ಸಿಎಂ ಆಗುವ ಯಡಿಯೂರಪ್ಪ ಆಸೆಗೆ ಹೈಕಮಾಂಡ್ ತಣ್ಣೀರು!
Recommended Video
ಬೆಂಗಳೂರು, ಮೇ 31: ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಕಂಡು ಗೆಲುವಿನ ಅಲೆಯಲ್ಲಿ ತೇಲುತ್ತಾ ಸಿಎಂ ಆಗುವ ಕನಸು ಕಾಣುತ್ತಿರುವ ಯಡಿಯೂರಪ್ಪ ಅವರ ಆಸೆಗೆ ಬಿಜೆಪಿ ಹೈಕಮಾಂಡ್ ತಣ್ಣೀರು ಎರಚಿದೆ.
ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಉರುಳಿಸುವ ಯಾವುದೇ ಪ್ರಯತ್ನ ಮಾಡಬೇಡಿ ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟ ಸಂದೇಶವನ್ನು ಯಡಿಯೂರಪ್ಪ ಅವರಿಗೆ ಅಮಿತ್ ಶಾ ನೀಡಿದ್ದಾರೆ.
ಇಂದು ನವದೆಹಲಿಗೆ ತೆರಳಿ ಅಮಿತ್ ಶಾ ಸೇರಿದಂತೆ ಪಕ್ಷದ ಮುಖಂಡರೊಡನೆ ಸಮಾಲೋಚನೆ ನಡೆಸಿದ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಅವರು ಸ್ಪಷ್ಟ ಸೂಚನೆಗಳನ್ನು ಕೊಟ್ಟು ಕಳುಹಿಸಿದ್ದಾರೆ.
ಸ್ವತಃ ಈ ವಿಷಯವನ್ನು ಮಾಧ್ಯಮಗಳ ಮುಂದೆ ಹೇಳಿರುವ ಯಡಿಯೂರಪ್ಪ, ದೆಹಲಿಯಿಂದ ಬಂದ ಕೂಡಲೇ ಮಾಧ್ಯಮಗಳೊಂದಿಗೆ ಮಾತನಾಡಿ, ಸರ್ಕಾರ ಉರುಳಿಸಬೇಡಿರೆಂದು ಹೈಕಮಾಂಡ್ ನಮಗೆ ಆದೇಶ ನೀಡಿದೆ. ನಾವು ಅಂತಹಾ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ ಎಂದು ಹೇಳಿದ್ದಾರೆ.

'ಸರ್ಕಾರ ಇನ್ನಷ್ಟು ಗಟ್ಟಿಗೊಳ್ಳುತ್ತದೆ'
ಬಿಜೆಪಿಯು ಸರ್ಕಾರ ಬೀಳಿಸಲು ಮಾಡುತ್ತಿರುವ ಪ್ರಯತ್ನಗಳು ಮೈತ್ರಿ ಸರ್ಕಾರವನ್ನು ಇನ್ನಷ್ಟು ಹತ್ತಿರ ತರುತ್ತಿರುವುದನ್ನು ಗಮನಿಸಿರುವ ಹೈಕಮಾಂಡ್ ಈ ರೀತಿಯ ಆದೇಶವನ್ನು ನೀಡಿದೆ ಎಂದು ಊಹಿಸಬಹುದಾಗಿದೆ.

ಮಹಾರಾಷ್ಟ್ರ ರಾಜಕೀಯದ ಉದಾಹರಣೆ
ಮಹಾರಾಷ್ಟ್ರದಲ್ಲಿ ಸರ್ಕಾರ ಉರುಳಿಸಲು ಬಿಜೆಪಿ ಮಾಡಿದ ಪ್ರಯತ್ನಗಳು ವಿಫಲವಾಗಿ ಬಿಜೆಪಿಗೆ ಅದು ನಕಾರಾತ್ಮಕ ಪ್ರಚಾರವನ್ನು ಒದಗಿಸಿತು. ಆಡಳಿತ ಪಕ್ಷವು ಇನ್ನಷ್ಟು ಗಟ್ಟಿಯಾಯಿತು ಹಾಗಾಗಿ ಸಮಯಕ್ಕೆ ಕಾಯುವಂತೆ ಹೈಕಮಾಂಡ್, ಯಡಿಯೂರಪ್ಪ ಅವರಿಗೆ ಹೇಳಿದೆ.

ಆಪರೇಷನ್ ಕಮಲದಿಂದ ಬಿಜೆಪಿಗೆ ಹಿನ್ನಡೆ
ಯಡಿಯೂರಪ್ಪ ಹಾಗೂ ಟೀಂ ಮೈತ್ರಿ ಸರ್ಕಾರವನ್ನು ಉರುಳಿಸಲು ಮಾಡುವ ಪ್ರಯತ್ನಗಳು ಪರೋಕ್ಷವಾಗಿ ಬಿಜೆಪಿ ಗೆ ಕೆಟ್ಟ ಪ್ರಚಾರವನ್ನು ತಂದುಕೊಡುತ್ತಿವೆ ಎಂಬುದನ್ನು ಹೈಕಮಾಂಡ್ ಗಮನಿಸಿದೆ. ಅಲ್ಲದೆ ಕಳೆದ ಅಧಿವೇಶನದ ಸಮಯದಲ್ಲಿ ಯಡಿಯೂರಪ್ಪ ಅವರ ಆಡಿಯೋ ಲೀಕ್ ಆಗಿದ್ದು, ದೇಶದಾದ್ಯಂತ ಸುದ್ದಿಯಾಗಿತ್ತು, ಇಂತಹಾ ಪ್ರಕರಣಗಳು ಮತ್ತೆ ನಡೆಯುವುದು ಬೇಡವೆನ್ನುವುದು ಹೈಕಮಾಂಡ್ ತಂತ್ರ.

'ವಿರೋಧ ಪಕ್ಷವಾಗಿ ಕಾರ್ಯ ಮಾಡುತ್ತೇವೆ'
ಇಂದು ಮಾಧ್ಯಮಗಳ ಮುಂದೆ ಮಾತನಾಡಿರುವ ಯಡಿಯೂರಪ್ಪ, ನಾವು ಸರ್ಕಾರ ಬೀಳಿಸುವುದಿಲ್ಲ, ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಕಾರ್ಯ ಮಾಡುತ್ತೇವೆ, ಮೈತ್ರಿ ಸರ್ಕಾರ ಆಂತರಿಕ ಕಲಹ ಹೆಚ್ಚಾಗಿ ತಾನಾಗಿಯೇ ನೆಲಕಚ್ಚುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಯಡಿಯೂರಪ್ಪ ಮುಂದಿನ ನಡೆ ಏನು?
ಮತ್ತೊಮ್ಮೆ ರಾಜ್ಯದ ಸಿಎಂ ಆಗಬೇಕೆಂಬ ಪ್ರಬಲ ಇಚ್ಛೆಯಲ್ಲಿದ್ದ ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಆದೇಶದಿಂದ ನಿರಾಶೆಯಾಗಿರುವುದಂತೂ ಸತ್ಯ. ಯಡಿಯೂರಪ್ಪ ಅವರು ಹೈಕಮಾಂಡ್ ಆದೇಶ ಪಾಲಿಸುತ್ತಾರಾ ಅಥವಾ ತೆರೆಮರೆಯಲ್ಲಿ ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಕೈ ಹಾಕುತ್ತಾರಾ ನೋಡಬೇಕಿದೆ.











Click it and Unblock the Notifications