ಸಿದ್ದು ಸರ್ಕಾರ ವಿರುದ್ಧ ರಾಜನಾಥ್ ಗೆ ದೂರು: ಯಡಿಯೂರಪ್ಪ
ಬೀದರ್, ಜುಲೈ 10: 'ರೈತರ ಆತ್ಮಹತ್ಯೆ ಸರಣಿ ನಂತರ ಈಗ ಪೊಲೀಸರ ಸರದಿ', ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಬೆಲೆ ಇಲ್ಲದ್ದಂತಾಗಿದೆ. ಜನರ ಪಾಲಿಗೆ ಸರ್ಕಾರ ಎಂದೋ ಸತ್ತುಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಭಾನುವಾರದಂದು ಕಿಡಿಕಾರಿದರು.
ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಮೂಡಿರುವ ಸಂಶಯಗಳನ್ನು ತಿಳಿಗೊಳಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ. ಈ ಬಗ್ಗೆ ಸದನದ ಒಳಗೂ ಹೊರಗೂ ಪ್ರತಿಭಟನೆ ನಡೆಸಲು ಬಿಜೆಪಿ ಸಜ್ಜಾಗಿದೆ ಎಂದರು.
ಮೊದಲಿಗೆ ಗಣಪತಿ ಅವರು ತಮ್ಮ ವಿಡಿಯೋ ಸಂದೇಶದಲ್ಲಿ ಹೆಸರಿಸಿರುವ ಮೂವರು ಅಧಿಕಾರಿಗಳು ರಾಜೀನಾಮೆ ನೀಡಲಿ. ಕೆಜೆ ಜಾರ್ಜ್ ಅವರು ರಾಜೀನಾಮೆ ನೀಡುವ ತನಕ ಬಿಜೆಪಿ ಸುಮ್ಮನಿರುವುದಿಲ್ಲ.
ಅನುಪಮಾ ಶೆಣೈ ಅವರಿಗೆ ಆದ ಅನ್ಯಾಯ ಇರಬಹುದು, ಡಿವೈಎಸ್ಪಿ ಕಲ್ಲಪ್ಪ ಪ್ರಕರಣ ಇರಬಹುದು, ಗಣಪತಿ ಅವರ ಪ್ರಕರಣ ಇರಬಹುದು, ಕೇಸು ಮುಚ್ಚಿಹಾಕುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ವಹಿಸಲಿ, ಯಾರ ಯಾರ ಪಾತ್ರ ಎಷ್ಟಿದೆ ಎಂಬುದು ಜನತೆಗೆ ಗೊತ್ತಾಗಲಿ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದಲ್ಲಿನ ಅರಾಜಕತೆ, ಗೂಂಡಾರಾಜ್ಯದ ಪರಿಸ್ಥಿತಿ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗೆ ವರದಿ ನೀಡುತ್ತಿದ್ದೇವೆ. ಮುಂದಿನ ಕ್ರಮವನ್ನು ಕೇಂದ್ರ ಸರ್ಕಾರವೇ ಜರುಗಿಸಲಿದೆ ಎಂದರು.












Click it and Unblock the Notifications