ಜನಾರ್ದನ ರೆಡ್ಡಿ ಜೊತೆ ಬಿಜೆಪಿ ಕೈಜೋಡಿಸದಿರಲು 7 ಕಾರಣ
ಬೆಂಗಳೂರು, ಜ.22 : ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಸುಮಾರು ಮೂರು ವರ್ಷಗಳ ಜೈಲುವಾಸ ಮುಗಿಸಿ ಅವರು ಹೊರಬರುತ್ತಿದ್ದು, ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಜೈಲು ವಾಸದಿಂದ ಬಿಡುಗಡೆಗೊಳ್ಳಲು ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿದ್ದರೂ ಕರ್ನಾಟಕ ಬಿಜೆಪಿಯಲ್ಲಿ ಮಾತ್ರ ಸಂಭ್ರಮಾಚರಣೆ ಎದ್ದು ಕಾಣುತ್ತಿಲ್ಲ. ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆ, ಬೇಡವೆ? ಎಂಬ ಲೆಕ್ಕಾಚಾರ ನಡೆಯುತ್ತಿದೆ. [ರೆಡ್ಡಿಗೆ ಜಾಮೀನು : ಯಾರು, ಏನು ಹೇಳಿದರು?]
ಮತ್ತೊಮ್ಮೆ ಜನಾರ್ದನ ರೆಡ್ಡಿ ಅವರರೊಂದಿಗೆ ಕೈ ಜೋಡಿಸುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಈಗಾಗಲೇ ಪಕ್ಷದ ರಾಜ್ಯ ನಾಯಕರು ಸ್ಪಷ್ಟಪಡಿಸಿದ್ದಾರೆ. ರೆಡ್ಡಿ ಜೊತೆ ಕೈ ಜೋಡಿಸಿದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ವಿರುದ್ಧ ಹೊರಾಟ ಮಾಡಬಹುದು ಎಂಬ ಆತಂಕವೂ ಇದೆ. ರೆಡ್ಡಿ ಜೊತೆ ಬಿಜೆಪಿ ಏಕೆ ಕೈ ಜೋಡಿಸಬಾರದು ಎಂದು ತಿಳಿಯೋಣ ಬನ್ನಿ. [ರೆಡ್ಡಿಗೆ ಕೋರ್ಟ್ ವಿಧಿಸಿದ ಷರತ್ತುಗಳೇನು?] [ರೆಡ್ಡಿ ಬಿಜೆಪಿಗೆ ಸೇರಬೇಕೆ ವೋಟ್ ಮಾಡಿ]

ಕಾರಣ 1 : ದೆಹಲಿ ಚುನಾವಣೆ ಮೇಲೆ ಪರಿಣಾಮ
ಫೆ.7ರಂದು ದೆಹಲಿಯಲ್ಲಿ ವಿಧಾನಸಭೆ ಚುನಾವಣೆಯಿದೆ. ಒಂದು ವೇಳೆ ಜನಾರ್ದನ ರೆಡ್ಡಿ ಅವರು ಜೈಲಿನಿಂದ ಬಿಡುಗಡೆ ಆದ ತಕ್ಷಣ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಬಿಜೆಪಿ ಘೋಷಣೆ ಮಾಡಿದರೆ, ಅದರ ಪ್ರಭಾವ ರಾಷ್ಟ್ರಮಟ್ಟದಲ್ಲಿ ದೆಹಲಿ ಚುನಾವಣೆ ಮೇಲಾಗುವ ಸಾಧ್ಯತೆ ಇದೆ. ಇದನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ವಿರುದ್ಧ ಹೋರಾಟ ಮಾಡಬಹುದು.

ಕಾರಣ 2 : ಕಾನೂನು ಹೋರಾಟ ಬಾಕಿ ಇದೆ
ಜನಾರ್ದನ ರೆಡ್ಡಿ ಜೊತೆ ಮತ್ತೆ ಕೈ ಜೋಡಿಸುತ್ತೇವೆ ಎಂದು ಬಿಜೆಪಿ ನಾಯಕರು ನಿರ್ಧರಿಸಿದರೆ ಅವರಿಗೆ ಸೂಕ್ತ ಹುದ್ದೆ ನೀಡಬೇಕಾಗುತ್ತದೆ. ರೆಡ್ಡಿ ಅವರು ಜಾಮೀನು ಪಡೆದಿದ್ದಾರೆ ಅಷ್ಟೆ. ಆದರೆ, ಅವರ ಮೇಲಿನ ಆರೋಪಗಳಿಂದ ಮುಕ್ತವಾಗಿಲ್ಲ. ಆದ್ದರಿಂದ ರೆಡ್ಡಿ ಕಾನೂನು ಹೋರಾಟ ಮುಂದುವರೆಸಬೇಕು. ಪಕ್ಷ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಅಸಾಧ್ಯ. ಆದ್ದರಿಂದ ರೆಡ್ಡಿ ಜೊತೆ ಕೈ ಜೋಡಿಸುವ ಸಾಧ್ಯತೆ ಕಡಿಮೆ.

ಕಾರಣ 3 : ಕರ್ನಾಟಕದಲ್ಲಿ ಪಕ್ಷದ ಹೋರಾಟಕ್ಕೆ ಹಿನ್ನಡೆ
ಕರ್ನಾಟಕದಲ್ಲಿ ಸದ್ಯ ಕಾಂಗ್ರೆಸ್ ಸರ್ಕಾರವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅರ್ಕಾವತಿ ಡಿನೋಟಿಫಿಕೇಶನ್ ಸೇರಿದಂತೆ ವಿವಿಧ ರೀತಿಯ ಹೋರಾಟಗಳನ್ನು ಬಿಜೆಪಿ ಆರಂಭಿಸುತ್ತಿದೆ. ರೆಡ್ಡಿ ಜೊತೆ ಕೈ ಜೋಡಿಸಿದರೆ, ಜೈಲಿಗೆ ಹೋಗಿ ಬಂದು, ಆರೋಪ ಎದುರಿಸುತ್ತಿರುವವರನ್ನು ಪಕ್ಷಕ್ಕೆ ಸೇರಿಸಿಕೊಂಡಿಂದ್ದಾರೆ ಎಂದು ಕಾಂಗ್ರೆಸ್ ಬಿಜೆಪಿಗೆ ತಿರುಗೇಟು ನೀಡಬಹುದು.

ಕಾರಣ 4 : ಇಂದಿನ ಪರಿಸ್ಥಿತಿಯೇ ಬದಲಾಗಿದೆ
ಅಂದು ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಇದ್ದ ಪರಿಸ್ಥಿತಿಯೇ ಬೇರೆ, ಇಂದಿನ ಪರಿಸ್ಥಿತಿಯೇ ಬೇರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಈಗ ಪಕ್ಷ ಸಂಘಟನೆ ಮಾಡಲಾಗುತ್ತಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಚುನಾವಣೆಯೂ ಇಲ್ಲದಿರುವುದರಿಂದ ರೆಡ್ಡಿ ಜೊತೆ ಕೈ ಜೋಡಿಸಲು ಅಂತಹ ಅನಿವಾರ್ಯತೆ ಇಲ್ಲ.

ಕಾರಣ 5 : ಬದಲಾದ ಬಳ್ಳಾರಿ ರಾಜಕೀಯ
ಬಳ್ಳಾರಿಯ ರಾಜಕೀಯ ಸದ್ಯದ ಮಟ್ಟಿಗೆ ಬದಲಾಗಿದೆ. ಸುಪ್ರೀಂ ಆದೇಶದಂತೆ ರೆಡ್ಡಿ ಬಳ್ಳಾರಿಗೆ ಸದ್ಯಕ್ಕೆ ಕಾಲಿಡುವಂತಿಲ್ಲ. ಬಳ್ಳಾರಿ ಗ್ರಾಮಾಂತರ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಸೋಲು ಅನುಭವಿಸಿದೆ. ಆದ್ದರಿಂದ ರೆಡ್ಡಿ ಜೊತೆ ಕೈ ಜೋಡಿಸಲು ಬಿಜೆಪಿ ಮುಂದಾಗುವುದಿಲ್ಲ.

ಕಾರಣ 6 : ಕ್ಲೀನ್ ಇಮೇಜ್ಗೆ ಧಕ್ಕೆ
ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ, ಹಗರಣಗಳನ್ನು ಆಧಾರವಾಗಿಟ್ಟುಕೊಂಡು ಕೇಂದ್ರದಲ್ಲಿ ಬಿಜೆಪಿ ಅಧಿಕಾರಪಡೆದಿದೆ. ಕ್ಲೀನ್ ಇಮೇಜ್ ಕಾಪಾಡಿಕೊಂಡು ಬಂದಿದೆ. ಒಂದು ವೇಳೆ ಜನಾರ್ದನ ರೆಡ್ಡಿ ಅವರ ಜೊತೆ ಕೈ ಜೋಡಿಸಿದರೆ ಪಕ್ಷ ಕ್ಲೀನ್ ಇಮೇಜ್ಗೆ ಧಕ್ಕೆ ಉಂಟಾಗಬಹುದು. ಆದ್ದರಿಂದ ಬಿಜೆಪಿ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ.

ಕಾರಣ 7 : ಹೊಸ ಮುಖಗಳಿಗೆ ಹುಡುಕಾಟ
ಸದ್ಯ ಬಿಜೆಪಿ ಎಲ್ಲಾ ರಾಜ್ಯಗಳಲ್ಲಿ ಹೊಸ ಮುಖಗಳಿಗಾಗಿ ಹುಡುಕಾಟ ನಡೆಸುತ್ತಿದೆ. ಮಹಾರಾಷ್ಟ್ರ, ಜಾರ್ಖಂಡ್, ಹೊಸ ಮುಖಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದೆ. ದೆಹಲಿಯಲ್ಲಿಯೂ ಹೀಗೆ ಮಾಡುತ್ತಿದೆ. ಆದ್ದರಿಂದ ಜನಾರ್ದನ ರೆಡ್ಡಿ ಜೊತೆ ಕೈ ಜೋಡಿಸುವ ಮೊದಲು ಪಕ್ಷ ಸುತ್ತಿನ ಚಿಂತನ-ಮಂಥನ ನಡೆಸಲಿದೆ.












Click it and Unblock the Notifications