ಜು.28ರ ಅಮಿತ್ ಶಾ ಕರ್ನಾಟಕ ಭೇಟಿ ರದ್ದು?
ಬೆಂಗಳೂರು, ಜುಲೈ 17 : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಭೇಟಿ ರದ್ದಾಗುವ ಸಾಧ್ಯತೆ ಇದೆ. ಜುಲೈ 28ರಂದು ಅಮಿತ್ ಶಾ ಕರ್ನಾಟಕ ಪ್ರವಾಸ ಕೈಗೊಂಡು, ರಾಜ್ಯದ ನಾಯಕರ ಜೊತೆ ಚರ್ಚೆ ನಡೆಸಬೇಕಿತ್ತು.
ಅಮಿತ್ ಶಾ ಆಗಮನಕ್ಕೂ ಮುನ್ನವೇ ರಾಜ್ಯ ಬಿಜೆಪಿ ಘಟಕ ಜು.21ರಂದು ಕೋರ್ ಕಮಿಟಿ ಸಭೆ ಕರೆದಿತ್ತು. 2019ರ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ಅಮಿತ್ ಶಾ ರಾಜ್ಯಕ್ಕೆ ಆಗಮಿಸಬೇಕಿತ್ತು.
ಜು.28ರಂದು ಬಿಜೆಪಿ ದೆಹಲಿಯಲ್ಲಿ ಸಂಸದರ ಸಭೆ ಕರೆದಿದೆ. ಈ ಸಭೆಯಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ, ಅಂದು ನಿಗದಿಯಾಗಿದ್ದ ಕರ್ನಾಟಕ ಭೇಟಿ ರದ್ದಾಗುವ ಅಥವ ಮುಂದೂಡುವ ಸಾಧ್ಯತೆ ಇದೆ.

2018ರ ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡಿದ್ದರು. ಅದರಲ್ಲೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲು ಅವರು ರಾಜ್ಯ ನಾಯಕರಿಗೆ ಸೂಚನೆ ನೀಡುವ ನಿರೀಕ್ಷೆ ಇತ್ತು.
ವೀಕ್ಷಕರ ನೇಮಕ : ಕರ್ನಾಟಕ ಬಿಜೆಪಿ 28 ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಿದೆ. ಕೋರ್ ಕಮಿಟಿ ಸದಸ್ಯರು, ಕಾರ್ಯಕಾರಣಿಯ ಸದಸ್ಯರು ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರಾಗಿದ್ದಾರೆ. ಕ್ಷೇತ್ರದ ಲೋಕಸಭೆ ಚುನಾವಣೆ ಸಿದ್ಧತೆಯನ್ನು ಇವರು ನೋಡಿಕೊಳ್ಳಲಿದ್ದಾರೆ.












Click it and Unblock the Notifications