ಬಿಜೆಪಿಯು ಎಎಪಿ ಯೋಜನೆಯ 'ಮೋಹಲ್ಲಾ ಕ್ಲಿನಿಕ್' ನಕಲು ಮಾಡುವಲ್ಲಿ ವಿಫಲ: ಎಎಪಿ ವಾಗ್ದಾಳಿ
ಬೆಂಗಳೂರು, ಡಿಸೆಂಬರ್ 14: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಜ್ರಿವಾಲ್ ಅವರ ಸರ್ಕಾರದ 'ಮೊಹಲ್ಲಾ ಕ್ಲಿನಿಕ್' ಯೋಜನೆಯನ್ನು ಸರಿಯಾಗಿ ನಕಲು ಮಾಡುವುದರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. 'ನಮ್ಮ ಕ್ಲಿನಿಕ್' ಯೋಜನೆಯು ಕಾಟಾಚಾರ ಹಾಗೂ ಕಳಪೆ ಗುಣಮಟ್ಟಕ್ಕೆ ಸಾಕ್ಷಿಯಾಗಿವೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ ವಿ.ಸದಂ ಆರೋಪಿಸಿದರು.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ತೆರೆದಿರುವ 500ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್ಗಳು ಉತ್ತಮ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಅಲ್ಲಿ ಪ್ರಸ್ತುತ 212 ರೀತಿಯ ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಜನವರಿ 1ರಿಂದ ಮತ್ತೆ 238 ಹೊಸ ಕ್ಲಿನಿಕ್ಗಳು ಸೇರಿ ಒಟ್ಟು ಸಂಖ್ಯೆ 450ಕ್ಕೆ ಏರಿಕೆ ಆಗಲಿದೆ.
ಅದೇ ರೀತಿ ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುಣ್ಣಬಣ್ಣ ಬಳಿದು 'ನಮ್ಮ ಕ್ಲಿನಿಕ್' ಎಂದು ಕರೆಯಲಾಗುತ್ತಿದೆ. ಯಾವುದೇ ಆಧುನಿಕ ಉಪಕರಣಗಳು ಹಾಗೂ ಅಗತ್ಯ ಸಂಖ್ಯೆಯ ವೈದ್ಯರಿಲ್ಲದೇ, ಕಾಟಾಚಾರಕ್ಕಾಗಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಬಜಿಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವ ಈ ಹೊತ್ತಿನಲ್ಲಿ ರಾಜ್ಯ ಬಿಜೆಪಿಗೆ ಆಮ್ ಆದ್ಮಿ ಪಾರ್ಟಿಯ ಭಯ ಶುರುವಾಗಿದೆ. ಇಲ್ಲಿನ ಆರೋಗ್ಯ ಇಲಾಖೆಯ ನಿಷ್ಕ್ರಿಯತೆ ಬಗ್ಗೆ ಅರವಿಂದ್ ಕೇಜ್ರಿವಾಲ್ರವರು ಪ್ರಶ್ನಿಸುವ ಮೊದಲೇ ಏನಾದರೂ ಮಾಡಬೇಕೆಂದು, ದೆಹಲಿ ಮಾದರಿಯಲ್ಲಿ ಕ್ಲಿನಿಕ್ಗಳನ್ನು ತೆರೆಯಲು ಸರ್ಕಾರ ಪ್ರಯತ್ನಿಸಿದೆ. ಕೋವಿಡ್ ಸಮಯದಲ್ಲಿ ಭಾರೀ ಅವ್ಯವಹಾರ ಮಾಡಿದ ಕಳಂಕ ಹೊತ್ತಿರುವ ಆರೋಗ್ಯ ಸಚಿವ ಡಾ. ಸುಧಾಕರ್ರವರಿಂದ ಕಳಪೆ ಗುಣಮಟ್ಟದ ನಮ್ಮ ಕ್ಲಿನಿಕ್ಗಳಲ್ಲದೇ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ?. ಬಡ ಹಾಗೂ ಮಧ್ಯಮ ವರ್ಗದ ರೋಗಿಗಳ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದೇ, ಕೇವಲ ಪ್ರಚಾರಕ್ಕಾಗಿ ನಮ್ಮ ಕ್ಲಿನಿಕ್ಗಳನ್ನು ಸರ್ಕಾರ ತೆರೆದಿದೆ ಎಂದು ಜಗದೀಶ್ ವಿ ಸದಂ ಹೇಳಿದರು.
ಎಎಪಿಯಿಂದ ದೇಶಾದ್ಯಂತ ಅಭಿವೃದ್ಧಿ ಆಲೋಚನೆ
ಆಮ್ ಆದ್ಮಿ ಪಾರ್ಟಿಯಿಂದಾಗಿ ಬೇರೆ ಪಕ್ಷಗಳ ಯೋಚನೆಯಲ್ಲಿ ದೇಶಾದ್ಯಂತ ಬದಲಾವಣೆಗಳು ಆಗುತ್ತಿವೆ. ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಕೂಡ ಸರ್ಕಾರಿ ಶಾಲೆಗೆ ಭೇಟಿ ನೀಡದ ಕೇಂದ್ರ ಗೃಹ ಸಚಿವ ಅಮಿತ್ ಷಾರವರು ಕೆಲವು ತಿಂಗಳ ಹಿಂದೆ ಗುಜರಾತ್ನಲ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು. ಕರ್ನಾಟಕದ ಬಿಜೆಪಿ ಸರ್ಕಾರವು ಅಧಿಕಾರ ಸಿಕ್ಕಿ ಮೂರು ವರ್ಷಗಳ ನಂತರ ಶಾಲೆಗಳ ಶೌಚಾಲಯಗಳ ಬಗ್ಗೆ ಯೋಚಿಸುತ್ತಿದೆ ಹಾಗೂ ಜನಸಾಮಾನ್ಯರ ಆರೋಗ್ಯದ ಬಗ್ಗೆ ಯೋಚಿಸುತ್ತಿದೆ. ಆದರೆ ಭ್ರಷ್ಟ ಬಿಜೆಪಿಯು ಆಮ್ ಆದ್ಮಿ ಪಾರ್ಟಿಯ ಮಾರ್ಗ ಅನುಸರಿಸಲು ಕೇವಲ ಪ್ರಯತ್ನ ಪಡಬಹುದೇ ಹೊರತು, ಆಮ್ ಆದ್ಮಿ ಪಾರ್ಟಿಯಂತೆ ಪಾರದರ್ಶಕತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂದು ಜಗದೀಶ ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಒಟ್ಟು 438 ನಮ್ಮ ಕ್ಲಿನಿಕ್ಗಳನ್ನು ಆರಂಭಿಸಲು ಉದ್ದೇಶಿಸಿದ್ದು, ಅದರಲ್ಲಿ 114 ಕ್ಲಿನಿಕ್ಗಳಿಗೆ ಬುಧವಾರ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಯಾವ ಸರ್ಕಾರ ಇಂತಹ ಯೋಜನೆ ರೂಪಿಸಿಲ್ಲ. ಐತಿಹಾಸಿಕವಾಗಿ ಇಷ್ಟು ಕ್ಲಿನಿಕ್ ಉದ್ಘಾಟಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದರು. ಇದೀಗ ಇದರ ವಿರುದ್ಧ ಎಎಪಿ ಆರೋಪ ಮಾಡಿದೆ.












Click it and Unblock the Notifications