Breaking; ಬಿಜೆಪಿ ನಾಯಕ ಎಸ್. ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
ಬೆಂಗಳೂರು, ಸೆಪ್ಟೆಂಬರ್ 25: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಎಸ್. ಎಂ. ಕೃಷ್ಣರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜ್ವರದ ಹಿನ್ನಲೆ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ತೀವ್ರವಾದ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಎಸ್. ಎಂ. ಕೃಷ್ಣರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶನಿವಾರ ರಾತ್ರಿಯೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜ್ವರದ ಹಿನ್ನಲೆಯಲ್ಲಿ ಅವರು ಮೊದಲು ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಅವರನ್ನು ಮಣಿಪಾಲ್ ಆಸ್ಪತ್ರೆಗೆ ವೈದ್ಯರ ಸಲಹೆಯಂತೆ ಸ್ಥಳಾಂತರ ಮಾಡಲಾಗಿದೆ. ವೈದ್ಯರ ತಂಡ ಅವರ ಆರೋಗ್ಯಗ ಮೇಲೆ ಹೆಚ್ಚಿನ ನಿಗಾವಹಿಸಿದೆ.

90 ವರ್ಷದ ಎಸ್. ಎಂ. ಕೃಷ್ಣ ಸಕ್ರಿಯ ರಾಜಕೀಯದಿಂದ ದೂರವಾಗಿದ್ದಾರೆ. ಆಗಾಗ ಕೆಲವು ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ.
ಚಿಕಿತ್ಸೆಗೆ ಎಸ್. ಎಂ. ಕೃಷ್ಣ ಸ್ಪಂದಿಸುತ್ತಿದ್ದು, ಭಾನುವಾರ ಸಂಜೆ ಅಥವ ಸೋಮವಾರ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ. ಅವರ ಆರೋಗ್ಯದ ಬಗ್ಗೆ ಯಾವುದೇ ವದಂತಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಲಾಗಿದೆ.
ಎಸ್. ಎಂ. ಕೃಷ್ಣ ಆಪ್ತ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿದ್ದು, "ಎಸ್. ಎಂ. ಕೃಷ್ಣ ಅವರಿಗೆ ರಾತ್ರಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋವಿಡ್ ಮತ್ತು ಇತರ ಪರೀಕ್ಷೆ ಮಾಡಲಾಗಿದೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಯಾರೂ ಸಹ ಆಸ್ಪತ್ರೆ ಬಳಿ ಬರಬೇಡಿ. ಉಹಾಪೋಹದ ಮಾಹಿತಿಗಳನ್ನು ಹಬ್ಬಿಸಬಾರದು" ಎಂದರು.
2017ರಲ್ಲಿ ಬಿಜೆಪಿ ಸೇರಿದ್ದ ಎಸ್. ಎಂ. ಕೃಷ್ಣ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು. ಕೆಲವು ದಿನಗಳ ಹಿಂದೆ ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ ಸ್ಥಾಪಿಸಲಾದ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.












Click it and Unblock the Notifications