ರಾಜಕಾರಣದಲ್ಲಿ ಬಿಜೆಪಿ ಗೆಲುವು ಅನಿವಾರ್ಯ: ಕೋಟ ಶ್ರೀನಿವಾಸ ಪೂಜಾರಿ
ಉತ್ತರ ಕನ್ನಡ, ಡಿಸೆಂಬರ್ 21: ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿ ಗೆಲುವು ಅನಿವಾರ್ಯ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಈ ಕುರಿತು ಮುರುಡೇಶ್ವರದಲ್ಲಿ ಮಂಗಳವಾರ ಆರಂಭವಾದ ಬಿಜೆಪಿ ರಾಜ್ಯ ಪದಾಧಿಕಾರಿಗಳ ವಿಶೇಷ ಸಭೆ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಾಧನೆಗಳನ್ನು ನಾವು ಜನರಿಗೆ ತಿಳಿಸಿದ್ದೇವೆಯೇ? ಎಂದು ಕೇಳಿದರಲ್ಲದೇ ಸ್ವಾಭಿಮಾನಿ ಭಾರತದಲ್ಲಿ ಕರ್ನಾಟಕ ರಾಜಕಾರಣದಲ್ಲಿ ಬಿಜೆಪಿ ಗೆಲುವು ಅನಿವಾರ್ಯ. ಅದಕ್ಕಾಗಿ ಬೂತ್ ಗೆಲುವು, ಶಕ್ತಿ ಕೇಂದ್ರಗಳು, ಮಹಾಶಕ್ತಿ ಕೇಂದ್ರಗಳನ್ನು ಚುರುಕುಗೊಳಿಸಬೇಕಿದೆ ಎಂದರು.
ಜಿಲ್ಲಾ ಮತ್ತು ರಾಜ್ಯ ಸಮಿತಿಗಳ ಜೊತೆಗೂಡಿ ಎಲ್ಲರೂ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಕಿಸಾನ್ ಸಮ್ಮಾನ್ ಯೋಜನೆ ಬಡವರ ಮನೆಗೆ ಅರ್ಜಿ ಕೊಡದೆ ಬರುತ್ತಿದೆ. ರೈತರ ಜಾಗೃತಿ ಮಾಡಬೇಕು. ಆಯುಷ್ಮಾನ್ ಸೇರಿ ಎಲ್ಲ ಯೋಜನೆಗಳ ಕುರಿತು ನೆನಪಿಸಬೇಕಿದೆ. ಮೀಸಲಾತಿ ಪ್ರಮಾಣ ಹೆಚ್ಚಳ, ಉಚಿತ ವಿದ್ಯುತ್, ವಿದ್ಯಾನಿಧಿ ಸೇರಿ ವಿವಿಧ ಯೋಜನೆಗಳ ಕುರಿತ ಮಾಹಿತಿ ಕೊಡಬೇಕಿದೆ ಎಂದು ಕಿವಿಮಾತು ಹೇಳಿದರು.

ನರೇಂದ್ರ ಮೋದಿ ಅವರ ಕುರಿತು ಟೀಕೆ ಮಾಡುವವರಿಗೆ ಸ್ಪಷ್ಟ ಉತ್ತರ ಕೊಡಬೇಕಿದೆ ಎಂದು ತಿಳಿಸಿದರು. ಜನಪರ- ಬಡವರ ಪರ ಯೋಜನೆಗಳ ಅನುಷ್ಠಾನದ ಕುರಿತು ತಿಳಿಸಬೇಕು. ಅರ್ಥಗರ್ಭಿತ ಯೋಜನೆಗಳ ಕುರಿತು ಪ್ರತಿಕ್ರಿಯೆ ಪಡೆಯಬೇಕು. ಇದು ಮತವಾಗಿ ಪರಿವರ್ತನೆ ಆಗುವಂತಾಗಲಿ. ಅಂಥ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸಲಹೆ ನೀಡಿದರು.
ಬಿಜೆಪಿ ಬಗ್ಗೆ ಅನುಮಾನ ಪಡುತ್ತಿದ್ದ ದಲಿತ ಮುಖಂಡರು, ದಲಿತ ಜನಾಂಗ, ಪರಿಶಿಷ್ಟ ಜಾತಿ, ಪಂಗಡಗಳೀಗ ಬಿಜೆಪಿಯತ್ತ ಆಕರ್ಷಿತವಾಗುತ್ತಿವೆ. ಇದನ್ನು ಮತವಾಗಿ ಪರಿವರ್ತಿಸುವ ಹೊಣೆಯನ್ನು ನಾವು ಹೊರಬೇಕು ಎಂದು ತಿಳಿಸಿದರು.
ಬಿಜೆಪಿ ಆಡಳಿತವು ಗ್ರಾಮ ಪಂಚಾಯಿತಿ ಸದಸ್ಯರ, ಅಧ್ಯಕ್ಷರ, ಉಪಾಧ್ಯಕ್ಷರ ಗೌರವಧನ ಹೆಚ್ಚಳ ಮಾಡಿದ್ದನ್ನು ತಿಳಿಸಬೇಕಿದೆ. ರಾಜ್ಯಾಧ್ಯಕ್ಷರ ಸಲಹೆ ಮೇರೆಗೆ ಗೌರವಧನವನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ. 90 ಸಾವಿರಕ್ಕೂ ಹೆಚ್ಚು ಜನರಿಗೆ ಇದರ ಪ್ರಯೋಜನ ಲಭಿಸಿದೆ ಎಂದು ಮೆಚ್ಚುಗೆ ಸೂಚಿಸಿದರು. ಇದಕ್ಕಾಗಿ 138 ಕೋಟಿ ಬಿಡುಗಡೆ ಮಾಡಿದ್ದು, ಇದರ ಪ್ರಯೋಜನ ಪಡೆಯಬೇಕಲ್ಲವೇ ಎಂದು ಪ್ರಶ್ನಿಸಿದರು.

ಟಿಪ್ಪು ನರಮೇಧದ ಕುರಿತು ಸಾಮಾನ್ಯ ಜನರಿಗೆ ಮನವರಿಕೆ ಮಾಡಬೇಕಲ್ಲವೇ? ವೀರ ಸಾವರ್ಕರ್ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿದ್ದನ್ನು ಖಂಡಿಸಬೇಕಲ್ಲವೇ? ಎಂದು ಪ್ರಶ್ನಿಸಿದ ಅವರು, ವೀರ ಸಾವರ್ಕರ್ ಫೋಟೋ ಅನಾವರಣ ಗಂಡುಮೆಟ್ಟಿನ ನೆಲದ ತಾಕತ್ತು ಎಂದು ಹೇಳಿದರು.
ಬೇಹಗಾರಿಕೆ ದಳಗಳು ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಗೆಲುವಿನ ಸೂಚನೆ ನೀಡುತ್ತಿವೆ. ಬಿಜೆಪಿ 150 ಸೀಟು ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ವೆಂಕಟೇಶ್ ನಾಯಕ್, ಶಾಸಕರಾದ ಸುನೀಲ್ ನಾಯ್ಕ, ದಿನಕರ್ ಶೆಟ್ಟಿ, ರೂಪಾಲಿ ನಾಯ್ಕ ಮತ್ತು ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications