ಇನ್ನು ಜಗದೀಶ್ ಶೆಟ್ಟರ್ ಪ್ರತಿಪಕ್ಷದ ನಾಯಕ
ಬೆಂಗಳೂರು, ಜ.23 : ಬಿ.ಎಸ್.ಯಡಿಯೂರಪ್ಪ ಅವರ ಕೆಜೆಪಿ ಬಿಜೆಪಿಯೊಂದಿಗೆ ವಿಲೀನಗೊಂಡಿರುವ ಹಿನ್ನಲೆಯಲ್ಲಿ ಕರ್ನಾಟಕದ ವಿರೋಧ ಪಕ್ಷ ಸ್ಥಾನ ಬಿಜೆಪಿ ಪಾಲಾಗಲಿದೆ. ಜಗದೀಶ್ ಶೆಟ್ಟರ್ ವಿರೋಧ ಪಕ್ಷದ ನಾಯಕರು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಗುರುವಾರ ವಿಧಾನಮಂಡಲ ಅಧಿವೇಶನದಲ್ಲಿ ಘೋಷಿಸಿದ್ದಾರೆ.
ವಿಧಾನಮಂಡಲ ಕಲಾಪದ ಎರಡನೇ ದಿನ ಸದನ ಸಮಾವೇಶಗೊಳ್ಳುತ್ತಿದ್ದಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಬಿಜೆಪಿಗೆ ಪ್ರತಿಪಕ್ಷ ಸ್ಥಾನ ನೀಡಲಾಗಿದೆ ಎಂದು ಘೋಷಿಸಿದರು. ಇದರಿಂದ ಇಷ್ಟುದಿನ ಪ್ರತಿಪಕ್ಷ ನಿರ್ವಹಿಸುತ್ತಿದ್ದ ಜೆಡಿಎಸ್ ಪಕ್ಷಕ್ಕೆ ಸ್ಥಾನ ಕೈ ತಪ್ಪಿದೆ. ವಿಧಾನಸಭೆ ಪ್ರತಿಪಕ್ಷದ ನಾಯಕರಾಗಿ ಜಗದೀಶ್ ಶೆಟ್ಟರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದಾರೆ ಮತ್ತು ನಾಲ್ವರು ಕೆಜೆಪಿ ಶಾಸಕರನ್ನು ಬಿಜೆಪಿಯ ಶಾಸಕರೆಂದು ಪರಿಣಿಸಬೇಕೆಂದು ಸ್ಪೀಕರ್ ಗೆ ಮನವಿ ಮಾಡಿದ್ದರು. ಬುಧವಾರ ನಾಲ್ವರು ಶಾಸಕರಿಗೆ ಬಿಜೆಪಿ ಶಾಸಕರಾಗಿ ಸ್ಪೀಕರ್ ಮಾನ್ಯತೆ ನೀಡಿದ್ದರು. [ಕೆಜೆಪಿ ಶಾಸಕರಿಗೆ ಮಾನ್ಯತೆ ನೀಡಿದ ಸ್ಪೀಕರ್]
ಮೊದಲು ಬಿಜೆಪಿ ಹಾಗೂ ಜೆಡಿಎಸ್ ವಿಧಾನಸಭೆಯಲ್ಲಿ 40 ಶಾಸಕರ ಬಲಾಬಲ ಹೊಂದಿದ್ದವು. ನಾಲ್ವರು ಕೆಜೆಪಿ ಶಾಸಕರು ಬಿಜೆಪಿ ಸೇರಿದ ಹಿನ್ನಲೆಯಲ್ಲಿ ಬಿಜೆಪಿ ಬಲ 44ಕ್ಕೆ ಏರಿಕೆಯಾಗಿದೆ. ಆದ್ದರಿಂದ ಬಿಜೆಪಿಯನ್ನು ಅಧಿಕೃತ ಪ್ರತಿಪಕ್ಷವಾಗಿ ಘೋಷಿಸಲಾಗಿದೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದರು. [ಬಿಎಸ್ಆರ್-ಜೆಡಿಎಸ್ ವಿಲೀನ]
ಜೆಡಿಎಸ್-ಬಿಎಸ್ಆರ್ ವಿಲೀನವಾದರೆ : ಒಂದು ವೇಳೆ ಜೆಡಿಎಸ್ ಪಕ್ಷದಲ್ಲಿ ಬಿ.ಶ್ರೀರಾಮುಲು ನೇತೃತ್ವದ ಬಿಎಸ್ಆರ್ ಕಾಂಗ್ರೆಸ್ ವಿಲೀನಗೊಂಡರೆ ಪುನಃ ಜೆಡಿಎಸ್ ಪ್ರತಿಪಕ್ಷ ಸ್ಥಾನ ಪಡೆಯಲಿದೆ. ಪಕ್ಷಗಳು ವಿಲೀನಗೊಂಡರೆ. ಬಿಎಸ್ಆರ್ ಕಾಂಗ್ರೆಸ್ಸಿನ 4 ಶಾಸಕರು ಜೆಡಿಎಸ್ ಶಾಸಕಾಂಗ ಪಕ್ಷದ ಸದಸ್ಯರಾಗುತ್ತಾರೆ. ಆಗ, ಮತ್ತೂಮ್ಮೆ ಸ್ಥಾನಗಳ ಬಲಾಬಲ ತಲಾ 44ಕ್ಕೆ ಬರುತ್ತದೆ. ಮತ ಗಳಿಕೆ ಪ್ರಮಾಣದಲ್ಲಿ ಜೆಡಿಎಸ್ ಮೊದಲ ಸ್ಥಾನದಲ್ಲಿ ನಿಲ್ಲುವುದರಿಂದ ಬಿಜೆಪಿಗೆ ಹಿನ್ನಡೆಯಾಗಲಿದ್ದು, ಜೆಡಿಎಸ್ ಗೆ ಪ್ರತಿಪಕ್ಷ ಪಟ್ಟ ಒಲಿಯಲಿದೆ.












Click it and Unblock the Notifications