76ರ ಬಿಎಸ್ವೈ ಸಿಎಂ ಆಗಲು ಅನುಮತಿ ನೀಡಿ ನಿಯಮ ಗಾಳಿಗೆ ತೂರಿತೆ ಬಿಜೆಪಿ?
Recommended Video
ಬೆಂಗಳೂರು, ಜುಲೈ 26 : ರಾಜಕೀಯ ನಿವೃತ್ತಿ ವಯಸ್ಸನ್ನು 75ಕ್ಕೆ ನಿಗದಿಪಡಿಸಿದ್ದ ಭಾರತೀಯ ಜನತಾ ಪಕ್ಷದ ಹೈಕಮಾಂಡ್, 76 ವರ್ಷ ದಾಟಿರುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ನಿರ್ಧರಿಸಿದ್ದಾದರೂ ಹೇಗೆ?
ಈ ಪ್ರಶ್ನೆಗೆ ಬಿಜೆಪಿಯ ಹಿರಿಯ ನಾಯಕರಾದ ಅಮಿತ್ ಶಾ, ನರೇಂದ್ರ ಮೋದಿ, ರಾಜನಾಥ್ ಸಿಂಗ್ ಮುಂತಾದವರು ನೀಡಲೇಬೇಕು. 75 ವಯಸ್ಸು ದಾಟಿದ ಯಾವುದೇ ರಾಜಕಾರಣಿ ಯಾವುದೇ ಹುದ್ದೆಯನ್ನು ಅಲಂಕರಿಸಬಾರದು ಎಂಬುದಲ್ಲವೆ ಹಿರಿಯ ನಾಯಕರು ನಿರ್ಧಾರ ತೆಗೆದುಕೊಂಡಿರುವುದು?
Breaking News ಇಂದೇ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ
ಇದೀಗ, ಸಾಕಷ್ಟು ವಿಚಾರ ಮಾಡಿ, ಬಹುಮತದ ಸಾಧ್ಯಾಸಾಧ್ಯತೆಗಳನ್ನು ಅಳೆದುತೂಗಿ, ಸಿಕ್ಕ ಅವಕಾಶದ ಪರಾಮರ್ಶೆ ಮಾಡಿ, ಯಡಿಯೂರಪ್ಪನವರ ಆವೇಶಭರಿತ ಆತುರವನ್ನು ಪರಿಗಣಿಸಿ, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸರಕಾರ ರಚಿಸಲು ಯಡಿಯೂರಪ್ಪನವರಿಗೆ ಅನುಮತಿ ನೀಡಿದೆ.
ತಮಗೆ ತಾವೇ ಹಾಕಿಕೊಂಡ ಈ ನಿಯಮದ ಪ್ರಕಾರ, ಅವರಿವರಲ್ಲ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಈ ಅವಧಿ ಮುಗಿದ ನಂತರ, ಅವರಲ್ಲಿ ಸಾಮರ್ಥ್ಯವಿದ್ದರೂ ಮತ್ತೆ ಭಾರತದ ಪ್ರಧಾನಿಯಾಗಲಾರರು. ಇದಕ್ಕೆ ಅವರು ನಿರ್ಧಾರವನ್ನೂ ಮಾಡಿಯಾಗಿದೆ.
ಹೀಗಿದ್ದ ಮೇಲೆ ಯಡಿಯೂರಪ್ಪನವರ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ಯಾಕೆ ಎಡವಿತು? ಯಡಿಯೂರಪ್ಪ ಅವರೇ ಅನಭಿಷಿಕ್ತ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರಿಗೆ ಸದ್ಯಕ್ಕೆ ಪರ್ಯಾಯವೂ ಇಲ್ಲ. ಆದರೆ, ಪಕ್ಷದ ನಿಯಮಕ್ಕೆ ಬದ್ಧರಾಗಿರಬೇಕಿಲ್ಲವೆ? ಅವರನ್ನು ಬಿಟ್ಟು ಬೇರೆಯವರಿಗೆ ಪಟ್ಟಾಭಿಷೇಕ ಮಾಡಬಹುದಿತ್ತಲ್ಲವೆ?
3 ಬಾರಿ ಸಿಎಂ ಆಗಿದ್ದ ಯಡಿಯೂರಪ್ಪ ಎಷ್ಟು ದಿನ ಆಡಳಿತ ನಡೆಸಿದ್ದರು?
ಎಪ್ಪತ್ತೈದು ದಾಟಿದ ಕಾರಣ ನೀಡಿ ಹಲವಾರು ಹಿರಿಯಾತಿಹಿರಿಯ ರಾಜಕಾರಣಿಗಳನ್ನು ಬಿಜೆಪಿ ತೆರೆಮರೆಗೆ ಸರಿಸಿದೆ, ಕೆಲವರನ್ನು ಮೂಲೆಗುಂಪು ಮಾಡಿದೆ, ಕೆಲವರು ತಾವಾಗಿಯೇ ಹಿಂದೆ ಸರಿದಿದ್ದಾರೆ, ಮತ್ತೆ ಕೆಲವರು ತೊಂಬತ್ತರ ಆಸುಪಾಸಿನಲ್ಲಿದ್ದರೂ ಈ ನಿಯಮಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದರು.
ಬಿಜೆಪಿಯಲ್ಲಿ ಇಂಥವರ ಪಟ್ಟಿ ದೊಡ್ಡದಾಗಿಯೇ ಇದೆ. ಮೊದಲಿಗೆ ಕಣ್ಣಿಗೆ ಬೀಳುವರೇ 91 ವರ್ಷದ ಹಿರಿಯ ರಾಜಕಾರಣಿ ಲಾಲ್ ಕೃಷ್ಣ ಅಡ್ವಾಣಿ ಅವರು. ಕಳೆದ ಅವಧಿಯಲ್ಲಿಯೇ, ಅಂದರೆ 2014ರಲ್ಲಿಯೇ ಅವರನ್ನು ಪಕ್ಕಕ್ಕೆ ತಳ್ಳಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲಾಗಿತ್ತು. ಆದರೆ, ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಸಾಕಷ್ಟು ಬೆಳೆದಿದ್ದು ಇದೀಗ ಇತಿಹಾಸ.
2019ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕೂಡ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡದೆ ಬಿಜೆಪಿ ನಾಯಕರು ಅವಮಾನ ಮಾಡಿದ್ದಾರೆ ಎಂದು ಹುಯಿಲೆಬ್ಬಿಸಲಾಗಿತ್ತು. ಅವರು 75 ವರ್ಷ ದಾಟಿದ್ದಾರೆ ಎಂಬ ಕಾರಣವೊಡ್ಡಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೆ, ಯಡಿಯೂರಪ್ಪನವರಿಗೆ ಈಗ ವಯಸ್ಸು ಎಷ್ಟಾಗಿದೆ?
ಯಡಿಯೂರಪ್ಪ ಕಥೆ ಗೋವಿಂದಾ, ಗೋವಿಂದಾ: ಡಿಕೆ ಶಿವಕುಮಾರ್
ಇದೇ ಕಾರಣ ನೀಡಿ 85 ವರ್ಷ ವಯಸ್ಸಾಗಿರುವ ಮತ್ತೊಬ್ಬ ಹಿರಿಯ ರಾಜಕಾರಣಿ ಮುರಳಿ ಮನೋಹರ ಜೋಶಿ ಅವರಿಗೆ ಕೂಡ ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಗಿತ್ತು. ಆದರೆ, ಮುರಳಿ ಮನೋಹರ ಜೋಶಿ ಅವರು ತಾವೇ ಸ್ವತಃ ಟಿಕೆಟ್ ಬೇಡವೆಂದಿದ್ದಾರೆ ಎಂಬಂತೆ ಬಿಂಬಿಸಲಾಗಿದ್ದು ಭಾರೀ ವಿವಾದ ಸೃಷ್ಟಿಸಿತ್ತು.
ಇದಕ್ಕೂ ಮೊದಲು 81 ವರ್ಷದ ಯಶವಂತ್ ಸಿನ್ಹಾ, 77 ವರ್ಷದ ಅರುಣ್ ಶೌರಿ ಅವರನ್ನು ಕೂಡ ಬಿಜೆಪಿ ಮೂಲೆಗುಂಪು ಮಾಡಿದ್ದರಿಂದ ಅವರು ತಿರುಗಿಬಿದ್ದು ಪಕ್ಷವನ್ನೇ ತೊರೆದು, ಇದೀಗ ಬಿಜೆಪಿಯ ವಿರುದ್ಧವೇ ಭಾರೀ ಸಮರ ಸಾರಿದ್ದಾರೆ. 79 ವರ್ಷದ ಸುಬ್ರಮಣಿಯನ್ ಸ್ವಾಮಿ ಅವರು ಪಕ್ಷದಲ್ಲಿದ್ದರೂ ಯಾವುದೇ ಸ್ಥಾನಮಾನ ಗಿಟ್ಟಿಸಿಕೊಂಡಿಲ್ಲ.
ಈ ನಿಯಮಕ್ಕೆ ಒಳಪಟ್ಟು ತೆರೆಮರೆಗೆ ಸರಿದವರು ಗುಜರಾತ್ ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು. ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರೂ 75 ವರ್ಷ ದಾಟುತ್ತಿದ್ದಂತೆ ಅವರಿಂದ ರಾಜೀನಾಮೆ ಪಡೆದುಕೊಳ್ಳಲಾಯಿತು. ಅವರ ಸ್ಥಾನಕ್ಕೆ ವಿಜಯ್ ರೂಪಾನಿ ಅವರನ್ನು ತರಲಾಯಿತು. ಮಾಜಿ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಕೂಡ ವಯೋಮಿತಿಯಿಂದಾಗಿ ತೆರೆಮರೆಗೆ ಸರಿಯಬೇಕಾಯಿತು.
ಈ ಎಲ್ಲ ವಿಷಯಗಳನ್ನು ಗಮನಿಸಿದರೆ, 76 ವರ್ಷದ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದು, 75 ವಯಸ್ಸು ದಾಟಿದ ಯಾರಿಗೇ ಆಗಲಿ ಸ್ಥಾನಮಾನ ನೀಡಬಾರದು ಎಂಬ ನಿಯಮಗಳನ್ನೇ ಗಾಳಿಗೆ ತೂರಿದಂತಾಗಿದೆ. ಇದಕ್ಕೆ ಹಿರಿಯ ನಾಯಕರು ಏನು ಉತ್ತರ ನೀಡುತ್ತಾರೆ?