ಕಮಲ ಬಿಟ್ಟು ಕೈ ಹಿಡಿಯಲು ಸಜ್ಜಾದ ಎಸ್ ಟಿ ಸೋಮಶೇಖರ್- ಕಾಂಗ್ರೆಸ್ ಕೊಟ್ಟ ಆಫರ್ ಏನು ಗೊತ್ತಾ?
ಬೆಂಗಳೂರು, ಫೆಬ್ರವರಿ 28: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದು, ಇತ್ತ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರಚನೆಯಾಗಿದೆ. ಬಿಜೆಪಿ ಪಕ್ಷಕ್ಕೆ ಹೋದ ಕಾಂಗ್ರೆಸ್ ನಾಯಕರು ಇದೀಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ ಎನ್ನುವ ಚರ್ಚೆಗಳು ಶುರವಾಗಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ ಉಂಟುಮಾಡಿರುವ ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಟಿ ಸೋಮಶೇಖರ್ ಕಮಲ ಪಡೆಯ ಸರಹದ್ದು ದಾಟಿ ಹೋಗುವುದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಎಸ್ ಟಿ ಸೋಮಶೇಖರ್ ಗೆ ಕಾಂಗ್ರೆಸ್ ಎಂಪಿ ಟಿಕೆಟ್ ಆಫರ್ ಮಾಡಿದೆ ಎನ್ನಲಾಗಿದ್ದು, ಹಸ್ತದ ಗುರುತಿನಲ್ಲಿ ಯಶವಂತಪುರ ಶಾಸಕರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದೆ.

ಈಗಾಗಲೇ ಬಿಜೆಪಿಯಿಂದ ಸಾಕಷ್ಟು ಅಂತರವನ್ನ ಕಾಯ್ದುಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದ ಎಸ್ ಟಿ ಸೋಮಶೇಖರ್ ಅವರು ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ವಿರುದ್ಧ ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಬಿಜೆಪಿ ಹತ್ತು ಹಲವು ಕೋನಗಳಿಂದ ಪರಾಮರ್ಶಿಸುತ್ತಿದೆ. ಆದರೆ, ಬಿಜೆಪಿ ಶಿಸ್ತು ಕ್ರಮದ ಮುನ್ನವೇ ಎಸ್ಟಿ ಸೋಮಶೇಖರ್ ಕೇಸರಿ ಪಡೆ ಕಾಂಗ್ರೆಸ್ ಪಡೆಯತ್ತ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜಕೀಯ ಭವಿಷ್ಯದ ಬಗ್ಗೆ ಸಾಕಷ್ಟು ಅಳೆದೂ ತೂಗಿ ನೋಡಿದ ಬಳಿಕವೇ ಎಸ್ಟಿ ಸೋಮಶೇಖರ್ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಂದ ಅಭಯ ಸಿಕ್ಕಿದ್ದು, ಮುಂದಿನ ನಡೆಯ ಬಗ್ಗೆಯೂ ಈ ಮೊದಲೇ ಚರ್ಚೆಯಾಗಿದೆ. ಅದರಂತೆ ಲೋಕಸಭಾ ಚುನಾವಣೆಗೆ ಕಣಕ್ಕಿಳಿಯಲು ಸಿದ್ಧತೆ ಆರಂಭಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಎಸ್ಟಿ ಸೋಮಶೇಖರ್ ಅವರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡುವ ಆಫರ್ ಅನ್ನು ಕಾಂಗ್ರೆಸ್ ನೀಡಿದ್ದರೆ, ತೆರವಾದ ಯಶವಂತಪುರ ವಿಧಾನಸೌಧ ಕ್ಷೇತ್ರದಿಂದ ಪುತ್ರನಿಎ ಟಿಕೆಟ್ ನೀಡುವ ಭರವಸೆಯನ್ನ ಕಾಂಗ್ರೆಸ್ ನಾಯಕರು ನೀಡಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಯ ತಯಾರಿ ಹಾಗೂ ಯಶವಂತಪುರ ವಿಧಾನಸಭಾ ಉಪಚುನಾವಣೆಯಲ್ಲಿ ಪುತ್ರನ ಕಣಕ್ಕಿಳಿಸುವ ಕುರಿತು ಕಾಂಗ್ರೆಸ್ ನಾಯಕರ ಜೊತೆಗೆ ಚರ್ಚೆಯಾಗಿದೆ. ಮಾಜಿ ಸಚಿವ ಎಸ್ ಟಿ ಸೋಮಶೇಖರ್ ಬೇಡಿಕೆಗೂ ಕಾಂಗ್ರೆಸ್ ನಾಯಕರು ಒಪ್ಪಿಗೆ ಸೂಚಿಸಿದ್ದು, ಶೀಘ್ರವೇ ಚುನಾವಣಾ ಕೆಲಸ ಆರಂಭಿಸಿ ಎಂದು ಸೂಚನೆ ಕೊಟ್ಟಿದ್ದಾರೆ ಎಂಬ ಮಾತು ಕೇಳಿಬಂದಿದೆ.












Click it and Unblock the Notifications