'ನೀನು ಸರ್ಕಾರಿ ಅಧಿಕಾರಿಯಲ್ಲವೇ?' ಡಿಕೆ ರವಿ ತಾಯಿ ಪ್ರಶ್ನೆ
ಬೆಂಗಳೂರು, ಮಾರ್ಚ್, 22: " ನೀನು ಒಬ್ಬ ಸರ್ಕಾರಿ ಅಧಿಕಾರಿಯಲ್ಲವೇ? ನನ್ನನ್ನು ಯಾಕೆ ತಡೆಯುತ್ತೀಯಾ" ಇದು ನಿಗೂಢವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿಕೆ ರವಿಯವರ ತಾಯಿ ಗೌರಮ್ಮನವರ ಆಕ್ರೋಶದ ಮಾತು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದಾಗ ಅವರನ್ನು ತಡೆದ ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರನ್ನು ಈ ಬಗೆಯಾಗಿ ಪ್ರಶ್ನಿಸಿದ್ದಾರೆ.
ಕಳೆದ ಏಳು ದಿನಗಳಿಂದ ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಗೌರಮ್ಮ ಮತ್ತು ಡಿಕೆ ರವಿ ಕುಟುಂಬದವರು ಹಾಗೂ ಬೆಂಬಲಿಗರು ಮಂಗಳವಾರ ವಿಧಾನ ಸೌಧದ ಮುತ್ತಿಗೆ ಹಾಕಲು ಯತ್ನ ನಡೆಸಿದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.[ಸೊಸೆ ಕುಸುಮಾ ಬಗ್ಗೆ ರವಿ ತಾಯಿ ಗೌರಮ್ಮ ಹೇಳಿದ್ದೇನು?]
ಕಳೆದುಕೊಂಡ ಮಗನನ್ನು ವಾಪಸ್ ನಾವು ಕೇಳುತ್ತಿಲ್ಲ. ಇಷ್ಟು ದಿನ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸಿಲ್ಲ. ಮುಖ್ಯಮಮಂತ್ರಿ ಸಿದ್ದರಾಯ್ಯ ಅವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಗೌರಮ್ಮ ಆರೋಪಿಸಿದರು.[ಗಾಂಧಿ ಪ್ರತಿಮೆ ಎದುರು ಕಣ್ಣೀರಿಟ್ಟ ಡಿಕೆ ರವಿ ತಾಯಿ ಗೌರಮ್ಮ]
ಪ್ರತಿಭಟನೆ ಆರಂಭಿಸಿ 7 ದಿನ
ಡಿಕೆ ರವಿ ಸಾವಿನ ತನಿಖೆಯ ಸಿಬಿಐ ವರದಿಯನ್ನು ಬಹಿರಂಗ ಮಾಡಬೇಕು. ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಡಿಕೆಮ ರವಿ ತಾಯಿ ಗೌರಮ್ಮ ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿ ಮಾರ್ಚ್ 16ರಿಂದ ಪ್ರತಿಭಟನೆ ಆರಂಭಿಸಿದ್ದರು.
ಅಸ್ಥಿಪಂಜರ ತರುತ್ತೇವೆ
ಸರ್ಕಾರ ಸೂಕ್ತ ಸ್ಪಂದನೆ ನೀಡದಿದ್ದರೆ ಡಿಕೆ ರವಿಯವರ ಅಸ್ಥಿಪಂಜರವನ್ನು ವಿಧಾನಸೌಧದ ಎದುರಿಗೆ ಇಟ್ಟು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಸರ್ಕಾರ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಸ್ಪಂದಿಸದ ಸರ್ಕಾರ
ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರದ ಯಾವ ಸಚಿವರು ಧರಣಿ ಸ್ಥಳಕ್ಕೆ ತೆರಳಲಿಲ್ಲ. ಇದು ಗೌರಮ್ಮನವರ ಆಕ್ರೋಶ ಮತ್ತಷ್ಟು ಹೆಚ್ಚಾಗಲು ಕಾರಣವಾಗಿತ್ತು.
ಸಿಬಿಐ ಕಚೇರಿಗೆ ಭೇಟಿ
ಮಂಗಳವಾರ ಸಿಬಿಐ ಕಚೇರಿಗೆ ತೆರಳಿದ ಗೌರಮ್ಮ ಮತ್ತು ಡಿಕೆ ರವಿ ಬೆಂಬಲಿಗರು ವರದಿಯನ್ನು ಬಹಿರಂಗ ಮಾಡುವಂತೆ ಆಗ್ರಹಿಸಿದ್ದರು. ನಂತರ ವಿಧಾನ ಸೌಧ ಮುತ್ತಿಗೆ ಹಾಕಲು ಮೆರವಣಿಗೆ ಮೂಲಕ ಆಗಮಿಸಿದರು.
ಸೊಸೆ ಬಗ್ಗೆ ಮೌನ ಮುರಿದ್ದ ಗೌರಮ್ಮ
ಚೆನ್ನಾಗಿ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದ ಸೊಸೆ ಡಿಕೆ ರವಿ ಪತ್ನಿ ಕುಸುಮಾ ನಮ್ಮ ಜತೆ ಇಲ್ಲ. ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ಹೇಳಿದ್ದ ಗೌರಮ್ಮ ನನ್ನ ಮಗನ ಜೊತೆ ಆಕೆಗೆ ಮದುವೆಯಾಗಿದ್ದಿ ಅಷ್ಟೆ ಗೊತ್ತು ಎಂದು ಹೇಳಿಕೆ ನೀಡಿದ್ದರು.
ಪರಮೇಶ್ವರ ಭೇಟಿ
ಡಿಕೆ ರವಿ ಹುಟ್ಟೂರು ದೊಡ್ಡಕೊಪ್ಪಲಿನಿಂದ ಆಗಮಿಸಿದ್ದ ಗೌರಮ್ಮ ಮೊದಲು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದ್ದರು.
ಉಪವಾಸ ಸತ್ಯಾಗ್ರಹ
ಸರ್ಕಾರ ಇದೇ ಬಗೆಯ ನೀತಿ ಮುಂದುವರಿಸಿದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಸದ್ಯ ಗೌರಮ್ಮ ಮತ್ತು ಡಿಕೆ ರವಿ ನ್ಯಾಯಕ್ಕೆ ಆಗ್ರಹಿಸುತ್ತಿದ್ದ ನೂರಾರು ಜನರನ್ನು ವಶಕ್ಕೆ ಪಡೆದಿದ್ದು ಅಡುಗೋಡಿ ಸಿ ಆರ್ ಗ್ರೌಂಡ್ ನಲ್ಲಿ ಇಡಲಾಗಿದೆ.