ರಾಜ್ಯಸಭೆ ಉಪ ಚುನಾವಣೆ; ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ
ಬೆಂಗಳೂರು, ಡಿಸೆಂಬರ್ 03 : ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರ ನೇಮಕಕ್ಕೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 5ರಂದು ಈ ಕುರಿತು ಅಧಿಕೃತ ಘೋಷಣೆ ಆಗಲಿದೆ.
ರಾಜ್ಯಸಭಾ ಉಪ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಡಿಸೆಂಬರ್ 2 ಕೊನೆಯ ದಿನವಾಗಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಕೆ. ಸಿ. ರಾಮಮೂರ್ತಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ.
ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಅಭ್ಯರ್ಥಿಗಳಿಗೆ ಸೂಚಕರಾಗಿ ಯಾವುದೇ ಶಾಸಕರು ಸಹಿ ಹಾಕಿಲ್ಲ. ಆದ್ದರಿಂದ, ನಾಮಪತ್ರ ತಿರಸ್ಕಾರವಾಗಲಿದೆ. ಹೀಗಾಗಿ ಕೆ. ಸಿ. ರಾಮಮೂರ್ತಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು ಡಿಸೆಂಬರ್ 5ರ ತನಕ ಕಾಲಾವಕಾಶವಿದೆ. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಅಂದು ಕೆ. ಸಿ. ರಾಮಮೂರ್ತಿ ಆಯ್ಕೆಯ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ರಾಜ್ಯಸಭೆಯ 1 ಸ್ಥಾನ ಭರ್ತಿ ಮಾಡಲು ಡಿಸೆಂಬರ್ 12ರಂದು ಉಪ ಚುನಾವಣೆ ನಡೆಯಬೇಕಿತ್ತು.

ಕೆ. ಸಿ. ರಾಮಮೂರ್ತಿ ರಾಜೀನಾಮೆ
2016ರಲ್ಲಿ ಕೆ. ಸಿ. ರಾಮಮೂರ್ತಿ ರಾಜ್ಯಸಭೆಗೆ ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದರು. ಆದರೆ, ಅವರು ಕಾಂಗ್ರೆಸ್, ರಾಜ್ಯಸಭಾ ಸದಸ್ಯತ್ವಕ್ಕೆ ಅವಧಿಗೂ ಮುನ್ನವೇ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯ ಕಾರಣ ಉಪ ಚುನಾವಣೆ ಎದುರಾಗಿತ್ತು. ಬಿಜೆಪಿಯಿಂದ ಅವರು ಉಪ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈಗ ಪುನಃ ಆಯ್ಕೆಯಾದರೆ ಸದಸ್ಯತ್ವದ ಅವಧಿ 2022ರ ಜೂನ್ ತನಕ ಇದೆ.

ಎರಡೂ ಪಕ್ಷಗಳಿಂದ ಅಭ್ಯರ್ಥಿ ಇಲ್ಲ
ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯಸಭಾ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಆದ್ದರಿಂದ, ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ 105 ಸದಸ್ಯ ಬಲವನ್ನು ಹೊಂದಿದೆ. ಆದ್ದರಿಂದ, ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಇದರಿಂದಾಗಿ ಎರಡೂ ಪಕ್ಷಗಳು ಚುನಾವಣೆಯಿಂದ ದೂರ ಉಳಿದವು.

ಮಲ್ಲಿಕಾರ್ಜುನ ಖರ್ಗೆ ಹೆಸರು ಕೇಳಿ ಬಂದಿತ್ತು
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆದಿತ್ತು. ಮಲ್ಲಿಕಾರ್ಜುನ ಖರ್ಗೆಯನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಕುರಿತು ಮಾತುಕತೆ ಆರಂಭವಾಗಿತ್ತು. ಆದರೆ, 15 ಕ್ಷೇತ್ರದ ಉಪ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಎರಡೂ ಪಕ್ಷಗಳು ರಾಜ್ಯಸಭೆ ಚುನಾವಣೆಯಿಂದ ದೂರವಾದವು. ಮಲ್ಲಿಕಾರ್ಜುನ ಖರ್ಗೆ 2019ರ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.

ಶಾಸಕರು ಮತದಾನ ಮಾಡಬೇಕಿತ್ತು
ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದ ವಿಧಾನಸಭೆಯ ಶಾಸಕರು ಮತದಾನ ಮಾಡಬೇಕಿತ್ತು. ಬಿಜೆಪಿ ಬಲ ಸದ್ಯ 105 ಇದೆ. ಡಿಸೆಂಬರ್ 9ರಂದು ಉಪ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಎಷ್ಟು ಸ್ಥಾನ ಗೆದ್ದರೂ ಬಿಜೆಪಿ ಬಲ ಹೆಚ್ಚಾಗುತ್ತಲೇ ಇತ್ತು. ಕಾಂಗ್ರೆಸ್, ಜೆಡಿಎಸ್ ಸ್ವಂತ ಬಲದ ಮೇಲೆ ಗೆಲುವು ಸಾಧಿಸಲು ಸಾಧ್ಯವಿರಲಿಲ್ಲ.












Click it and Unblock the Notifications