ಸಂಸದ ಯಡಿಯೂರಪ್ಪ ಅವರ ಮುಂದಿನ ನಡೆಯೇನು?
ಬೆಂಗಳೂರು, ಜೂ.23: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಒಂದರ ಮೇಲೊಂದರಂತೆ ಎಫ್ ಐಆರ್ ಭಾಗ್ಯ ಒದಗಿಸುತ್ತಿದ್ದಾರೆ. ಅವತ್ತು ಸಿಎಂ ಪಟ್ಟದಿಂದ ಕೆಳಗಿಳಿಯದಿದ್ದರೆ ಈ ದಿನ ನೋಡಬೇಕಾಗಿರಲಿಲ್ಲ ಎಂದು ಬಿಎಸ್ ವೈ ಅಭಿಮಾನಿಗಳು ಹಲುಬುತ್ತಿದ್ದಾರೆ. ರಾಜಕೀಯ ಬದುಕಿನ ಕವಲು ದಾರಿಯಲ್ಲಿರುವ ಯಡಿಯೂರಪ್ಪ ಮುಂದೇನು ಮಾಡ್ತಾರೆ?
ಸಿದ್ದರಾಮಯ್ಯ ಸರ್ಕಾರದ ಪ್ರೇರಣೆಯಿಂದ ಲೋಕಾಯುಕ್ತ ಕೇಸುಗಳು ತ್ವರಿತವಾಗಿ ವಿಚಾರಣೆಗೆ ಬರುತ್ತಿವೆ. ಪೊಲೀಸರು ಹಳೆ ಕೇಸುಗಳನ್ನು ತೆಗೆದು ಎಫ್ ಐಆರ್, ಚಾರ್ಜ್ ಶೀಟ್ ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಯಡಿಯೂರಪ್ಪ ಅಲ್ಲದೆ ಅವರ ಟಿ20 ಸರ್ಕಾರದ ಗೆಳೆಯ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರಿಗೂ ಕೂಡಾ ಎಫ್ ಐಆರ್ ಭಾಗ್ಯದ ಬಿಸಿ ತಟ್ಟುತ್ತಿದೆ.
ಲೋಕಾಯುಕ್ತದಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಾಗುತ್ತಿದೆ, ಅವರಿಗೆ ಧೈರ್ಯತುಂಬಿದ್ದೇನೆ ಎಂದು ಹೇಳಿರುವ ಯಡಿಯೂರಪ್ಪ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಹುಬ್ಬಳ್ಳಿಯಲ್ಲಿ ಸೌಹಾರ್ದಯುತ ಭೇಟಿ ಮಾಡಿದ್ದಾರೆ. [ಪೂರ್ಣ ವರದಿ ಇಲ್ಲಿದೆ]
ಯಡಿಯೂರಪ್ಪ ಅವರು ಪದತ್ಯಾಗ ಮಾಡುವ ಹೊತ್ತಿಗೆ ಶೇ 75 ರಷ್ಟು ಬಿಜೆಪಿ ಶಾಸಕರ ಬೆಂಬಲ ಹೊಂದಿದ್ದರು ಎಂಬುದನ್ನು ಮರೆಯುವಂತಿಲ್ಲ. ತನ್ನವರೇ ತನಗೆ ಮುಳ್ಳಾದರೂ ಎನ್ನುತ್ತಾ ಪರಪ್ಪನ ಅಗ್ರಹಾರ ಜೈಲಿನ ದರ್ಶನವನ್ನು ಮಾಡಿ ಬಂದರು. ಡಿನೋಟಿಫಿಕೇಷನ್, ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ ಕೇಸುಗಳು ಇನ್ನೂ ಜಾರಿಯಲ್ಲಿವೆ ಈ ವಿಷಯದಲ್ಲಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಸಮಾನ ದುಃಖಿಗಳು. ಸಂಸದ ಯಡಿಯೂರಪ್ಪ ಅವರ ಮುಂದಿನ ನಡೆಯೇನು?

ಯಡಿಯೂರಪ್ಪ ಅತ್ಯಂತ ಜನಪ್ರಿಯ ಮುಖಂಡ
ಯಾರು ಏನೇ ಹೇಳಿದರೂ ಕರ್ನಾಟಕ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಅತ್ಯಂತ ಜನಪ್ರಿಯ ಹಾಗೂ ದಕ್ಷ ಮುಖಂಡ. ಭ್ರಷ್ಟ ಹೌದೋ ಅಲ್ಲವೋ ಕೋರ್ಟ್ ನಿರ್ಧರಿಸುತ್ತದೆ. ಅದರೆ, ಬಿಜೆಪಿ ಮಟ್ಟಿಗೆ ಜನರನ್ನು ಸೆಳೆಯಲು ಯಡಿಯೂರಪ್ಪ ಅವರೇ ಬೇಕು. ಸಂಸದ ಸ್ಥಾನ, ಉಪಾಧ್ಯಕ್ಷ ಸ್ಥಾನ ಗೌರವ ಸಿಕ್ಕರೂ ಯಡಿಯೂರಪ್ಪ ಮನಸ್ಸು ಮಾತ್ರ ಕರ್ನಾಟಕ, ಶಿವಮೊಗ್ಗ, ಶಿಕಾರಿಪುರ ಎಂದು ಗಂಟೆಗೊಮ್ಮೆ ಜಪಿಸುತ್ತಿರುತ್ತದೆ.

ಭಾಷೆ ಸಮಸ್ಯೆ ಇದೆ ಎಂದು ಒಪ್ಪಿಕೊಂಡ ನಾಯಕ
ದೆಹಲಿಯಲ್ಲಿ ನಾನು ಎಲ್ಲರಂತೆ ಮುನ್ನುಗ್ಗಲು ನನಗೆ ಭಾಷೆ ಅಡ್ಡಿ ಬರುತ್ತದೆ. ಇಂಗ್ಲೀಷ್ ಅಥವಾ ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಲಾರೆ. ಈ ಬಗ್ಗೆ ಪಕ್ಷದ ಮುಖಂಡರಿಗೂ ಅನೇಕ ಬಾರಿ ಹೇಳಿದ್ದೇನೆ. ನನಗೆ ಕರ್ನಾಟಕವೇ ಸಾಕು ಎಂದಿದ್ದೇನೆ ಎಂದು ಬೂಕನಕೆರೆ ಯಡಿಯೂರಪ್ಪ ಅವರು ಅನೇಕ ಸಲ ಬಹಿರಂಗ ಸಭೆಗಳಲ್ಲೇ ಗೋಳು ತೋಡಿಕೊಂಡಿದ್ದಾರೆ.

ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಲು ಕೇಸುಗಳ ಅಡ್ಡಿ
ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷರಾಗಲು ಬಯಸಿರುವ ಯಡಿಯೂರಪ್ಪ ಅವರಿಗೆ ಕೋರ್ಟ್ ಕೇಸುಗಳು ಅಡ್ಡಿಪಡಿಸುತ್ತಿವೆ. ಅದರೆ, ಈ ಬಾರಿ ಬಿಜೆಪಿ ಹೈಕಮಾಂಡ್ ಮೇಲೂ ಒತ್ತಡ ಹೆಚ್ಚಿರುವುದರಿಂದ 2016ರಲ್ಲಿ ಬಿಎಸ್ ವೈ ಬಯಕೆ ಪೂರ್ಣಗೊಳ್ಳಬಹುದು. ಪ್ರಹ್ಲಾದ್ ಜೋಶಿ ಅಧಿಕಾರ ಅವಧಿ ಮುಕ್ತಾಯವಾಗುತ್ತಿದ್ದಂತೆ ಯಡಿಯೂರಪ್ಪ ಪಟ್ಟಾಭಿಷೇಕಕ್ಕೆ ಬಿಜೆಪಿ ಸಿದ್ಧವಾಗುತ್ತಿದೆ. ಭ್ರಷ್ಟಾಚಾರ ಕೇಸುಗಳ ಆರೋಪ ಹೊತ್ತಿರುವ ಅನೇಕ ರಾಜಕಾರಣಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಯಡಿಯೂರಪ್ಪ ಬಗ್ಗೆ ನಿರ್ಲಕ್ಷ್ಯ ಏಕೆ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಯುವ ನಾಯಕರಿಗಾಗಿ ಹುಡುಕಾಟ
ಮೋದಿ-ಅಮಿತ್ ಶಾ ಅವರು ಕರ್ನಾಟಕದಲ್ಲಿ ಯುವ ನೇತಾರರನ್ನು ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ. ಅದರೆ, ಸಮರ್ಥ ನಾಯಕರ ಕೊರತೆ ಬಿಜೆಪಿ ಎದುರಿಸುತ್ತಿದೆ. ಲಿಂಗಾಯತ ಸಮಾಜ ಮುಖಂಡ ಎನಿಸಿದರೂ ಬಿಎಸ್ ವೈ ಜನರನ್ನು ಸೆಳೆಯುವಲ್ಲಿ ಸಫಲರಾಗಿದ್ದಾರೆ. ಮೂಲಗಳ ಪ್ರಕಾರ ಹೊಸ ನಾಯಕನನ್ನು ನೇಮಿಸಿ, ಯಡಿಯೂರಪ್ಪ ಅವರಿಗೆ ಗೈಡ್ ಆಗಿ ಮುಂದುವರೆಯುವಂತೆ ಬಿಜೆಪಿ ಹೈಕಮಾಂಡ್ ಸೂಚಿಸುವ ಸಾಧ್ಯತೆ ಹೆಚ್ಚಿದೆ.

ಬಿಜೆಪಿಗೆ ನಾಯಕತ್ವದ ಚಿಂತೆ, ಬಿಎಸ್ವೈಗೆ ಪಟ್ಟದ ಚಿಂತೆ
ಬಿಜೆಪಿಗೆ ನಾಯಕತ್ವದ ಚಿಂತೆ, ಬಿಎಸ್ವೈಗೆ ಪಟ್ಟದ ಚಿಂತೆ. ಈ ನಡುವೆ ಜಗದೀಶ್ ಶೆಟ್ಟರ್, ಆರ್ ಅಶೋಕ್ ಹಾಗೂ ಅನಂತ್ ಕುಮಾರ್ ಅವರು ತಮ್ಮ ಬೆಂಬಲಿತ ನಾಯಕರನ್ನು ಪಟ್ಟಕ್ಕೇರಿಸಲು ಸಿದ್ಧರಾಗುತ್ತಿದ್ದಾರೆ. ಇವರಲ್ಲಿ ಯಾರೂ ಅಧ್ಯಕ್ಷ ಸ್ಥಾನಕ್ಕೇರಲು ಬಯಸಿಲ್ಲ. ಬಯಸಿದರೂ ಪಕ್ಷಕ್ಕೆ ಇವರ ಮೇಲೆ ಗಟ್ಟಿ ನಂಬಿಕೆ ಬಂದಿಲ್ಲ. ಬಿಜೆಪಿ ಮುಂದಿನ ಚುನಾವಣೆ ಎದುರಿಸಲು ಯಡಿಯೂರಪ್ಪ ನೇತೃತ್ವ ಅಗತ್ಯ ಎಷ್ಟಿದೆ ಎಂಬುದರ ಅರಿವು ಹೈಕಮಾಂಡಿಗೆ ಆಗಿದೆ.












Click it and Unblock the Notifications