ಸುದೀರ್ಘ ಮಳೆ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪ್ರವಾಹ
ಬೆಂಗಳೂರು, ಅಕ್ಟೋಬರ್ 20: ಬೆಂಗಳೂರು, ತುಮಕೂರು ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಬುಧವಾರ ರಾತ್ರಿ ಸುರಿದ ಸುದೀರ್ಘ ಜೋರು ಮಳೆಯಿಂದಾಗಿ ತುಮಕೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ (NH 4) ಜಲಾವೃತವಾಗಿದೆ. ಇದರಿಂದ ಗುರುವಾರ ಈ ರಸ್ತೆಯಲ್ಲಿ ಕಿಲೋಮೀಟರ್ಗಟ್ಟಲೇ ವಾಹನಗಳು ನಿಂತು ಸಂಚಾರ ಅಸ್ತವ್ಯಸ್ತವಾಯಿತು.
ಬೆಂಗಳೂರು, ತುಮಕೂರು ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿ ಮೂರು ನಾಲ್ಕು ಗಂಟೆ ಗುಡುಗು ಸಹಿ ರಣಮಳೆ ದಾಖಲಾಗಿದೆ. ಈಗಾಗಲೇ ಮಳೆಯಿಂದಾಗಿ ತುಂಬಿದ್ದ ಕೆರೆ ಕಟ್ಟೆಗಳು ನೆನ್ನೆ ಸುರಿದ ಮಳೆಯಿಂದ ತುಂಬಿ ಹರಿದಿವೆ. ತುಮಕೂರಿನ ಹೆಬ್ಬಾಕ ಕೆರೆ ಏರಿ ಒಡೆದು ಹರಿದಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿ-4ರ ಮೇಲೆಲ್ಲ ನೀರು ಹರಿದು ಆವಾಂತರಗಳನ್ನು ಸೃಷ್ಟಿಸಿದೆ.
ಬೆಂಗಳೂರಿನಿಂದ ಪುಣೆ ಕಡೆಗೆ ತೆರಳಲು ಇರುವ ಈ ಮಾರ್ಗದ ರಸ್ತೆಯಲ್ಲಿ ಒಂದೆರಡು ಅಡಿಯಷ್ಟು ನೀರು ನಿಂತಿದ್ದು, ವಾಹನ ಸವಾರರಿಗೆ ಪಜೀತಿ ಸೃಷ್ಟಿಸಿದೆ. ಬೆಂಗಳೂರಿನಿಂದ ತುಮಕೂರು-ಚಿತ್ರದುರ್ಗ-ದಾವಣಗೆರೆ -ಹಾವೇರಿ-ಹುಬ್ಬಳ್ಳಿ-ಬೆಳಗಾವಿ-ಪುಣೆ ಮಾರ್ಗವಾಗಿ ಎರಡು ಬದಿಗಳಲ್ಲಿ ನಿತ್ಯ ಲಕ್ಷಗಟ್ಟಲೆ ವಾಹನಗಳು ಸಂಚರಿಸುತ್ತವೆ. ಗುರುವಾರ ಮಳೆಯಿಂದಾಗಿ ಕಾರು, ಬಸ್, ಲಾರಿ ಸವಾರರಿಗೆ ತೊಂದರೆ ಅನುಭವಿಸಿದ್ದಾರೆ.

ಬೆಳೆ ಪ್ರದೇಶ ಜಲಾವೃತ: ರೈತ ಕಂಗಾಲು
ಹೆದ್ದಾರಿ ಮಾತ್ರವಲ್ಲ ತುಮಕೂರು, ಕೋರಾ, ಹೆಬ್ಬಾಕ ಕೆರೆ ಸುತ್ತಮುತ್ತಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಗಳಿಗೆ ಹಾನಿ ಉಂಟಾಗಿದೆ. ಅಡಿಕೆ, ರಾಗಿ, ತೆಂಗು ಬೆಳೆಗಳು ನೀರಲ್ಲಿ ನಿಂತಿವೆ. ವರ್ಷಪೂರ್ತಿ ದುಡಿದ ರೈತ ಕಂಗಾಲಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾನೆ.

ಕೆಲವೇ ವಾರಗಳ ಹಿಂದಷ್ಟೇ ರಾಮನಗರ, ಚೆನ್ನಪಟ್ಟಣ ಮತ್ತು ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಸುರಿದ ನಿರಂತರ ಮಳೆಗೆ ಕೆರೆ ಕೋಡಿ ಒಡೆದು ಹರಿದು ಸಾಕಷ್ಟು ಆವಾಂತರಗಳನ್ನು ಸೃಷ್ಟಿಸಿತ್ತು. ಆಗ ಬೆಂಗಳೂರು-ಮೈಸೂರು ಹೆದ್ದಾರಿ ಜಲಾವೃತಗೊಂಡಿತ್ತು. ಹೆದ್ದಾರಿಯ ರಸ್ತೆ ಅಂಡರ್ಪಾಸ್ಗಳಲ್ಲಿ ಮೂರ್ನಾಲ್ಕು ದಿನ ನೀರು ನಿಂತಿದ್ದರಿಂದ ಬೆಂಗಳೂರು-ಮೈಸೂರು ಸಂಪರ್ಕ ಕಡಿತವಾಗಿತ್ತು. ಕನಕಪುರ, ಮಳ್ಳವಳ್ಳಿ ಮೂಲಕ ಪರ್ಯಾಯ ಮಾರ್ಗದಲ್ಲಿ ಮೈಸೂರಿಗೆ ಹೋಗಿ ಬರಬೇಕಾದ ಅನಿವಾರ್ಯತೆ ಉಂಟಾಗಿದ್ದನ್ನು ಈ ವೇಳೆ ಸ್ಮರಿಸಬಹುದಾಗಿದೆ.












Click it and Unblock the Notifications