ಫೆಬ್ರವರಿ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತವಾಗಲಿದೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ !
ಬೆಂಗಳೂರು,ಜನವರಿ 5: ಗ್ರೀನ್ಫೀಲ್ಡ್ ಕಾರಿಡಾರ್ ಯೋಜನೆಯ ಭಾಗವಾಗಿರುವ 10 ಪಥಗಳ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಕಾಮಗಾರಿಯು ಅಂತಿಮ ಹಂತ ತಲುಪಿದ್ದು ಮುಂಬರುವ ಫೆಬ್ರವರಿಯಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕರ್ನಾಟಕ ಪ್ರವಾಸದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಕಾಮಗಾರಿಯನ್ನು ವೈಮಾನಿಕ ಸಮೀಕ್ಷೆಯ ಮೂಲಕ ಪರಿಶೀಲನೆ ನಡೆಸಿದ್ದಾರೆ. ಸಮೀಕ್ಷೆಯ ನಂತರದಲ್ಲಿ ಮಾಧ್ಯಮ ಪ್ರತಿನಿಧಿಗಳಿಂದ ಮಾತನಾಡಿದ ಅವರು, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ 117 ಕಿಮೀ ಉದ್ದದ ಯೋಜನೆಯಾಗಿದೆ. ಈ ಕಾಮಗಾರಿಯನ್ನು ಬೆಂಗಳೂರಿನಿಂದ ನಿಡಗಟ್ಟಾ ವರೆಗೆ ಮತ್ತು ನಿಡಗಟ್ಟಾದಿಂದ ಮೈಸೂರಿನವರೆಗೆ ಎಂಬ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಎಕ್ಸ್ಪ್ರೆಸ್ ವೇ ಕಾಮಗಾರಿಯು ಒಟ್ಟು 9,000 ಕೋಟಿ ರೂ ವೆಚ್ಚದಲ್ಲಿ ಸಿದ್ದವಾಗಲಿದೆ. 52 ಕಿಮೀ ಗ್ರೀನ್ಫೀಲ್ಡ್ನಲ್ಲಿ ಐದು ಬೈಪಾಸ್ಗಳನ್ನು ಒಳಗೊಂಡಿದ್ದು, ಈ ಮಾರ್ಗದಲ್ಲಿ ಸಂಚರಿಸುವವರಿಗೆ ತೊಂದರೆ-ಮುಕ್ತ ಪ್ರಯಾಣಕ್ಕೆ ಅನುಕೂಲಕರವಾಗಲಿದೆ ಎಂದ ಅವರು, ಮುಂಬರುವ ಫೆಬ್ರವರಿ 2023ರ ಅಂತ್ಯದ ವೇಳೆಗೆ ಯೋಜನೆ ಪೂರ್ಣಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾಮಗಾರಿಯನ್ನು ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.

ಬೆಂಗಳೂರು ಮತ್ತು ಮೈಸೂರು ನಡುವಿನ ಎಕ್ಸಪ್ರೆಸ್ ವೇ ಯೋಜನೆಯಿಂದ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು 1 ಗಂಟೆ 20 ನಿಮಿಷಗಳವರೆಗೆ ಕಡಿತಗೊಳಿಸುವುದರೊಂದಿಗೆ ಇಂಧನದ ಉಳಿತಾಯಕ್ಕೆ ಸಹಾಯಕವಾಗಲಿದೆ ಎಂದ ಅವರು, ಒಟ್ಟು 10 ಮಾರ್ಗಗಳ ಪೈಕಿ ಎರಡೂ ಬದಿಯಲ್ಲಿರುವ ಎರಡು ರಸ್ತೆಗಳು ಹಳ್ಳಿಗಳನ್ನು ಸಂಪರ್ಕಿಸುತ್ತವೆ ಮತ್ತು ಉಳಿದ 6 ಲೈನ್ಗಳು ನೇರ ಹೆದ್ದಾರಿ ಸಂಚಾರಕ್ಕೆ ಅನುವು ಮಾಡಿಕೊಡಲಿವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಎಕ್ಸ್ಪ್ರೆಸ್ ವೇ ನಾಮಕರಣಕ್ಕಾಗಿ ಹಗ್ಗ-ಜಗ್ಗಾಟ !
ಫೆಬ್ರವರಿ ಅಂತ್ಯದೊಳಗೆ ಸಂಚಾರಕ್ಕೆ ಮುಕ್ತವಾಗಲಿರುವ ಈ ಎಕ್ಸ್ಪ್ರೆಸ್ ವೇಗೆ ಯಾರ ಹೆಸರಿಡಬೇಕು ಎನ್ನುವ ವಿಷಯ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಈ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರ ಹೆಸರಿಡುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದರು. ಈ ಪೂರ್ವದಲ್ಲಿ ಸಂಸದ ಪ್ರತಾಪ್ ಸಿಂಹ ಅವರು, ಕಾವೇರಿ ಎಕ್ಸ್ಪ್ರೆಸ್ ವೇ ಎಂದು ಹೆಸರಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಕಾಂಗ್ರೆಸ್ ಎಂಎಲ್ಸಿಗಳಾದ ಮಧು ಜಿ ಮಾದೇಗೌಡ ಮತ್ತು ದಿನೇಶ ಗೂಳಿಗೌಡ ಅವರು ಸಹ ಒಡೆಯರ್ ಅವರ ಹೆಸರಿಡುವಂತೆ ಮನವಿ ಸಲ್ಲಿಸಿದ್ದರು. ಈಗ ಉನ್ನತ ಶಿಕ್ಷಣ ಸಚಿವ ಸಿ.ಎನ್ ಅಶ್ವತ್ ನಾರಾಯಣ್ ಅವರೂ ಸಹ ಒಡೆಯರ್ ಅವರ ಹೆಸರನ್ನಿಡುವಂತೆ ಸೂಚಿಸಿದ್ದಾರೆ. ಎಕ್ಸ್ಪ್ರೆಸ್ ವೇಗೆ ಹೆಸರಿಡುವ ಹಗ್ಗ-ಜಗ್ಗಾಟಕ್ಕೆ ಕೇಂದ್ರ ಸರ್ಕಾರ ಯಾವ ರೀತಿ ತೆರೆ ಎಳೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications