ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ವಿತರಣೆಗೆ ಇಲಾಖೆ ಸೂಚನೆ
Recommended Video
ಬೆಂಗಳೂರು, ಜನವರಿ 28: ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ನೀಡಬೇಕು ಎಂದು ಆಹಾರ ಇಲಾಖೆ ಸೂಚಿಸುವ ಮೂಲಕ ಬಿಪಿಎಲ್, ಎಪಿಎಲ್ ಕಾರ್ಡ್ ದಾರರಿಗೆ ನೆಮ್ಮದಿಯ ಸುದ್ದಿ ನೀಡಿದೆ.
ಸರ್ವರ್ ಹಾಗೂ ತಂತ್ರಾಂಶ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಆಧಾರ್ ದೃಢೀಕರಣ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಯೋಮೆಟ್ರಿಕ್ ನೀಡದೆ ಪಡಿತರ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ವತಿಯಿಂದ ಬಯೋಮೆಟ್ರಿಕ್ ರಹಿತ ಫಲಾನುಭವಿಗಳಿಗೂ ಪಡಿತರ ವಿತರಿಸಬೇಕೆಂದು ನ್ಯಾಯಬೆಲೆ ಅಂಗಡಿಗಳಿಗೆ ಸುತ್ತೋಲೆ ಹೊರಡಿಸಿದೆ.
ಜನವರಿ 30 ರವರೆಗೆ ಪ್ರತಿದಿನ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ರವರೆಗೆ ನ್ಯಾಯಬೆಲೆ ಅಂಗಡಿ ತೆರೆದು ಪಡಿತರ ವಿತರಿಸಬಹುದಾಗಿದೆ. ಸರ್ವರ್ ಮತ್ತು ತಂತ್ರಾಂಶ ಸಮಸ್ಯೆ ಸರಿ ಹೋಗುವ ತನಕ ಈ ವ್ಯವಸ್ಥೆ ಜಾರಿಯಲ್ಲಿರಲಿದೆ. ಪಡಿತರ ವಿತರಣೆಯಾಗುತ್ತಿರುವ ಮಾಹಿತಿಯನ್ನು ಆಹಾರ ನಿರೀಕ್ಷಕರಿಗೆ ನೀಡಬೇಕು ಎಂದು ಇಲಾಖೆ ಸೂಚಿಸಿದೆ.

ಪಡಿತರ ವಿತರಣೆ ಪೂರ್ಣಗೊಂಡ ಬಳಿಕ ಫೆಬ್ರವರಿ 1ರಿಂದ ಇ ಕೆವೈಸಿಗೆ ಮತ್ತೆ ಚಾಲನೆ ನೀಡಲಾಗುತ್ತದೆ. ಪಡಿತರ ವಿತರಣೆ ಹಾಗೂ ಇ ಕೈವೆಸಿ ಎರಡು ಏಕಕಾಲಕ್ಕೆ ಕಾರ್ಯನಿರ್ವಹಣೆ ಸಾಧ್ಯವಾಗದೆ ಸರ್ವರ್ ಓವರ್ ಲೋಡ್ ಆಗಿ ತಾಂತ್ರಿಕ ತೊಂದರೆ ಕಾಣಿಸಿಕೊಳ್ಳುತ್ತಿತ್ತು. ಪಡಿತರ ಚೀಟಿದಾರರಿಗೆ ಅನುಕೂಲವಾಗುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಪಡಿತರ ಅಂಗಡಿಗಳಲ್ಲಿ ಪಡಿತರ ವಿತರಣೆ ಇಲ್ಲದ ದಿನಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಲು ತಿಳಿಸಲಾಗಿತ್ತು.
ಇ -ಕೆವೈಸಿ ಅಪ್ಡೇಟ್ ಮಾಡಿಸಿಕೊಂಡ ಬಳಿಕ ನೈಜ ಫಲಾನುಭವಿಗಳ ಲೆಕ್ಕ ಸಿಗಲಿದೆ. ಇಕೆವೈಸಿ ಅಪ್ಡೇಡ್ ಗಾಗಿ ಪಡಿತರ ಚೀಟಿದಾರರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಇನ್ನು ವೃದ್ಧರು, ವಿಶೇಷಚೇತನರು ಮತ್ತು ಕುಟುಂಬದವರೊಂದಿಗೆ ವಾಸವಿಲ್ಲದ ಸದಸ್ಯರು ಈ ಕೆವೈಸಿ ಅಪ್ಡೇಟ್ ಮಾಡಲು ಸಾಧ್ಯವಾಗದಿದ್ದರೆ ಆಹಾರ ನಿರೀಕ್ಷಕರ ಪರಿಶೀಲನೆಗೆ ಒಳಪಟ್ಟು ಅವರಿಗೆ ವಿನಾಯಿತಿ ಪಡೆಯಬಹುದು.












Click it and Unblock the Notifications