ಭಾರತ್ ಜೋಡೋಗೆ ಬಿಜೆಪಿ ಪ್ರತಿತಂತ್ರ; 7 ಬೃಹತ್ ಸಮಾವೇಶ!
ಬೆಂಗಳೂರು, ಅಕ್ಟೋಬರ್ 06; ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿದೆ. 21 ದಿನಗಳ ಕಾಲ ಯಾತ್ರೆ ಕರ್ನಾಟಕದಲ್ಲಿ ಸಂಚಾರ ನಡೆಸಲಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆಗೆ ಸದ್ಯ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಕರ್ನಾಟಕ ಬಿಜೆಪಿ ಕಾಂಗ್ರೆಸ್ ಪಾದಯಾತ್ರೆಗೆ ಪ್ರತಿತಂತ್ರ ರೂಪಿಸಿದೆ. ವಿಧಾನಸಭೆ ಚುನಾವಣೆ ಸಿದ್ಧತೆಗಾಗಿ ರಾಜ್ಯ ನಾಯಕರು ಪ್ರವಾಸ ಮಾಡಲಿದ್ದಾರೆ. 7 ಸಮಾವೇಶಗಳನ್ನು ಸಹ ಆಯೋಜನೆ ಮಾಡಲಾಗಿದೆ. ಒಟ್ಟು ಎರಡು ತಂಡಗಳಲ್ಲಿ ರಾಜ್ಯದ 140 ವಿಧಾನಸಭಾ ಕ್ಷೇತ್ರಗಳಲ್ಲಿ ರಾಜ್ಯ ನಾಯಕರು ಪ್ರವಾಸ ಮಾಡಲಿದ್ದಾರೆ.
Breaking; ವಿಡಿಯೋ; ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿ
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಕಾಂಗ್ರೆಸ್ಗಿಂತ ಒಂದು ತಿಂಗಳ ಹಿಂದೆಯೇ ನಾವು ಯಾತ್ರೆಗೆ ಯೋಜನೆ ರೂಪಿಸಿದ್ದೆವು. ಆದರೆ ಅಧಿವೇಶನ, ದಸರಾ ಬಂದ ಕಾರಣ ಈಗ ಯಾತ್ರೆ ಮಾಡುತ್ತಿದ್ದೇವೆ" ಎಂದು ಹೇಳಿದ್ದಾರೆ.
ಬಿಆರ್ಎಸ್ ಜೊತೆ ಮೈತ್ರಿ; ಜೆಡಿಎಸ್ ಲೆಕ್ಕಾಚಾರವೇನು?
ಕರ್ನಾಟಕದ ಭಾರತ್ ಜೋಡೋ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, "ಸ್ವಾಭಾವಿಕವಾಗಿ ಅವರ ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ. ಸೋನಿಯಾ ಗಾಂಧಿ ಅರ್ಧ ಕಿಲೋ ಮೀಟರ್ ನಡೆದು ವಾಪಸ್ ಹೋಗಿದ್ದಾರೆ. ಇದರಿಂದ ಯಾವುದೇ ಪರಿಣಾಮ ಆಗುವುದಿಲ್ಲ" ಎಂದು ವಿಶ್ಲೇಷಿಸಿದರು.
ಕರ್ನಾಟಕ: ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ ಅಮಿತ್ ಶಾ ಭಾಗಿ ಸಾಧ್ಯತೆ
ಎರಡು ತಂಡಗಳ ರಾಜ್ಯ ಪ್ರವಾಸ
ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಬಿಜೆಪಿ ರಾಜ್ಯ ಪ್ರವಾಸ ಆಯೋಜನೆ ಮಾಡಿದೆ. ಅಕ್ಟೋಬರ್ 11ರಿಂದ ರಾಜ್ಯ ಪ್ರವಾಸ ಆರಂಭಗೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಂಡ 90 ಕ್ಷೇತ್ರಗಳಲ್ಲಿ ವಾರಕ್ಕೆ ಮೂರು ದಿನಗಳ ಕಾಲ ಪ್ರವಾಸ ಮಾಡಲಿದ್ದಾರೆ. ಈ ಪ್ರವಾಸದ ವೇಳೆ ಮಠಗಳಿಗೆ ಭೇಟಿ, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದವೂ ನಡೆಯಲಿದೆ.
ಎರಡನೇ ತಂಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರವಾಸ ನಡೆಸಲಿದ್ದಾರೆ. ಈ ತಂಡ 50 ಕ್ಷೇತ್ರಗಳಲ್ಲಿ ಪ್ರವಾಸ ನಡೆಸಲಿದ್ದು, ಡಿಸೆಂಬರ್ ಒಳಗೆ ಈ ಪ್ರವಾಸ ಮುಕ್ತಾಯಗೊಳಿಸುವ ಗುರಿಯನ್ನು ಪಕ್ಷ ಹೊಂದಿದೆ.
7 ಬೃಹತ್ ಸಮಾವೇಶಗಳು
ವಿಧಾನಸಭಾ ಕ್ಷೇತ್ರಗಳ ಪ್ರವಾಸದ ಜೊತೆ ಬಿಜೆಪಿ ರಾಜ್ಯದ 7 ಕಡೆ ಬೃಹತ್ ಸಮಾವೇಶ ಆಯೋಜನೆ ಮಾಡಿದೆ. ಮೈಸೂರಿನಲ್ಲಿ ಎಸ್ಸಿ ಸಮಾವೇಶ, ಕಲಬುರಗಿಯಲ್ಲಿ ಒಬಿಸಿ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಸಮಾವೇಶ, ಬಳ್ಳಾರಿಯಲ್ಲಿ ಎಸ್ಟಿ ಸಮಾವೇಶ, ಮಂಗಳೂರಿನಲ್ಲಿ ಯುವ ಸಮಾವೇಶ ಮತ್ತು ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ ನಡೆಸಲಾಗುತ್ತದೆ.
ಈ ಸಮಾವೇಶಗಳಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರಾದ ಜೆ. ಪಿ. ನಡ್ಡಾ, ಅಮಿತ್ ಶಾ ಮತ್ತು ಇತರ ನಾಯಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸಮಾವೇಶದ ದಿನಾಂಕಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುತ್ತದೆ.
ನಳಿನ್ ಕುಮಾರ್ ಕಟೀಲ್ ಹೇಳಿಕೆ
ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 30ರಂದು ರಾಜ್ಯಕ್ಕೆ ಪ್ರವೇಶ ಮಾಡಿದೆ. ಗುರುವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಯಾತ್ರೆಯಲ್ಲಿ ಪಾಲ್ಗೊಂಡು ಶಕ್ತಿ ತುಂಬಿದ್ದಾರೆ. ಆದರೆ ಬಿಜೆಪಿ ಭಾರತ್ ಜೋಡೋ ಯಾತ್ರೆ ಬಗ್ಗೆ ಟೀಕೆಗಳನ್ನು ಮುಂದುವರೆಸುತ್ತಲೇ ಇದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, "ಭಾರತ ಐಕ್ಯತಾ ಯಾತ್ರೆ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ. ಬದಲಿಗೆ ಕಾಂಗ್ರೆಸ್ಗರಲ್ಲೇ ಗೊಂದಲ ಹೆಚ್ಚಿಸಿದೆ, ಯಾತ್ರೆ ಮುಗಿಯುವ ಹೊತ್ತಿಗೆ ಅವರಲ್ಲೇ ಗಲಾಟೆ ಹೆಚ್ಚಾಗಿ ಎರಡು ಗುಂಪುಗಳ ಬಡಿದಾಟ ತಾರಕಕ್ಕೇರಲಿದೆ. ಅಕ್ಟೋಬರ್ 9ರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ತಂಡದ ರಾಜ್ಯ ಪ್ರವಾಸ ಆರಂಭವಾಗಲಿದ್ದು, ಪಕ್ಷ ಸಂಘಟನೆ ದೃಷ್ಟಿಯಿಂದ ಬಿಜೆಪಿ ಚಟುವಟಿಕೆಗಳು ಮುಂದುವರೆಯಲಿವೆ" ಎಂದು ಹೇಳಿದ್ದಾರೆ.
ಪ್ರಧಾನಿ ಭೇಟಿ, ಸಮಾವೇಶಗಳು
ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಮೋದಿ ಭೇಟಿಯ ವೇಳೆ ಸಮಾವೇಶಗಳನ್ನು ಆಯೋಜಿಸಲು ಬಿಜೆಪಿ ತೀರ್ಮಾನಿಸಿದೆ. ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸಲು ಪಂಚಸೂತ್ರಗಳನ್ನು ಬಿಜೆಪಿ ಸಿದ್ಧಪಡಿಸಿದೆ. ಇವುಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರ ಸೇರಿದಂತೆ ವಿವಿಧ ಅಂಶಗಳು ಸೇರಿವೆ.