ಪೊಲೀಸರ ದೌರ್ಜನ್ಯ ಖಂಡಿಸಿ ಪತ್ರಕರ್ತರ ಪ್ರತಿಭಟನೆ
ಬೆಂಗಳೂರು, ಏಪ್ರಿಲ್, 21: ಮಾಡದ ತಪ್ಪಿಗೆ ಪೊಲೀಸರಿಂದ ಏಟು ತಿಂದ ನೋವು, ತಾನು ಕೆಲಸ ಮಾಡುತ್ತಿರುವ ಸಂಸ್ಥೆಯ ಕ್ಯಾಮರಾ ಬೇರೆಯಾರೋ ಹಾಳು ಮಾಡಿದ್ದಕ್ಕೆ ದಂಡ ತುಂಬಬೇಕಾದ ಪರಿಸ್ಥಿತಿ... ಮೈ, ಎದೆ, ಮುಖದ ಮೇಲೆ ಗಾಯಗಳು.. ಇದು ಬೆಂಗಳೂರಿನ ಪತ್ರಕರ್ತ ಮಿತ್ರರ ಸ್ಥಿತಿ.
ಕೇಂದ್ರ ಸರ್ಕಾರದ ಪಿಎಫ್ ನೀತಿ ಖಂಡಿಸಿ ನಡೆದ ಬೆಂಗಳೂರಲ್ಲಿ ನಡೆದ ಉಗ್ರ ಪ್ರತಿಭಟನೆಯ ವಿವಿಧ ಮುಖಗಳು ಒಂದೊಂದಾಗಿ ಗೋಚರವಾಗುತ್ತಿವೆ. ಪೊಲೀಸರು ಕಾರಣವಿಲ್ಲದೇ ಪತ್ರಕರ್ತರ ಮೇಲೆ ನಡೆಸಿದ ಅಮಾನವೀಯ ಹಲ್ಲೆ ಖಂಡಿಸಿ ಗುರುವಾರ ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಪತ್ರಕರ್ತರು ಪ್ರತಿಭಟನೆ ನಡೆಸಿದರು.[ಬೆಂಗಳೂರು 'ಪಿಎಫ್' ಕಾರ್ಮಿಕರ ದಂಗೆಯ ಹಿಂದಿನ ಕಾಣದ 'ಕೈ'ಗಳು?]
ಒಂದು ವಾರ ಕಾಲ ಕೈಗೆ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸುತ್ತೇವೆ. ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಢಿಕರಣ ಮಾಡಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಮತ್ತು ಪೊಲೀಸರಿಂದ ಹಾಳಾದ ಸಾಮಗ್ರಿಗಳಿಗೆ ಪರಿಹಾರವನ್ನು ಕೇಳುತ್ತೇವೆ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್ ಶ್ರೀಧರ್ ಮತ್ತು ಪ್ರಧಾನ ಕಾರ್ಯದರ್ಶಿ ಎಸ್ ಶಿವಪ್ರಕಾಶ್ ತಿಳಿಸಿದರು. [ಬೆಂಗಳೂರಿನ ಶಾಂತಿ ಕದಡಿದವರು ಯಾರು?]
ಬೆಂಗಳೂರು ಪ್ರೆಸ್ ಕ್ಲಬ್ ನೇತೃತ್ವದಲ್ಲಿ, ಫೋಟೋಗ್ರಾಫರ್ಸ್ ಅಸೋಸಿಯೇಷನ್, ವರದಿಗಾರ ಒಕ್ಕೂಟ, ಟಿವಿ ಪತ್ರಕರ್ತರ ಸಂಘಟನೆಗಳು ಒಟ್ಟಾಗಿ ಪೊಲೀಸರ ದೌರ್ಜನ್ಯ ಖಂಡಿಸಿದವು.[ಪತ್ರಕರ್ತೆ ಸೀತಾಲಕ್ಷ್ಮಿ ಮೇಲೆ ಹಲ್ಲೆ!]
ಯಾರ್ಯಾರ ಮೇಲೆ ಹಲ್ಲೆಯಾಗಿದೆ?
ಜನಶ್ರೀ ವಾಹಿನಿಯ ವರದಿಗಾರ ಶರಣು ಗುರಿಕಾರ್ ಅವರ ಮೇಲೆ ತೀವ್ರ ತೆರನಾದ ಹಲ್ಲೆ ಪೊಲೀಸರಿಂದ ಆಗಿದೆ. ಅವರ ಕೈ ಮತ್ತು ಎದೆ ಭಾಗಕ್ಕೆ ಗಾಯಗಳಾಗಿವೆ. ಪಬ್ಲಿಕ್ ಟಿವಿಯ ವರದಿಗಾರ್ತಿ ಮತ್ತು ಸಮಯ ಸುದ್ದಿವಾಹಿನಿಯ ಶಿವು ಅವರ ಮೇಲೂ ಪೊಲೀಸರು ದರ್ಪ ತೋರಿಸಿದ್ದರು.
ಕ್ಯಾಮರಾ ಪುಡಿಮಾಡಿದರು
ಲಕ್ಷಾಂತರ ರುಪಾಯಿ ಮೌಲ್ಯದ ಕ್ಯಾಮರಾವನ್ನು ಕಣ್ಣೆದುರೆ ರಸ್ತೆಗೆ ಅಪ್ಪಳಿಸಿದರು. ಕೈಯಲ್ಲಿದ್ದ ಲೋಗೋವನ್ನು ಕಿತ್ತೆಸೆದರು. ಈ ಬಗ್ಗೆ ನಮ್ಮ ಬಳಿ ಸಾಕ್ಷಿಯೂ ಇದೆ ಎಂದು ಪತ್ರಕರ್ತರು ಹೇಳಿದರು.
ಸಾಮಗ್ರಿ ಹಾನಿ
ಸುವರ್ಣ ಸುದ್ದಿವಾಹಿನಿ, ಟಿವಿ 9 ಮತ್ತು ಜನಶ್ರೀ ವಾಹಿನಿಯ ಕ್ಯಾಮರಾಗಳನ್ನು ಪೊಲೀಸರು ಧ್ವಂಸ ಮಾಡಿದ್ದು ಇದಕ್ಕೆ ಪರಿಹಾರ ಕೊಡುವವರು ಯಾರು ಎಂಬ ಪ್ರಶ್ನೆ ಕೇಳಿ ಬಂತು.
ಮಾಧ್ಯಮವನ್ನೇ ಬ್ಯಾನ್ ಮಾಡಿ
ಷನಿಮಗೆ ಮಾಧ್ಯಮದವರು ಬೇಕಾಗಿಲ್ಲ ಅಂದರೆ ಒಂದು ಹೊಸ ಶಾಸನ ತಂದು ನಮ್ಮನ್ನೇ ಬ್ಯಾನ್ ಮಾಡಿ. ಆಗ ರೀತಿಯ ದುರ್ವತನೆ ತೋರಲು ಅವಕಾಶವೇ ಇರುವುದಿಲ್ಲ ಎಂದು ಆಕ್ರೋಶಭರಿತರಾಗಿ ಹೇಳಿದರು.
ಮಾಲೀಕರು ಸಹಕಾರ ನೀಡಬೇಕು
ನಮ್ಮ ಮೇಲೆ ಹಲ್ಲೆಯಾದಾಗ ಮಾಧ್ಯಮಗಳ ಮಾಲೀಕರು ನಮ್ಮ ಬೆಂಬಲಕ್ಕೆ ನಿಲ್ಲಬೇಕು. ಒಂದು ದಿನ ಕಾಲ ಎಲ್ಲ ಮಾಧ್ಯಮಗಳ, ಪತ್ರಿಕೆಗಳ ಕೆಲಸವನ್ನು ನಿಲ್ಲಿಸಬೇಕು ಎಂಬ ಆಗ್ರಹವೂ ಕೇಳಿಬಂತು.
ಕಣ್ಣು ಒರೆಸುವ ತಂತ್ರ ಬೇಕಿಲ್ಲ
ಸರ್ಕಾರದವರು ತನಿಖೆ ಮಾಡುತ್ತೇವೆ ಎಂದು ಹೇಳುತ್ತಾರೆ. ವಿಡಿಯೋ , ಫೋಟೋಗಳಲ್ಲಿ ಯಾವ ಇನ್ಸ್ ಪೆಕ್ಟರ್ ಹಲ್ಲೆ ಮಾಡಿದ್ದು ಎಂಬುದರ ಚಿತ್ರೀಕರಣವೇ ಇದ್ದಾಗ ತನಿಖೆ ಮಾಡುವುದು ಅಂದರೆ ಅರ್ಥವೇನು? ಎಂದು ಪ್ರಶ್ನಿಸಲಾಯಿತು.
ಭಿನ್ನಾಭಿಪ್ರಾಯ ಬಿಡಿ
ಪತ್ರಕರ್ತರೆಲ್ಲರೂ ಭಿನ್ನಾಭಿಪ್ರಾಯಬಿಟ್ಟು ಒಂದಾಗಿ ಹೋರಾಟ ಮಾಡಬೇಕು. ಕೋರ್ಟ್ ನಲ್ಲಿ ವಕೀಲರು ಹಲ್ಲೆ ಮಾಡುತ್ತಾರೆ, ಇಂಥ ಸಮಯದಲಕ್ಲಿ ಪೊಲೀಸರು ಹಲ್ಲೆ ಮಾಡುತ್ತಾರೆ.. ಕೆಲವೊಮ್ಮೆ ಜನರು ನಮ್ಮ ಮೈ ಮೇಲೆ ಬರುತ್ತಾರೆ. ಇದಕ್ಕೆಲ್ಲ ಉತ್ತರ ಕಂಡುಕೊಳ್ಳಬೇಕಿದೆ ಎಂಬ ಅಭಿಪ್ರಾಯ ಕೇಳಿಬಂತು.
ಅಮಾನತು ಮಾಡಿ
ಪತ್ರಕರ್ತರ ಮೇಲೆ ಮತ್ತು ಮಹಿಳೆಯರ ಮೇಲೆ ಹಲ್ಲೆ ಮಾಡಿದ ಪೊಲೀಸರನ್ನು ಅಮಾನತು ಮಾಡಿ. ಅವರ ವೇತನದ ಹಣದಲ್ಲಿ ನಮಗಾದ ಹಾನಿ ತುಂಬಿಕೊಡಿ ಎಂದು ಆಗ್ರಹಿಸಲಾಯಿತು
ಹಲ್ಲೆ ಮಾಡಿದವರು ಯಾರು?
ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ, ಹುಳಿಮಾವು ಠಾಣೆ ಇನ್ಸ್ ಪೆಕ್ಟರ್ ವಿಜಯ್ ಕುಮಾರ್ ಮತ್ತು ಅಪರಾಧ ವಿಭಾಗದ ಪೇದೆಗಳು ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಪತ್ರಕರ್ತರು ಮಾಡಿದ್ದಾರೆ.
ಪರಿಹಾರ ಏನು?
ಸರ್ಕಾರ ಮತ್ತು ವಾರ್ತಾ ಇಲಾಖೆಯೊಂದಿಗೆ ಮಾತನಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆಗ್ರಹಿಸುತ್ತೇವೆ. ಸರ್ಕಾರ ನಿರ್ಲಕ್ಷ್ಯ ತಾಳಿದರೆ ಇನ್ನೊಮ್ಮೆ ಹೋರಾಟ ನಡೆಸಬೇಕಾಗುತ್ತದೆ ಎಂಬ ತೀರ್ಮಾನಕ್ಕೆ ಪತ್ರಕರ್ತರು ಬಂದಿದ್ದಾರೆ.