ಗಡಿ ವಿವಾದ; ಕೇಂದ್ರ ಗೃಹ ಸಚಿವರ ಅಧ್ಯಕ್ಷತೆ ಯಲ್ಲಿ ಸಭೆ: ಬಸವರಾಜ ಬೊಮ್ಮಾಯಿ
ಬೆಂಗಳೂರು, ಡಿಸೆಂಬರ್ 10: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಡಿಸೆಂಬರ್ 14 ಅಥವಾ 15 ರಂದು ಸಭೆ ನಡೆಯಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎಸ್.ನಿಜಲಿಂಗಪ್ಪ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಸೋಮವಾರದಂದು ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದಾರೆ, ನಾನೂ ಕೂಡ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಅವರು ಹೇಳಿ ಕಳಿಸಿದಾಗ ಬರಬೇಕಾಗುವುದು ಎಂದು ಹೇಳಿದ್ದಾರೆ. ಕರ್ನಾಟಕದ ವಿಚಾರ, ನಿಲುವು, ವಾಸ್ತವಾಂಶವನ್ನು ಈಗಾಗಲೇ ತಿಳಿಸಲಾಗಿದೆ. ಹಲವಾರು ವಿವರಗಳನ್ನು ಸಹ ನೀಡಲಾಗಿದೆ. ಭೇಟಿಯಾದ ಸಂದರ್ಭದಲ್ಲಿ ಕರ್ನಾಟಕದ ನಿಲುವನ್ನು ಅವರಿಗೆ ಸ್ಪಷ್ಟಪಡಿಸಲಾಗುವುದು ಎಂದರು.
ಇನ್ನೂ ಸರ್ವ ಪಕ್ಷ ಸಭೆ ಕರೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ವ ಪಕ್ಷದ ಸಭೆ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಲಾಗಿದೆ. ಸಭೆ ನಿಗದಿಯಾದ ಕೂಡಲೇ ತಿಳಿಸಲಾಗುವುದು ಎಂದು ತಿಳಿಸಿದರು.

ಎಸ್.ನಿಜಲಿಂಗಪ್ಪ ಜನಪರ ಆಡಳಿತಕ್ಕೆ ನಾಂದಿ ಹಾಡಿದವರು
ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ನವರು ಆಡಳಿತದ ಭದ್ರ ಬುನಾದಿಯನ್ನು ಹಾಕಿ ಜನಪರವಾದ ಆಡಳಿತ ಮಾಡಲು ನಾಂದಿ ಹಾಡಿದರು. ಎಸ್.ನಿಜಲಿಂಗಪ್ಪ ಅವರು ಕನ್ನಡ ನಾಡಿನ ಪುತ್ರ. ಇಡೀ ನಾಡಿಗೆ ತನ್ನ ಜೀವವನ್ನು ಮೀಸಲಿಟ್ಟು ಕನ್ನಡ, ಕನ್ನಡ ಭಾಷೆಗೆ ಮಾಡಿರುವ ಕೆಲಸ ಕರ್ನಾಟಕವಾಗಲು ಕಾರಣೀಭೂತವಾಗಿದೆ. ತತ್ವ, ಆದರ್ಶ ಮೌಲ್ಯಾಧಾರಿತ ರಾಜಕಾರಣ, ಕರ್ನಾಟಕದಲ್ಲಿ ಮಾಡಿದರು. ಭಾರತದಲ್ಲಿ ಅವರ ಖ್ಯಾತಿ, ಪ್ರಭಾವ ಇತ್ತು. ಸಂವಿಧಾನ ರಚನಾ ಸಮಿತಿಯಿಂದ ಹಿಡಿದು ಎ.ಐ.ಸಿ.ಸಿ ಅಧ್ಯಕ್ಷರಾಗುವವರೆಗೂ ಭಾರತದ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಡಳಿದಲ್ಲಿ ಸುಧಾರಣೆಗೆ ಮಹತ್ವ ನೀಡಿ, ಆಡಳಿತ ಸುಧಾರಣೆಯನ್ನು ಪ್ರಜಾಪ್ರಭುತ್ವ ಆಗತಾನೆ ಹೊರಹೊಮ್ಮುತ್ತಿರುವ ಸಂದರ್ಭದಲ್ಲಿ ಜನಪರವಾದ, ಜನರ ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವನ್ನು ನೀಡಿದ್ದಾರೆ ಎಂದರು.
ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ನಾಟಕದ ಸೇವೆಯನ್ನು ಮಾಡಿದವರು. ನೀರಾವರಿಗೆ ಬಹಳಷ್ಟು ಒತ್ತು ನೀಡಿದವರು. ಇಂದು ನಾವು ಕಾಣುತ್ತಿರುವ ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶಗಳು ಅವರ ಕಲ್ಪನೆ ಹಾಗೂ ಕ್ರಿಯಾಯೋಜನೆಗಳು. ಕರ್ನಾಟಕಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಮೌಲ್ಯಾಧಾರಿತ ರಾಜಕಾರಣ ಮಾಡಿದ್ದರು. ಮನಸ್ಸು ಮಾಡಿದ್ದರೆ, ಭಾರತದ ರಾಷ್ಟಪತಿಗಳಾಗಬಹುದಿತ್ತು.

ಆದರೆ ಅವರು ಅದನ್ನು ಒಪ್ಪಲಿಲ್ಲ. ಎಂದಿಗೂ ಅಧಿಕಾರದ ಹಿಂದೆ ಹೋಗಲಿಲ್ಲ. ಅಧಿಕಾರ ಅವರ ಹಿಂದೆ ಬಂದಿತ್ತು. ಎಸ್.ಆರ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಿದ್ದಾಗ ಬೆಂಗಳೂರಿಗೆ ಬನ್ನಿ ಎಂದಾಗಲೂ ಅವರು ಒಪ್ಪಲಿಲ್ಲ. ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾದ ಅವರು ನಮ್ಮೆಲ್ಲರಿಗೂ ಆದರ್ಶ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ: ಸಿ.ಸೋಮಶೇಖರ್ ಮತ್ತಿತರರು ಉಪಸ್ಥಿತಿತರಿದ್ದರು.












Click it and Unblock the Notifications