'ಹೆಸರಲ್ಲಿ 'ಗಾಂಧಿ' ಇದೆ ಅನ್ನೋದು ಬಿಟ್ಟರೆ ರಾಹುಲ್- ಪ್ರಿಯಾಂಕಾ ಸಾಧನೆ ಏನು?'
ಬೆಂಗಳೂರು, ಮಾರ್ಚ್ 14: ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಣಾಳಿಕೆಗೆ ಸಂಬಂಧಿಸಿದಂತೆ ಬಿಜೆಪಿಗೆ ಸಲಹೆಗಳ ಮಹಾ ಪೂರವೇ ಹರಿದುಬರುತ್ತಿದೆ. ಆ ಪೈಕಿ ಕನಿಷ್ಠ ಮೂಲ ಅದಾಯ ಯೋಜನೆಯನ್ನು ಪರಿಗಣಿಸಲಾಗುವುದು. ಇದರಿಂದ ಬಡತನ ಹೋಗಲಾಡಿಸಬಹುದು. ಮತ್ತು ಕೆಲಸದ ಆನಿವಾರ್ಯ ಇಲ್ಲದೆ ವ್ಯಕ್ತಿಯೊಬ್ಬರು ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ವಿವಿಧ ವರ್ಗದ ಜನರಿಂದ ತಳಮಟ್ಟದ ಅಗತ್ಯಗಳನ್ನು ಪೂರೈಸಬೇಕಾದ ಸಲಹೆಗಳು ಬಿಜೆಪಿಯ ಪ್ರಣಾಳಿಕೆ ಸಭೆಗಳ ಮುಂದೆ ಬರುತ್ತಿವೆ. ಅದರಲ್ಲಿ ಕನಿಷ್ಠ ಮೂಲ ಆದಾಯ ಜಾರಿ ಕೂಡ ಒಂದು ಸಲಹೆ. 'ಭಾರತ್ ಕೆ ಮನ್ ಬಾತ್'ನಲ್ಲಿ ಜನರ ಜತೆಗೆ ಬಿಜೆಪಿ ಚರ್ಚೆ ನಡೆಸುವ ವೇಳೆ ಕೇಳಿ ಬಂದ ಸಲಹೆಗಳಲ್ಲಿ ಇದೂ ಒಂದು. ಇದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಬಿಜೆಪಿ ಪ್ರಣಾಳಿಕೆ ಸಮಿತಿ ಸದಸ್ಯರೂ ಆಗಿರುವ ರಾಜೀವ್ ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ವಿರುದ್ಧ ಕರ್ನಾಟಕದಲ್ಲಿ ಬಿಜೆಪಿಯಿಂದ ತ್ರಿಶೂಲ ವ್ಯೂಹ
ಪ್ರಣಾಳಿಕೆಯಲ್ಲಿ ಕನಿಷ್ಠ ಮೂಲ ಆದಾಯ ಸೇರಿಸುವುದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಜೀವ್ ಚಂದ್ರಶೇಖರ್, ನನಗೆ ಆ ಬಗ್ಗೆ ಗೊತ್ತಿಲ್ಲ. ಸಮಿತಿಯು ಅಂತಿಮ ನಿರ್ಧಾರ ಮಾಡಲಿದೆ. ಆದರೆ ವಿವಿಧ ಮುಂದಿನ ಹಂತದ ಸುಧಾರಣೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಮತ್ತು ಚರ್ಚಿಸಲಾಗುವುದು ಎಂದಿದ್ದಾರೆ.
ಕನಿಷ್ಠ ಅದಾಯ ಖಾತ್ರಿ ಬಿಜೆಪಿ ಪ್ರಣಾಳಿಕೆಯಲ್ಲೂ ಸೇರಬಹುದು
ಮೊದಲಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಜಾರಿಗೆ ತರುವುದಾಗಿ ಹೇಳಿದ್ದರು. ಕನಿಷ್ಠ ಆದಾಯ ಖಾತ್ರಿಯ ಮೂಲ ಆಲೋಚನೆ ಹುಟ್ಟಿಕೊಂಡಿರುವುದು. ಯೂನಿವರ್ಸಲ್ ಬೇಸಿಕ್ ಇನ್ ಕಮ್ (ಯುಬಿಐ) ನಿಂದ. ಯುಬಿಐ ಅಂದರೆ ನಿಶ್ಚಿತ ಪ್ರತಿಯೊಬ್ಬ ವಯಸ್ಕರಿಗೆ ಒದಗಿಸುವ ನಿಶ್ಚಿತ ಆದಾಯ. ಬಡವ, ಶ್ರೀಮಂತ, ದುಡಿಯುವ ವರ್ಗ ಅಥವಾ ದುಡಿಯದವರಿಗೆ ಸರಕಾರ ಒದಗಿಸುತ್ತದೆ. ಇದರ ಮೂಲ ಉದ್ದೇಶ ಬಡತನದ ಮೂಲೋತ್ಪಾಟನೆ. ಕನಿಷ್ಠ ಪಕ್ಷ ದೇಶದೊಳಗೆ ಅಥವಾ ಆ ನಿರ್ದಿಷ್ಟ ಪ್ರದೇಶ ಅಥವಾ ರಾಜ್ಯದಲ್ಲಿ ವ್ಯಕ್ತಿಯೊಬ್ಬರು ಜೀವನ ನಡೆಸಲು ಅಗತ್ಯ ಇರುವಂಥ ಆದಾಯ ಒದಗಿಸುವುದು ಇದರ ಉದ್ದೇಶ. ಇನ್ನು ಭಾರತ್ ಕೆ ಮನ್ ಕೀ ಬಾತ್ ನಲ್ಲಿ ಕೇಳಿಬಂದ ಇನ್ನೂ ಹಲವು ಸಲಹೆ ಬಗ್ಗೆ ಬಹಳ ಸಂತೋಷವಾಯಿತು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಜನರ ನಿರೀಕ್ಷೆ ತಲುಪದ ಕಾಂಗ್ರೆಸ್
ನಾನು ಹಲವು ಕಾರ್ಯಕ್ರಮಗಳ ಬಗ್ಗೆ ಹೇಳಿದ್ದೇನೆ. ಹಲವು ಯುವಕರು, ಸರಕಾರಿ ನೌಕರರು ಮತ್ತು ಮಕ್ಕಳು ಹಲವು ಸಲಹೆಗಳನ್ನು ನೀಡಿದ್ದಾರೆ. ಆ ಪೈಕಿ ಹಲವು ಸಲಹೆಗಳು ಗಮನ ಸೆಳೆಯುವಂತಿವೆ. ಈ ಎಲ್ಲವನ್ನೂ ಪ್ರಣಾಳಿಕೆ ಸಮಿತಿ ಅಧ್ಯಕ್ಷ ರಾಜ್ ನಾಥ್ ಸಿಂಗ್ ಅವರ ನೇತೃತ್ವದಲ್ಲಿ ಚರ್ಚಿಸಲಾಗುವುದು. ಆಗತ್ಯವಿದ್ದರೆ ನಿಧಾನಕ್ಕೆ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ಪ್ರವೇಶದಿಂದಾಗಿ ಉತ್ತರಪ್ರದೇಶದಲ್ಲಿ ಬಿಜೆಪಿ ಮೇಲೆ ಪರಿಣಾಮ ಆಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಜೀವ್, ಜನರ ನಿರೀಕ್ಷೆಗಳನ್ನು ಕಾಂಗ್ರೆಸ್ ತಲುಪುತ್ತಿಲ್ಲ. ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿಗಿಂತ ಯಾರು ಹೆಚ್ಚು ಶ್ರಮ ಹಾಕಬಲ್ಲರು ಎಂದು ಈಗಿನ ಜನರು, ಅದರಲ್ಲೂ ಯುವಜನರು ನಿರೀಕ್ಷೆ ಮಾಡುತ್ತಾರೆ. ಇವರಿಬ್ಬರು ಆಡಳಿತದ ಅನುಭವವೇ ಇಲ್ಲದೆ ಅನುಕೂಲ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.
ಹೆಸರಲ್ಲಿ ಗಾಂಧಿ ಅಂತಿದೆ ಎಂಬುದು ಬಿಟ್ಟರೆ ಬೇರೇನಿಲ್ಲ
ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಅವರ ಸಾಧನೆ ಏನು? ತಮ್ಮ ಹೆಸರಲ್ಲಿ ಗಾಂಧಿ ಎಂಬುದಿದೆ ಅನ್ನೋದು ಬಿಟ್ಟರೆ ಏನಿಲ್ಲ. ಪಕ್ಷದ ಹುದ್ದೆಗಳನ್ನು ಅನುಭವಿಸುತ್ತಾ ಇದ್ದಾರೆ. ನವ ಭಾರತವು ಅರ್ಹತೆ ಇರುವ ನಾಯಕರ ನಿರೀಕ್ಷೆಯಲ್ಲಿದೆ ಹೊರರು ವಂಶಪಾರಂಪರ್ಯ ಅಡಳಿತವನ್ನಲ್ಲ. ಇದು ಕಾಂಗ್ರೆಸ್ ಗೆ ಈಗಲೂ ಅರ್ಥವಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಅರವತ್ತೆಂಟು ಪರ್ಸೆಂಟ್ ನಷ್ಟು ಮತದಾರರು ಮೂವತ್ತೈದು ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಗಾಂಧಿ ಕುಟುಂಬದಿಂದ ಅವರಿಗೆ ಸಮಾಧಾನ ಇಲ್ಲ. ಒಂದೊಂದೇ ಏಣಿಯನ್ನು ಹತ್ತಿ ಎತ್ತರಕ್ಕೆ ತಲುಪಿರುವ ಮೋದಿ ಅವರ ಬಗ್ಗೆ ಹೆಮ್ಮೆ ಇದೆ ಎಂದು ರಾಜೀವ್ ಹೇಳಿದ್ದಾರೆ.
ಮೈತ್ರಿ ವಿಚಾರವು ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸಲ್ಲ
ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯ ಗಳಿಸಬಹುದು ಎಂಬಾ ಪ್ರಶ್ನೆಗೆ, ಈ ಹಂತದಲ್ಲಿ ಆ ಬಗ್ಗೆ ಮಾತನಾಡುವುದು ಸರಿಹೋಗಲ್ಲ. ಆದರೆ ಬಹುತೇಕ ಜನರು ಮೋದಿಯವರು ಮತ್ತೆ ಪ್ರಧಾನಿ ಆಗಲಿ ಎಂದು ಬಯಸುತ್ತಾರೆ. ಮೋದಿ ಆವರ ನೀತಿಗಳು ಎಲ್ಲ ಸಮುದಾಯ ಹಾಗೂ ಜಾತಿಗಳಿಗೆ ಅನುಕೂಲ ಮಾಡಿವೆ ಎಂದು ಹೇಳಿದ್ದಾರೆ. ಉತ್ತರಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿನ ಮಹಾ ಘಟಬಂಧನ್ ನಿಂದ ಬಿಜೆಪಿ ಮೇಲೆ ಅಗಬಹುದಾದ ಪರಿಣಾಮದ ಬಗ್ಗೆ ಉತ್ತರಿಸಿ, ಮೈತ್ರಿ ವಿಚಾರವು ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದಿಲ್ಲ. ಆದರೆ ಮುಖ್ಯವಾಗುವುದು ಮೋದಿ ಸರಕಾರದ ಸಾಧನೆ ಎಂದಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಜೀವ್ ಚಂದ್ರಶೇಖರ್, 'ಮಸೂದ್ ಅಜರ್ ಜೀ' ವಿವಾದ ಮಾತ್ರವಲ್ಲ. ವೋಟ್ ಬ್ಯಾಂಕ್ ರಾಜಕಾರಣದ ಮುಂದೆ ಭಯೋತ್ಪಾದನೆ ನಿಗ್ರಹದ ವಿಷಯ ಕಾಂಗ್ರೆಸ್ ಗೆ ಹೆಚ್ಚಿನದಲ್ಲ. ಆ ಪಕ್ಷ ಯಾವಾಗಲೂ ರಾಷ್ಟ್ರೀಯ ಭದ್ರತೆ ಜತೆಗೆ ಹೊಂದಾಣಿಕೆ ಮಾಡಿಕೊಂಡೇ ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಬಾಲಕೋಟ್ ದಾಳಿ ವಿಚಾರದಲ್ಲಿ ಕಾಂಗ್ರೆಸ್ ನಿಂದ ಮೊದಲು ರಾಜಕೀಯ
ಈಚೆಗಷ್ಟೇ ರಾಹುಲ್ ಗಾಂಧಿ, ಪುಲ್ವಾಮಾ ಉಗ್ರ್ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನನ್ನು ಮಸೂದ್ ಅಜರ್ ಜೀ ಎಂದು ಕರೆದಿದ್ದು ಸ್ಮರಿಸಬಹುದು. ಇದೇ ವೇಳೆ, ಗಡಿ ನಿಯಂತ್ರಣ ರೇಖೆ ಆಚೆಗೆ ಭಾರತೀಯ ವಾಯು ಸೇನೆ ನಡೆಸಿದ ಬಾಲಕೋಟ್ ದಾಳಿಯಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ ರಾಜೀವ್, ವಾಯು ದಾಳಿಯನ್ನು ಮೊದಲು ರಾಜಕೀಯಕ್ಕೆ ಬಳಸಿದ್ದು ಕಾಂಗ್ರೆಸ್. ಆ ನಂತರ ಬಾಲಕೋಟ್ ದಾಳಿ ವಿಚಾರವಾಗಿ ಎತ್ತಿದ ಪ್ರಶ್ನೆಗಳಿಗೆ ಬಿಜೆಪಿಯಿಂದ ಉತ್ತರಿಸುವ ಪ್ರಯತ್ನ ಮಾಡಲಾಯಿತು. ನಾವು ಸುಮ್ಮನಿರಲು ಆಗಲ್ಲ. ಸಶಸ್ತ್ರ ಪಡೆ ಮೇಲೆ ಕಾಂಗ್ರೆಸ್ ಮತ್ತು ಅದರ ಬೆಂಬಲಿಗರು ಅನುಮಾನ ಪಟ್ಟರೆ ನಾವು ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದಿದ್ದಾರೆ. ಪಾಕಿಸ್ತಾನ ವಶಕ್ಕೆ ಪಡೆದಿದ್ದ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ನನ್ನು ಬಿಡುಗಡೆ ಮಾಡುವ ತನಕ ಪ್ರಧಾನಿ ಮೋದಿ ಯಾವುದೇ ಮಾತನಾಡಲಿಲ್ಲ. ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚಾದ ಮೇಲೆ ಅಭಿನಂದನ್ ರನ್ನು ಪಾಕಿಸ್ತಾನ ಬಿಡುಗಡೆ ಮಾಡಿತು ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.