ಈಶ್ವರಪ್ಪ ಪುತ್ರನಿಗೆ ಹಾವೇರಿ ಟಿಕೆಟ್ ಮಿಸ್: ಬಿಜೆಪಿ ಹೈಕಮಾಂಡ್ ಕೊಟ್ಟ ಆಫರ್ ಏನು ಗೊತ್ತಾ?
ಬೆಂಗಳೂರು, ಮಾರ್ಚ್ 14: ಲೋಕಸಭಾ ಚುನಾವಣೆ ಹಿನ್ನೆಲೆ ಮತ್ತೆ ಭರ್ಜರಿ ಜಯಗಳಿಸಲು ಕಮಲ ಪಡೆ ಅಳೆದು ತೂಗಿ ಟಿಕೆಟ್ ನೀಡುತ್ತಿದೆ. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳ ಫೈಕಿ 20 ಕ್ಷೇತ್ರಗಳಿಗೆ ಟಿಕೆಟ್ ನೀಡಿದ್ದು, ಹಾವೇರಿ ಲೋಕಸಭೆ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದ ಈಶ್ವರಪ್ಪ ಪುತ್ರ ಕಾಂತೇಶ್ಗೆ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದೆ.
ಹೌದು, ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವ ಹಾಗೂ ಕುರುಬ ನಾಯಕ ಕೆ ಎಸ್ ಈಶ್ವರಪ್ಪ ಅವರು ಪುತ್ರ ಕಾಂತೇಶ್ಗೆ ಟಿಕೆಟ್ ನೀಡದೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದೆ. ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೈಕಮಾಂಡ್ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸ್ವತಃ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ನನ್ನ ಮಗನಿಗೆ ಟಿಕೆಟ್ ಕೊಡಿಸುತ್ತೇನೆ. ಹೈಕಮಾಂಡ್ ನಾಯಕರ ಜೊತೆಗೆ ಮಾತನಾಡಿ ನಿನ್ನ ಮಗನಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದರು, ಆದರೆ ಇದೀಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಡಿಸಿ ಮಾತು ತಪ್ಪಿದ್ದಾರೆ ಎಂದು ಈಶ್ವರಪ್ಪ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಹೇಳಿ ಕೇಳಿ ಮಾಜಿ ಸಚಿವ ಹಾಗೂ ಕುರುಬ ನಾಯಕರಾದ ಕೆ ಎಸ್ ಈಶ್ವರಪ್ಪ ಅವರು ಹಿರಿತಲೆ, ಪಕ್ಷವನ್ನು ಸಂಘಟನೆ ಮಾಡಿ ಕಟ್ಟಿದ್ದಾರೆ, 20 ಕ್ಷೇತ್ರಗಳ ಅಭ್ಯರ್ಥಿಗಳನ್ನ ಘೋಷಿಸಿದ್ರೂ ಸಹ ಬಿಜೆಪಿ ಹೈಕಮಾಂಡ್ ಕುರುಬ ಸಮುದಾಯಕ್ಕೆ ಮಣೆ ಹಾಕಿಲ್ಲ. ಇನ್ನೂ ರಾಜಕೀಯ ನಿವೃತ್ತಿ ಪಡೆದ ಈಶ್ವರಪ್ಪ ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಟಿಕೆಟ್ ಕೊಡಿಸಲು ಸಾಕಷ್ಟು ಪ್ರಯತ್ನ ಮಾಡಿದರು, ಅದು ಕೂಡ ಆಗಲಿಲ್ಲ, ಇಷ್ಟಾದ್ರೂ ಪಕ್ಷಕ್ಕೆ ಕಟು ಬಿದ್ದು ಸುಮ್ಮನಿದ್ದರು.. ಆದಾದ್ಮೇಲೆ ಹಾವೇರಿ ಕ್ಷೇತ್ರದ ಮೇಲೆ ಕಣ್ಣಿಟ್ಟ ಈಶ್ವರಪ್ಪ ಅಲ್ಲಿ ಮಗನಿಗೆ ಟಿಕೆಟ್ ಕೊಡಿಸಬೇಕು ಎಂದು ಶತಾಯಗತಾಯ ಪ್ರಯತ್ನ ಮಾಡಿದ್ರು ಆಗಲಿಲ್ಲ, ಇದೀಗ ಮಗನಿಗೆ ಟಿಕೆಟ್ ಮಿಸ್ ಆಗಿದೆ ಸಹಜವಾಗಿಯೇ ಈಶ್ವರಪ್ಪ ಬಂಡಾಯದ ಕಹಳೆ ಮೊಳಗಿಸಿದ್ದಾರೆ.
ಮಗನಿಗೆ ಟಿಕೆಟ್ ಕೈ ತಪ್ಪಿದ್ರೆ ಈಶ್ವರಪ್ಪ ಸುಮ್ಮನಿರಲ್ಲ ಎಂದು ಹೈಕಮಾಂಡ್ ಹಾಗೂ ಬಿಎಸ್ವೈ ಗೊತ್ತು ಹೀಗಾಗಿಯೇ ಈಶ್ವರಪ್ಪ ಪುತ್ರನಿಗೆ ಬಿಜೆಪಿ ಹೈಕಮಾಂಡ್ ಆಫರ್ ಕೊಟ್ಟಿದೆ ಎನ್ನಲಾಗ್ತಿದೆ. ಕಾಂತೇಶ್ಗೆ ಎಂಎಲ್ಸಿ ಸ್ಥಾನ ಕೊಡುತ್ತೇವೆ ಎಂದು ಆಫರ್ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಕಾಂತೇಶ್ಗೆ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಲಾಗ್ತಿದೆ. ಒಂದು ವೇಳೆ ಕಾಂತೇಶ್ಗೆ ಟಿಕೆಟ್ ಕೊಟ್ಟರೆ ಹಾವೇರಿಯಲ್ಲಿ ಸೋಲುವ ಸಾಧ್ಯತೆ ಹೆಚ್ಚಿತ್ತು ಎನ್ನಲಾಗ್ತಿದೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವೇರಿ ಕ್ಷೇತ್ರಕ್ಕೆ ಬಸವರಾಜ ಬೊಮ್ಮಾಯಿ ಅವರು ಅಪಾರ ಕೊಡುಗೆ ನೀಡಿದ್ದು, ಬಿಜೆಪಿ ಹೈಕಮಾಂಡ್ ಬೊಮ್ಮಾಯಿಗೆ ಮಣೆ ಹಾಕಿದ್ದಾರೆ ಎನ್ನಲಾಗಿದೆ.

ಈಗಾಗಲೇ ಹೈಕಮಾಂಡ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ಹೊರ ಹಾಕಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಪುತ್ರಿ ಕಾಂತೇಶ್ಗೆ ಎಂಎಲ್ಸಿ ಮಾಡುವ ಪ್ಲಾನ್ ಹೈಕಮಾಂಡ್ ಮುಂದಿದೆ. ಇದೆಲ್ಲದಕ್ಕೂ ಈಶ್ವರಪ್ಪ ಒಪ್ಪಿಕೊಳ್ತಾರಾ ಎನ್ನುವುದು ಸದ್ಯಕ್ಕೆ ಪ್ರಶ್ನೆಯಾಗಿಯೇ ಉಳಿದಿದೆ. ಏಕೆಂದ್ರೆ, ತೀವ್ರ ಅಸಮಾಧಾನಗೊಂಡಿರುವ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಅಲ್ಲದೇ ಮಂತ್ರಿ ಸ್ಥಾನಕ್ಕೆ ಮೋಸ ಮಾಡಿದ್ರು.ಟಿಕೆಟ್ ಕೊಡಿಸ್ತೀನಿ ಅಂತ ಮೋಸ ಮಾಡಿದ್ರು. ಈಗ MLC ಕೊಡ್ತೀನಿ ಅಂತ ಮೂಗಿಗೆ ತುಪ್ಪ ಹಚ್ಚೋ ಕೆಲಸ ಮಾಡ್ತಿದ್ದಾರೆ.ಎಂದು ಈಶ್ವರಪ್ಪ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಒಟ್ನಲಿ, ಹಾವೇರಿ ಟಿಕೆಟ್ ಪಡೆಯುವ ಪ್ರಯತ್ನದಲ್ಲಿ ಮಾಜಿ ಸಚಿವ ಹಾಗೂ ಕುರುವ ನಾಯಕ ಕೆ ಎಸ್ ಈಶ್ವರಪ್ಪ ಅವರಿಗೆ ಹಿನ್ನೆಡೆಯಾಗಿದ್ದು, ಹೈಕಮಾಂಡ್ ಕೊಟ್ಟ ಆಫರ್ ಅನ್ನ ಒಪ್ಪಿಕೊಂಡು ಲೋಕಸಭಾ ಚುನಾವಣೆಯಲ್ಲಿ ಪ್ರಚಾರವನ್ನ ಕೈಗೊಳ್ಳುತ್ತಾರಾ ಅಥವಾ ಬಂಡಾಯದ ಭಾವುಟ ಹಾರಿಸುತ್ತಾರಾ ಎಂದು ಕಾದುನೋಡ್ಬೇಕಾಗಿದೆ.












Click it and Unblock the Notifications