ಐದು ವರ್ಷ ನೀವು, ಐದು ವರ್ಷ ನಾವು; ಕಾಂಗ್ರೆಸ್-ಬಿಜೆಪಿ ಒಪ್ಪಂದ: ಹೆಚ್ ಡಿ ರೇವಣ್ಣ ಆರೋಪ
ಹಾಸನ, ಜೂನ್ 30: ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷ ಸೇರಿಕೊಂಡು ಜೆಡಿಎಸ್ ಮುಗಿಸಲು ಹೊರಟಿವೆ ಐದು ವರ್ಷ ನಾವು ಇನ್ನು ಐದುವರ್ಷ ಬಿಜೆಪಿ ಎಂದು ತೀರ್ಮಾನಿಸಿಕೊಂಡು ಜೆಡಿಎಸ್ ಮುಗಿಸಲು ಹೊರಟಿವೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಆರೋಪಿಸಿದ್ದಾರೆ.
ಈ ಕುರಿತು ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಮುಗಿಸಲು ಎರಡು ರಾಷ್ಟ್ರೀಯ ಪಕ್ಷ ಮುಂದಾಗಿದ್ದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಟ್ಟಿಹಾಕಲು 17 ಪಕ್ಷಗಳು ಒಟ್ಟಾಗಿ ರಾಜಕಾರಣ ಮಾಡಲು ಹೊರಟಿವೆ. ಇನ್ನೂ ಯಾರಿಂದಲೂ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಆರು ಬಾರಿ ಶಾಸಕನಾಗಿ ದೇವೇಗೌಡರ ಜತೆ ಮೂಟೆ ಹೊತ್ತಿದ್ದೇನೆ. ರಾಜಕಾರಣ ಗೊತ್ತಿದೆ ರೇವಣ್ಣ ರಾಜಕೀಯ ಬಿಡುತ್ತಾರೆ ಎಂದರೆ ಅದು ಅವರ ಕನಸು ಹೋರಾಟ ಮಾಡುತ್ತೇನೆ. 3800 ಮತಗಳಲ್ಲಿ ಗೆದ್ದಿದ್ದಾರೆ ಎಂದರೆ ಅದ್ಯಾವ ರೀತಿ ಆಗಿದೆ ಎಂಬುದು ತಿಳಿದಿದೆ ಎಂದರು. ನಮ್ಮ ಉದಾಸೀನದಿಂದ ಕೆಲವು ಕ್ಷೇತ್ರದಲ್ಲಿ ಸೋಲು ಕಂಡಿದ್ದೇವೆ 2028 ರ ಚುನಾವಣೆ ನಮ್ಮ ಗುರಿ ಎಂದರು.
ಹೊಳೆನರಸೀಪುರದಲ್ಲಿ ಕೆಂಪೇಗೌಡರ ಜಯಂತಿಯಲ್ಲಿ ಭಾಗವಹಿಸಿದ್ದೇನೆ. ಸಚಿವ ಸ್ಥಾನ ಹೋದ ಬಳಿಕ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ತಾನು ಭಾಗವಹಿಸಿಲ್ಲ. ತನ್ನ ಕ್ಷೇತ್ರದಲ್ಲಿ ಹಾಗೂ ಹಾಸನದಲ್ಲಿ ಒಂದೇ ಸಮಯದಲ್ಲಿ ಕಾರ್ಯಕ್ರಮ ನಡೆದರೆ ಎರಡೂ ಕಡೆ ಭಾಗವಹಿಸಲು ಹೇಗೆ ಸಾಧ್ಯ ವಾಗುತ್ತದೆ ಎಂದು ಪ್ರಶ್ನಿಸಿದರು.
ನಮಗೇನು ರಾಜ್ಯಮಟ್ಟದ ಕಾರ್ಯಕ್ರಮ ಎಂದು ಆಹ್ವಾನಿಸಿರಲಿಲ್ಲ ಇಲ್ಲಿ ಯಾವ ಕಾರಣಕ್ಕೆ ರಾಜ್ಯಮಟ್ಟದ ಕಾರ್ಯಕ್ರಮ ಇಟ್ಟರು ಗೊತ್ತಿಲ್ಲ.ಅದಕ್ಕೆ ನಮ್ಮ ವಿರೋಧವಿಲ್ಲ ರಾಜ್ಯಮಟ್ಟದ ಸರಕಾರದ ಕಾರ್ಯಕ್ರಮ ಎನ್ನುತ್ತಾರೆ ಜಾಹೀರಾತಿನಲ್ಲಿ ಅವರ ಪಕ್ಷದವರ ಫೋಟೊ ಹಾಕಿಕೊಂಡಿದ್ದಾರೆ ಎಂದು ಉತ್ತರಿಸಿದರು.
ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಬಿಜೆಪಿ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳಲ್ಲ ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರಲ್ಲ ಹೊಂದಾಣಿಕೆ ಇಲ್ಲ ಎಂದು ಹೇಳಿಲ್ಲವೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.












Click it and Unblock the Notifications