BPL Card: ಇದು ಅತ್ಯಂತ ನೋವಿನ ಸಂಗತಿ, ಸರ್ಕಾರಕ್ಕೆ ಯಡಿಯೂರಪ್ಪ ಪತ್ರ
ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಅನುಕೂಲಕ್ಕಾಗಿ 'ಭಾಗ್ಯಲಕ್ಷ್ಮಿ ಯೋಜನೆ' ಜಾರಿಗೆ ತಂದಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ಬಂದ ಯೋಜನೆ ಇದು. ಬಿ. ಎಸ್. ಯಡಿಯೂರಪ್ಪ ಅವರ ಕನಸಿನ ಯೋಜನೆ ಇದಾಗಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಯಡಿಯೂರಪ್ಪ ಸರ್ಕಾರಕ್ಕೆ ಪತ್ರವೊಂದನ್ನು ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.
ಹೆಣ್ಣು ಮಕ್ಕಳ ಭವಿಷ್ಯ ಬೆಳಗಲೆಂದೇ ಬಿ. ಎಸ್. ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು. ಆದರೆ, ಯೋಜನೆ ಜಾರಿಯಾಗಿ 18 ವರ್ಷ ಕಳೆದರೂ ಭಾಗ್ಯಲಕ್ಷ್ಮಿ ಬಾಂಡ್ ಪಡೆದ ಫಲಾನುಭವಿಗಳ ಖಾತೆಗೆ ಇನ್ನೂ 1 ಲಕ್ಷ ರೂ. ಜಮೆಯಾಗಿಲ್ಲ. ಇದನ್ನು ಮನಗಂಡು ಯಡಿಯೂರಪ್ಪ ರಾಜ್ಯ ಸರ್ಕಾರ ಮೊದಲು ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ಸರಳವಾಗಿ ಯೋಜನೆಯ ಎಲ್ಲ ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ನೆರವು ತಲುಪುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಪತ್ರದ ವಿವರ: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಬಡ ಹೆಣ್ಣುಮಕ್ಕಳ ಬಾಳಿಗೆ ಬೆಳಕಾಗುವ ಉದ್ದೇಶದಿಂದ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ನನ್ನ ಸರ್ಕಾರ ಜಾರಿ ಮಾಡಿದ್ದ ಕನಸಿನ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ. ಆದರೆ, ಯೋಜನೆ ಜಾರಿಯಾಗಿ 18 ವರ್ಷ ಕಳೆದರೂ ಭಾಗ್ಯಲಕ್ಷ್ಮಿ ಬಾಂಡ್ ಪಡೆದ ಫಲಾನುಭವಿಗಳ ಖಾತೆಗೆ ಇನ್ನೂ 1 ಲಕ್ಷ ರೂ. ಜಮೆಯಾಗಿಲ್ಲದಿರುವುದು ನನ್ನ ಗಮನಕ್ಕೆ ಬಂದಿದ್ದು, ಇದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಇದುವರೆಗೂ 34.50ಕ್ಕೂ ಹೆಚ್ಚು ಲಕ್ಷ ಭಾಗ್ಯಲಕ್ಷ್ಮಿ ಫಲಾನುಭವಿಗಳಿದ್ದು, 18 ವರ್ಷ ತುಂಬಿದ ಬಡ ಹೆಣ್ಣುಮಕ್ಕಳ ಉನ್ನತ ವ್ಯಾಸಂಗ ಸೇರಿದಂತೆ ಇತರೆ ಕಾರ್ಯಗಳಿಗೆ ನೆರವಾಗುವ ಈ ಯೋಜನೆಯ ಧೈಯೋದ್ದೇಶಕ್ಕೆ ಕಳಂಕ ತರುವಂತೆ ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿ ಕಠಿಣ ತಾಂತ್ರಿಕ ಷರತ್ತುಗಳ ದಾಖಲಾತಿಗಳನ್ನು ನೀಡುವಂತೆ ಫಲಾನುಭವಿಗಳಿಗೆ ಇಲಾಖೆಯಿಂದ ಸೂಚನೆ ನೀಡಿದೆ ಹಾಗೂ ಈ ತಾಂತ್ರಿಕ ಸಮಸ್ಯೆಗಳನ್ನು ಸರಳವಾಗಿ ಇರುವಂತೆ ಪರಿಹರಿಸದಿರುವುದು ಈ ಸರ್ಕಾರದ ಕಾರ್ಯಕ್ಷಮತೆಗೆ ಕನ್ನಡಿ ಹಿಡಿದಿದೆ ಎಂದು ದೂರಿದ್ದಾರೆ.
ಭಾಗ್ಯಲಕ್ಷ್ಮಿ ಯೋಜನೆ ಅಡಿ ಪರಿಪಕ್ವಗೊಂಡ ಫಲಾನುಭವಿಗಳ ಹಲವು ಕುಟುಂಬಗಳಿಗೆ ಇನ್ನೂ ಮಾಹಿತಿ ತಲುಪದಿರುವುದು, ಮಾಹಿತಿ ಇರುವವರಿಗೆ ದಾಖಲೆಗಳನ್ನು ಸಲ್ಲಿಸಲು ಸರ್ಕಾರಿ ಕಚೇರಿಗಳಿಗೆ ಅಲೆಸುತ್ತಿರುವುದು ಖಂಡನೀಯ. ಅದರಲ್ಲೂ ತಂದೆ-ತಾಯಿ ಇಬ್ಬರು ಮೃತಪಟ್ಟ ಕುಟುಂಬಗಳ ಹೆಣ್ಣು ಮಕ್ಕಳ ಪರಿಸ್ಥಿತಿಗಳನ್ನು ಸೂಕ್ಷ್ಮತೆ, ಮಾನವೀಯತೆಯಿಂದ ಸರ್ಕಾರ ಪರಿಗಣಿಸದಿರುವ ವರದಿಗಳು ಅತೀವ ಖೇದಕರ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಹೀಗಾಗಿ ರಾಜ್ಯ ಸರ್ಕಾರ ಮೊದಲು ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ, ಸಂವೇದನಶೀಲವಾಗಿ ನಡೆದು, ಸರಳವಾಗಿ ಯೋಜನೆಯ ಎಲ್ಲ ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ನೆರವು ತಲುಪುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ವಿಶೇಷವಾಗಿ, ಆರ್ಥಿಕವಾಗಿ ದುರ್ಬಲರಾಗಿರುವ ಹೆಣ್ಣು ಮಕ್ಕಳ ಹಿತಾಸಕ್ತಿ ರಕ್ಷಣೆ ರಾಜ್ಯ ಸರ್ಕಾರದ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. ಅವರ ಭವಿಷ್ಯ ಬೆಳಗುವ ಮಹತ್ವದ ಈ ಯೋಜನೆಯನ್ನು ಈ ಕಾಂಗ್ರೆಸ್ ಸರ್ಕಾರ ನಿಲ್ಲಿಸಿರುವುದು ದುರ್ದೈವದ ಸಂಗತಿಯೇ ಸರಿ. ಮೊದಲು ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಅರ್ಹ ನೆರವು ನೀಡಬೇಕು, ಮತ್ತೆ ಯೋಜನೆಯನ್ನು ಜಾರಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಪೂರ್ವಕವಾಗಿ ಆಗ್ರಹಿಸುತ್ತೇನೆ ಎಂದು ಯಡಿಯೂರಪ್ಪ ಪತ್ರದಲ್ಲಿ ತಿಳಿಸಿದ್ದಾರೆ.
ಭಾಗ್ಯಲಕ್ಷ್ಮಿ ಯೋಜನೆ: ಕರ್ನಾಟಕ ಸರ್ಕಾರದ ಈ ಯೋಜನೆಯ ಪ್ರಮುಖ ಗುರಿ ಬಡತನ ರೇಖೆಯ ಕೆಳಗಿರುವ (ಬಿಪಿಎಲ್) ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ ಪ್ರೋತ್ಸಾಹಿಸುವುದು ಮತ್ತು ಸಮಾಜದಲ್ಲಿ ಸಾಮಾನ್ಯವಾಗಿ ಕುಟುಂಬದಲ್ಲಿ ಹೆಣ್ಣು ಮಗುವಿನ ಸ್ಥಿತಿಯನ್ನು ಹೆಚ್ಚಿಸುವುದು. ತಾಯಿಯ/ ತಂದೆ ಅಥವಾ ಪೋಷಕರ ಮೂಲಕ ಹೆಣ್ಣು ಮಗುವಿಗೆ ಹಣಕಾಸಿನ ಸಹಾಯವನ್ನು ಒದಗಿಸಲಾಗುತ್ತದೆ.
ಈ ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು 31 ಮಾರ್ಚ್ 2006ರ ನಂತರ ಬಡತನ ರೇಖೆಯ (ಬಿಪಿಎಲ್) ಕೆಳಗಿರುವ ಕುಟುಂಬದಲ್ಲಿ ಜನಿಸಿರುವ ಹೆಣ್ಣು ಮಕ್ಕಳು ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಮಗುವಿನ ಜನನದ ಒಂದು ವರ್ಷದವರೆಗೆ ದಾಖಲಾತಿ ಮಾಡಬೇಕು. ಈ ಯೋಜನೆಯು ಬಿಪಿಎಲ್ ಕುಟುಂಬದ ಇಬ್ಬರು ಮಕ್ಕಳಿಗೆ ಮಾತ್ರ. ಹೆಣ್ಣು ಮಗು ಬಾಲಕಾರ್ಮಿಕರಾಗಿರಬಾರದು. ಆರೋಗ್ಯ ಇಲಾಖೆಯ ಕಾರ್ಯಕ್ರಮದ ಪ್ರಕಾರ ಪ್ರತಿ ಲಸಿಕೆ ಮಾಡಿಸಿರಬೇಕು. ಯೋಜನೆಯ ಮೊತ್ತಕ್ಕೆ ಅರ್ಹತೆ ಪಡೆಯಲು, ಫಲಾನುಭವಿಯು 8 ನೇ ತರಗತಿಯನ್ನು ಪೂರ್ಣಗೊಳಿಸಬೇಕು ಮತ್ತು 18 ವರ್ಷ ವಯಸ್ಸಿಗೆ ತಲುಪುವ ಮೊದಲು ಅವಳು ವಿವಾಹಿತಳಾಗಿರಬಾರದು.
ಪ್ರಯೋಜನಗಳು
* ಮಗುವಿಗೆ ಆರೋಗ್ಯ ವಿಮೆಯು ಗರಿಷ್ಠ ರೂ. ವರ್ಷಕ್ಕೆ 25,000.
* ವಾರ್ಷಿಕ ವಿದ್ಯಾರ್ಥಿವೇತನ ರೂ. 300 ರಿಂದ 1,000 ನೀಡಲಾಗುತ್ತದೆ.
* ಈ ಪ್ರಯೋಜನಗಳ ಹೊರತಾಗಿ, ಪೋಷಕರು ರೂ.1 ಲಕ್ಷ ಅಪಘಾತ ಮತ್ತು ರೂ. 42,500 ಫಲಾನುಭವಿಯ ನೈಸರ್ಗಿಕ ಸಾವಿಗೆ ವಿಮೆ ದೊರೆಯುತ್ತದೆ.
* ಕೆಲವು ವಾರ್ಷಿಕ ವಿದ್ಯಾರ್ಥಿವೇತನಗಳು ಮತ್ತು ವಿಮೆ ಸೌಲಭ್ಯಗಳು ಅರ್ಹತಾ ಮಾನದಂಡಗಳ ಮುಂದುವರಿದ ಪೂರೈಸುವಿಕೆಯಲ್ಲಿ ಫಲಾನುಭವಿಗೆ ಲಭ್ಯವಾಗುತ್ತಿವೆ.












Click it and Unblock the Notifications