ಸರ್ಕಾರ ಉರುಳಿಸುವ ಬಿಜೆಪಿ ಯತ್ನಗಳು ಫಲ ನೀಡಲಿಲ್ಲವೇಕೆ? ಮುಂದಿನ ನಡೆ ಏನು?
ಬೆಂಗಳೂರು, ಸೆಪ್ಟೆಂಬರ್ 29: ಕೆಲವು ದಿನಗಳ ಹಿಂದೆಯಷ್ಟೆ, ಬಿಜೆಪಿ ಇನ್ನೇನು ಸರ್ಕಾರ ರಚಿಸಿಯೇ ಬಿಡುತ್ತದೆ. ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸಿಯೇ ಬಿಡುತ್ತಾರೆ ಎಂದೆಲ್ಲಾ ಹೇಳಲಾಗಿತ್ತು. ಆದರೆ ಅದು ಕೇವಲ ಸುದ್ದಿಯಾಗಿ ಮಾತ್ರವೇ ಉಳಿಯಿತು.
ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ ಅವರುಗಳು ಸಹ 'ಇನ್ನು ಎರಡು ದಿನದಲ್ಲಿ ಏನಾಗುತ್ತೆ ನೋಡಿ', 'ಸರ್ಕಾರ ರಚಿಸಿಯೇ ಸಿದ್ಧ' ಎಂಬೆಲ್ಲಾ ಮಾತುಗಳನ್ನು ಟಿವಿ ಕ್ಯಾಮೆರಾಗಳ ಮುಂದೆ ಆಡಿ ಮೈಲೆಜ್ ತೆಗೆದುಕೊಂಡಿದ್ದರು. ಆದರೆ ಅವರಂದಂತೆ ಏನೂ ಆಗಲಿಲ್ಲ.
ಹಾಗಿದ್ದರೆ, ಬಿಜೆಪಿ ಅಧಿಕಾರದ ಆಸೆ ಕೈಬಿಟ್ಟಿತಾ? ಎಂದು ಕೇಳಿದರೆ ಇಲ್ಲವೆಂದೇ ಹೇಳಬೇಕು. ಆದರೆ ಬಿಜೆಪಿ ಹೈಕಮಾಂಡ್ ಮೂಗುದಾರ ಹಾಕಿರುವ ಕಾರಣ ಲೋಕಸಭೆ ಚುನಾವಣೆ ಮುಗಿಯುವವರೆಗೂ ಕಾದು ನೋಡುವ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ ಎನ್ನಲಾಗಿದೆ.
ಕಾರಣ ಇಷ್ಟೆ, ಸರ್ಕಾರ ಈಗಷ್ಟೆ ಟೇಪ್ಆಫ್ ಆಗುತ್ತಿದೆ. ಸಚಿವರಿಗೆ, ಶಾಸಕರುಗಳಿಗೆ ಈಗಷ್ಟೆ ಅಧಿಕಾರದ 'ಸೌಲಭ್ಯಗಳು' ದೊರಕಲು ಪ್ರಾರಂಭವಾಗಿವೆ. ಈ ಹಂತದಲ್ಲಿ ಆಡಳಿತದಲ್ಲಿರುವ ಪಕ್ಷಕ್ಕೆ ರಾಜೀನಾಮೆ ನೀಡಲು ಯಾರೂ ಮುಂದೆ ಬಾರರು.

ಲೋಕಸಭೆ ಚುನಾವಣೆ ಮುಗಿದ ಬಳಿಕ ಅಖಾಡಕ್ಕೆ
ಅದೇ ಲೋಕಸಭೆ ಚುನಾವಣೆ ಮುಗಿದು ಬಿಜೆಪಿ ಪರ ಹೆಚ್ಚಿನ ಸೀಟುಗಳು ಬಂದರೆ, ಅಥವಾ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಆಗ ರಾಜ್ಯ ಬಿಜೆಪಿ ನಾಯಕರುಗಳಿಗೆ ಇತರ ಪಕ್ಷದ ನಾಯಕರನ್ನು ಸೆಳೆಯಲು ಸುಲಭವಾಗುತ್ತದೆ. ಹಾಗಾಗಿ ಈ ತಕ್ಷಣಕ್ಕೆ ಬಿಜೆಪಿ ಸರ್ಕಾರ ಉರುಳಿಸುವ ತನ್ನ ತಂತ್ರವನ್ನು ಪಕ್ಕಕ್ಕೆ ಇರಿಸಿದೆ.

ಸರ್ಕಾರ ಉರುಳಿಸುವುದು ಬೇಡ
ಮೈತ್ರಿ ಸರ್ಕಾರವನ್ನು ಉರುಳಿಸುವುದು ಈಗ ಬೇಡ ಎಂದು ಬಿಜೆಪಿ ಹೈಕಮಾಂಡ್, ರಾಜ್ಯ ಬಿಜೆಪಿಗೆ ಸ್ಪಷ್ಟವಾಗಿ ಹೇಳಿದೆ. ಆಡಳಿತದಲ್ಲಿರುವ ಸರ್ಕಾರವನ್ನು ಉರುಳಿಸಿದರೆ ಅಧಿಕಾರದ ಆಸೆಗಾಗಿ ಹೀಗೆ ಮಾಡಿದ್ದಾರೆಂದ ನಿಂದನೆ ಪಕ್ಷಕ್ಕೆ ಬರುತ್ತದೆ. ಅದು ಲೋಕಸಭೆ ಚುನಾವಣೆಗೆ ಬಿಜೆಪಿಗೆ ಹೊಡೆತ ಆಗಬಹುದು ಎಂಬುದು ಅಮಿತ್ ಶಾ ಲೆಕ್ಕಾಚಾರ.

ದಕ್ಷಿಣ ಭಾರತದ ದೃಷ್ಠಿ ನೆಟ್ಟಿರುವ ಬಿಜೆಪಿ
ಈ ಬಾರಿಯ ಲೋಕಸಭೆ ಚುನಾವಣೆ ಬಿಜೆಪಿ ಅತ್ಯಂತ ಪ್ರತಿಷ್ಠೆಯದ್ದು. ಉತ್ತರ ಭಾರತದಲ್ಲಿ ಕಳೆದ ಬಾರಿಯಷ್ಟು ಯಶಸ್ಸು ಬಿಜೆಪಿಗೆ ದೊರಕದು ಎನ್ನಲಾಗಿರುವ ಕಾರಣ ಅದು ದಕ್ಷಿಣ ರಾಜ್ಯಗಳ ಮೇಲೆ ದೃಷ್ಠಿ ನೆಟ್ಟಿದೆ ಹಾಗಾಗಿ ಕರ್ನಾಟಕದಲ್ಲಿ ಎಚ್ಚರಿಕೆಯಿಂದ ರಾಜಕೀಯ ಹೆಜ್ಜೆಗಳನ್ನಿಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ.

ಸರ್ಕಾರ ಉರುಳಿಸಲು ಕಾಂಗ್ರೆಸ್ ಬಿಡುತ್ತಿಲ್ಲ
ಮೈತ್ರಿ ಸರ್ಕಾರ ಉರುಳದಂತೆ ತಡೆಯುವಲ್ಲಿ ಕಾಂಗ್ರೆಸ್ ಹೆಚ್ಚಿನ ಆಸ್ಥೆ ವಹಿಸುತ್ತಿದೆ. ಸಣ್ಣ ಅಸಮಾಧಾನಗಳನ್ನು ಸಹ ಹೈಕಮಾಂಡ್ ಸ್ವತಃ ಮಾತನಾಡಿ ಇತ್ಯರ್ಥ ಪಡಿಸುತ್ತಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸಹ ಆಸಕ್ತಿಯಿಂದ ಮೈತ್ರಿ ಸರ್ಕಾರದ ಬಂಧ ಜೊಳ್ಳಾಗದಂತೆ ಕಾಯುತ್ತಿದ್ದಾರೆ. ಹಾಗಾಗಿ ಬಿಜೆಪಿಯ ತಂತ್ರಗಳು ಫಲ ನೀಡುತ್ತಿಲ್ಲ ಎನ್ನಲಾಗಿದೆ.

ಕೈ ಕೊಟ್ಟ ಕೆಲವು ಬಿಜೆಪಿ ನಾಯಕರು
ಸರ್ಕಾರ ಉರುಳಿಸುವ ಬಿಜೆಪಿಯ ಯೋಜನೆಗೆ ಪಕ್ಷದ ಕೆಲವು ಪ್ರಮುಖ ನಾಯಕರು ಕೈ ಜೋಡಿಸಿಲ್ಲ ಎನ್ನಲಾಗಿದೆ. ಯಡಿಯೂರಪ್ಪ ಹಾಗೂ ಅವರ ಕೆಲವು ನಿಷ್ಠಾವಂತೆ ಬೆಂಬಲಿಗರು ಹೊರತು ಪಡಿಸಿದರೆ ಬಿಜೆಪಿಯ ಪ್ರಮುಖ ನಾಯಕರುಗಳು ಈ ಆಪರೇಷನ್ನಿಂದ ದೂರವೇ ಉಳಿದದ್ದು ಸಹ ಬಿಜೆಪಿಯ ತಂತ್ರ ವಿಫಲವಾಗಲು ಕಾರಣವಾಯಿತು. ಶೆಟ್ಟರ್, ಅನಂತ್ಕುಮಾರ್, ಸದಾನಂದಗೌಡ, ಈಶ್ವರಪ್ಪ, ಶ್ರೀರಾಮುಲು ಸಹ ಆಪರೇಷನ್ ಕಮಲ ಕಾರ್ಯಾಚಾರಣೆಯಿಂದ ದೂರ ಉಳಿದರು ಎನ್ನಲಾಗಿದೆ.












Click it and Unblock the Notifications