆಪಿಗೆ ಹೊಸ ಭರವಸೆ ಸಿಕ್ಕಂತೆ.

ಯಾರೆಲ್ಲ ಗೈರಾಗಬಹುದು?
ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್, ಬಿಸಿ ಪಾಟೀಲ್, ಪ್ರತಾಪ್ ಗೌಡ ಪಾಟೀಲ್ , ಬಿ ನಾಗೇಂದ್ರ ಅವರು ಶಾಸಕಾಂಗ ಸಭೆಗೆ ಗೈರಾಗಬಹುದು ಎಂದು ಕೆಲವು ಮೂಲಗಳು ತಿಳಿಸಿವೆ.












Click it and Unblock the Notifications