ಲಡ್ಡು ವಿವಾದ: ಕ್ರೈಸ್ತರ ವಿರುದ್ಧ ಶಾಸಕ ಯತ್ನಾಳ್ ಗಂಭೀರ ಆರೋಪ
ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನೀಡುವ ವಿಶ್ವವಿಖ್ಯಾತ ಲಡ್ಡು ಈಗ ದೊಡ್ಡ ವಿವಾದಕ್ಕೆ ಸಿಲುಕಿದೆ. ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಸೇರಿದಂತೆ ಇತರ ಕಲಬೆರಕೆ ವಸ್ತುಗಳನ್ನು ಬಳಸುತ್ತಿರುವ ಬಗ್ಗೆ ಖುದ್ದು ಅಲ್ಲಿನ ಸಿಎಂ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದಾರೆ. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಮಾತನಾಡಿದ್ದಾರೆ.
ತಿರುಪತಿ ದೇವಸ್ಥಾನದ ಬೋರ್ಡ್ನಲ್ಲಿ ಈ ಹಿಂದೆ ಕ್ರೈಸ್ತರಿಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಸಹ ಹೇಳಲಾಗಿದ್ದು, ಈ ಬಗ್ಗೆ ಯತ್ನಾಳ್ ಕಿಡಿಕಾರಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನದ ಬೋರ್ಡ್ನಲ್ಲಿ ಕ್ರೈಸ್ತರನ್ನು ಸೇರಿಸಲಾಗಿತ್ತು. ಹಿಂದೂ ದೇವಳದ ಬೋರ್ಡಿನಲ್ಲಿ ಕ್ರೈಸ್ತರೆನಿಗೇನು ಕೆಲಸ? ಎಂದು ಪ್ರಶ್ನಿಸಿದ್ದಾರೆ.

ಹಿಂದೂ ಧಾರ್ಮಿಕ ವಿಧಿ ವಿಧಾನಗಳು, ಆಚರಣೆಗಳು, ನೀತಿಗಳ ಬಗ್ಗೆ ಕ್ರೈಸ್ತರಿಗೇನು ಗೊತ್ತು? ಹಿಂದೂ ದೇವಾಲಯಗಳ, ದೇವರ ಬಗ್ಗೆ ನಂಬಿಕೆ ಇಲ್ಲದವರಿಗೆ ತಿರುಪತಿ ಲಡ್ಡುವಿನ ಟೆಂಡರ್ ನೀಡಲಾಗಿತ್ತು. ಹಿಂದೂಗಳು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಒಗ್ಗಟ್ಟಿಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಇಂದೊಂದು ಸ್ಪಷ್ಟ ನಿದರ್ಶನ ಎಂದು ಕರೆ ನೀಡಿದ್ದಾರೆ.
ಮತ್ತೊಬ್ಬ ಬಿಜೆಪಿ ನಾಯಕ ಸುನೀಲ್ ಡಿಯೋಧರ್ ಕೂಡ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಆಂಧ್ರ ಮಾಜಿ ಸಿಎಂ ಜಗನ್ ಅವರ ತಂದೆ ರಾಜಶೇಖರ ರೆಡ್ಡಿ ಅವರು ಅಧಿಕಾರದಲ್ಲಿದ್ದಾಗ, ತಿರುಪತಿಯ 7 ಬೆಟ್ಟಗಳಲ್ಲಿ 3 ಬೆಟ್ಟಗಳನ್ನು ಚರ್ಚ್ಗೆ ನೀಡಿದ್ದರು. ಹಲವಾರು ಕ್ರಿಶ್ಚಿಯನ್ನರನ್ನು ಟಿಟಿಡಿ ಮಂಡಳಿಗೂ ಸೇರಿಸಲಾಯಿತು ಎಂದು ವರದಿಯಾಗಿದೆ. ಕ್ರಿಶ್ಚಿಯನ್ವೊಬ್ಬ ಭಗವಾನ್ ತಿರುಪತಿ ಬಾಲಾಜಿಯನ್ನು ʼಶೈತಾನʼ ಎಂದು ಕರೆಯುತ್ತಿದ್ದ. ಸ್ವತಃ ಗೋಮಾಂಸ ಸೇವಿಸಿದವನಿಗೆ ತಿರುಪತಿಲಡ್ಡು ಟೆಂಡರ್ ನೀಡಲಾಗಿದೆ ಎಂದು ದೂರಿದ್ದಾರೆ. ಇದನ್ನು ಉಲ್ಲೇಖಿಸಿರುವ ಬಸನಗೌಡ ಪಾಟೀಲ್ ಯತ್ನಾಳ್, ಕ್ರೈಸ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿರುಮಲ ಶ್ರೀವಾರಿ ಲಡ್ಡು ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶಾಕಿಂಗ್ ಹೇಳಿಕೆ ನೀಡಿದ್ದರು. ಹಿಂದಿನ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿ ಪ್ರಸಾದ ತಯಾರಿಕೆಗೆ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಅವರು ಟೀಕಿಸಿದ್ದರು. ಈ ಆರೋಪ ಸದ್ಯ ಆಂಧ್ರ ಪ್ರದೇಶದಲ್ಲಿ ಸಂಚಲನವನ್ನು ಸೃಷ್ಟಿಮಾಡಿತ್ತು.
ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಮಲ ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ. ಇದರಿಂದಾಗಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯಾಗಿದೆ. ದೇವರಿಗೆ ಅರ್ಪಿಸುವ ನೈವೇದ್ಯವನ್ನು ಅಪವಿತ್ರಗೊಳಿಸಲಾಗಿದೆ ಎಂದು ಆರೋಪ ಮಾಡಿದ್ದರು. ಜಗನ್ ಮೋಹನ್ ಅವರ ಅಧಿಕಾರದ ಅವಧಿಯಲ್ಲಿ ಭಕ್ತರಿಗೆ ಕಳಪೆ ಲಡ್ಡೂಗಳು ಮತ್ತು ಕಳಪೆ ಗುಣಮಟ್ಟದ ಅನ್ನ ಪ್ರಸಾದವನ್ನು ವಿತರಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಟಿಡಿಪಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಿರುಮಲ ಲಡ್ಡು ತಯಾರಿಕೆಯಲ್ಲಿ ಶುದ್ಧ ತುಪ್ಪವನ್ನು ಬಳಸಲಾಗುತ್ತಿದೆ ಎಂದು ಚಂದ್ರಬಾಬು ಅವರು ಸಮರ್ಥಿಸಿಕೊಂಡಿದ್ದರು.

ಈ ಹೇಳಿಕೆಯು ಎಲ್ಲೆಡೆ ಸಂಚಲನ ಮೂಡಿಸಿದೆ. ತನಿಖಾ ವರದಿಯಲ್ಲೂ ಇದು ದೃಢಪಟ್ಟಿದ್ದು ತುಪ್ಪದ ಗುಣಮಟ್ಟವನ್ನು ಪರೀಕ್ಷೆ ಮಾಡಲು ಟಿಟಿಡಿ ಸಮಿತಿಯೊಂದನ್ನು ಸ್ಥಾಪಿಸಿದೆ. ಈ ವಿವಾದ ಭುಗಿಲೆದ್ದ ಬೆನ್ನಲ್ಲೇ ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಪ್ರಸಾದ ತಯಾರಿಕೆ ಸೇರಿ ಇನ್ನಿತರ ಉದ್ದೇಶಗಳಿಗೆ ಗುಣಮಟ್ಟದ ನಂದಿನಿ ತುಪ್ಪವನ್ನೇ ಬಳಸಬೇಕು ಎಂದು ಸುತ್ತೋಲೆ ಹೊರಡಿಸಿದೆ.












Click it and Unblock the Notifications