8 ವರ್ಷದ ಬಾಲಕಿಯ ಸುಳ್ಳು ದೂರು; ಫುಡ್ ಡೆಲಿವರಿ ಏಜೆಂಟ್ಗೆ ಥಳಿತ: ಕೊನೆಗೂ ಸಿಸಿಟಿವಿಯಿಂದ ತಿಳಿಯಿತು ಸತ್ಯಾಂಶ!
ಬೆಂಗಳೂರು, ಜೂನ್16: ಫುಡ್ ಡೆಲಿವರಿ ಆಪ್ಗಳಿಗೆ ಕಾರ್ಯ ನಿರ್ವಹಿಸುವ ಏಜೆಂಟ್ಗಳು ಪಡುವ ಕಷ್ಟಗಳು ಒಂದಾ. ಎರಡಾ. ಹಲವು ಸಂಕಷ್ಟಗಳನ್ನ ಎದುರಿಸಿರುವ ಫುಡ್ ಡೆಲಿವರಿ ಏಜೆಂಟ್ಗೆ ಅನುಭವಿಸಿದ್ದು, ಬೆಂಗಳೂರಿನಲ್ಲಿ 8 ವರ್ಷ ಬಾಲಕಿಯ ಸುಳ್ಳು ಆರೋಪದಿಂದ ಫುಡ್ ಡೆಲಿವರಿ ಏಜೆಂಟ್ ಒಬ್ಬರು ತಾವು ಮಾಡದ ತಪ್ಪಿಗೆ ಸುಖಾಸುಮ್ಮನೆ ಜನರಿಂದ ಧರ್ಮದೇಟು ತಿಂದಿದ್ಧಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ಒಂದಕ್ಕೆ ಫುಡ್ ಡೆಲಿವರಿ ಮಾಡಲು ಏಜೆಂಟ್ ಒಬ್ಬರು ಆಗಮಿಸಿದ್ದರು. ತನ್ನನ್ನು ಏಜೆಂಟ್ ಬಲವಂತವಾಗಿ ಟೆರೇಸ್ಗೆ ಕರೆದೊಯ್ದಿದ್ದಾನೆ ಎಂದು ಎಂಟು ವರ್ಷದ ಬಾಲಕಿಯೊಬ್ಬಳು ಸುಳ್ಳು ದೂರು ನೀಡಿದ ಕಾರಣ ಕೋಪಗೊಂಡ ಅಪಾರ್ಟ್ಮೆಂಟ್ನ ಮನೆಗಳಲ್ಲಿ ಇದ್ದ ನಿವಾಸಿಗಳು ಹಾಗೂ ಅಪಾರ್ಟ್ಮೆಂಟ್ನ ಭದ್ರತಾ ಸಿಬ್ಬಂದಿ 30 ವರ್ಷದ ಫುಡ್ ಡೆಲಿವರಿ ಬಾಯ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಆ ನಂತರ ಅಪಾರ್ಟ್ಮೆಂಟ್ನ ಕಟ್ಟಡದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದಾಗ ಫುಡ್ ಡೆಲಿವರಿ ಬಾಯ್ ಬಾಲಕಿಯನ್ನ ಕರೆದುಕೊಂಡು ಟೆರೇಸ್ಗೆ ಹೋಗಿಲ್ಲ ಎನ್ನುವ ಸಂಗತಿ ಬಯಲಾಗಿದೆ. ಅಷ್ಟೇ ಅಲ್ಲ, ಬಾಲಕಿ ಸುಳ್ಳು ಹೇಳಿದ್ದೂ ದೃಢಪಟ್ಟಿದೆ. ಬಾಲಕಿಯ ಪೋಷಕರು ತಮ್ಮ ಮಗಳನ್ನು ಹುಡುಕಿಕೊಂಡು ಕಟ್ಟಡದ ಟೆರೇಸ್ಗೆ ಹೋದಾಗ ಬಾಲಕಿ ಪೋಷಕರಿಗೆ ಈ ರೀತಿ ಸುಳ್ಳು ಹೇಳಿದ್ದಳು ಎಂದು ತಿಳಿದು ಬಂದಿದೆ. ಫುಡ್ ಡೆಲಿವರಿ ಏಜೆಂಟ್ ನನ್ನನ್ನು ಕಟ್ಟಡದ ಟೆರೇಸ್ಗೆ ಕರೆದೊಯ್ದ. ಆಗ ನಾನು ಆತನ ಕೈಗೆ ಕಚ್ಚಿ ಪರಾರಿಯಾದೆ ಎಂದು ಬಾಲಕಿ ಹೇಳಿದ್ದಳು ಎನ್ನಲಾಗಿದೆ.
ಏಳನೇ ಮಹಡಿಯ ಫ್ಲಾಟ್ನಿಂದ ಎಂಟು ವರ್ಷದ ಮಗಳು ಕಾಣೆಯಾಗಿದ್ದಾರೆ. ಮುಖ್ಯ ಬಾಗಿಲು ಹೊರಗಿನಿಂದ ಲಾಕ್ ಆಗಿದ್ದರಿಂದ ಪೋಷಕರು ಆಘಾತಕ್ಕೊಳಗಾಗಿದ್ದು, ದಂಪತಿಗಳು ತಮ್ಮ ಮಗಳನ್ನು ಹುಡುಕಲು ಪ್ರಾರಂಭಿಸಿದಾಗ ಅವರ ನೆರೆಹೊರೆಯವರು ಕೂಡ ಅವರೊಂದಿಗೆ ಸೇರಿಕೊಂಡು ಸುಮಾರು 30 ನಿಮಿಷಗಳ ಹುಡುಕಾಟ ನಡೆಸಿದ್ದಾರೆ. ನಂತರ ಒಬ್ಬರು ಟೆರೇಸ್ ಮೇಲೆ ಹುಡುಗಿಯನ್ನ ಗಮನಿಸಿದ್ದು, ಯಾಕೆ ಟೆರೇಸ್ ಇದ್ದಾಳೆ ಎಂದು ಆಕೆಯ ಪೋಷಕರು ಅವಳನ್ನು ಕೇಳಿದಾಗ ಬಾಲಕಿ ಫುಡ್ ಡೆಲಿವರಿ ಏಜೆಂಟ್ ಮೇಲೆ ಆರೋಪ ಮಾಡಿದ್ದಾರೆ.
ಬಾಲಕಿ ಈ ರೀತಿ ಹೇಳಿದ್ದೇ ತಡ, ಆಕೆಯ ಪೋಷಕರು ಕೂಡಲೇ ಅಪಾರ್ಟ್ಮೆಂಟ್ನ ಸೆಕ್ಯುರಿಟಿ ಗಾರ್ಡ್ಗಳನ್ನು ಕರೆದರು. ಗಾರ್ಡ್ಗಳು ಕೂಡಲೇ ಅಪಾರ್ಟ್ಮೆಂಟ್ನ ಮುಖ್ಯ ದ್ವಾರ ಬಂದ್ ಮಾಡಿದರು. ಈ ವೇಳೆ ಬಾಲಕಿ ಅಪಾರ್ಟ್ಮೆಂಟ್ ಸಂಕೀರ್ಣದಲ್ಲೇ ಇದ್ದ ಫುಡ್ ಡೆಲಿವರಿ ಬಾಯ್ ಕಡೆ ಬೊಟ್ಟು ಮಾಡಿ ತೋರಿಸಿದಳು. ಆಗ ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಭದ್ರತಾ ಸಿಬ್ಬಂದಿ ಹಿಂದೆ ಮುಂದೆ ವಿಚಾರಿಸದೆ ಡೆಲಿವರಿ ಏಜೆಂಟ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ನಂತರ ಅಪಾರ್ಟ್ಮೆಂಟ್ನ ಆಡಳಿತ ಮಂಡಳಿ ಸಿಬ್ಬಂದಿ ಪೊಲೀಸರಿಗೆ ವಿಷಯವನ್ನ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರೂ ಕೂಡಾ ಏಜೆಂಟ್ಗೆ ಥಳಿಸಿದ್ದಾರೆ ಎನ್ನಲಾಗಿದೆ. ಆ ಬಳಿಕ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಫುಡ್ ಡೆಲಿವರಿ ಏಜೆಂಟ್, ಬಾಲಕಿಯನ್ನು ಮಾತನಾಡಿಸಿರಲಿಲ್ಲ ಎಂದು ದೃಢಪಟ್ಟಿದೆ. ಅಷ್ಟೇ ಅಲ್ಲ, ಆತ ಬಾಲಕಿಯ ಸಮೀಪಕ್ಕೂ ಹೋಗಿಲ್ಲ ಎಂದು ತಿಳಿದು ಬಂದಿದ್ದು, ಬಾಲಕಿ ಟೆರೇಸ್ನಲ್ಲಿ ಒಂಟಿಯಾಗಿದ್ದಳು ಎಂದು ತಿಳಿದು ಬಂದಿದೆ.
ಈ ಕುರಿತಾಗಿ ಫುಡ್ ಡೆಲಿವರಿ ಏಜೆಂಟ್ ಮಾತನಾಡಿ, ಬಾಲಕಿ ನನ್ನ ಕಡೆ ಬೆರಳು ಮಾಡಿ ತೋರಿಸಿದ್ದೇ ತಡ ಎಲ್ಲರೂ ಸೇರಿಕೊಂಡು ನನಗೆ ಥಳಿಸಿದರು. ನನ್ನ ಮಾತನ್ನು ಯಾರು ಕೇಳಲಿಲ್ಲ. ಬಾಲಕಿ ಆ ರೀತಿ ನನ್ನ ವಿರುದ್ಧ ದೂರು ನೀಡಿದ್ದು ಏಕೆ ಅನ್ನೋದೇ ಗೊತ್ತಾಗಲಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮೊದಲು ಕಟ್ಟಡದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದರು. ಆಗ ಅವರಿಗೆ ಸತ್ಯಾಂಶ ಗೊತ್ತಾಯ್ತು. ಒಂದು ವೇಳೆ ಕಟ್ಟಡದಲ್ಲಿ ಸಿಸಿಟಿವಿ ಕ್ಯಾಮರಾ ಇಲ್ಲದೆ ಹೋಗಿದ್ದರೆ ನನ್ನ ಕಥೆ ಏನಾಗುತ್ತಿತ್ತು ಎಂದು ಡೆಲಿವರಿ ಏಜೆಂಟ್ ಆತಂಕ ವ್ಯಕ್ತಪಡಿಸುತ್ತಾರೆ.
ಘಟನೆ ಬಳಿಕ ಪೆಟ್ಟು ತಿಂದು ನೋವು ಅನುಭವಿಸುತ್ತಿದ್ದ ಡೆಲಿವರಿ ಏಜೆಂಟ್ಗೆ ಫುಡ್ ಡೆಲಿವರಿ ಸಂಸ್ಥೆ ರಜೆ ಕೊಟ್ಟು ವಿಶ್ರಾಂತಿ ಪಡೆಯುವಂತೆ ಮನಗೆ ಕಳಿಸಿದೆ ಎಂದು ತಿಳಿದು ಬಂದಿದೆ. ಇನ್ನೂ ಸುಳ್ಳು ಹೇಳಿರುವ ಬಾಲಕಿಯನ್ನ ಪೋಲಿಸರು ನಯವಾಗಿ ವಿಚಾರಿಸಿದ್ದಾಗ, ಓದುವ ಸಮಯದಲ್ಲಿ ಆಟವಾಡಲು ಹೋಗುತ್ತೀಯಾ ಎಂದು ತನ್ನ ಪೋಷಕರು ಬೈಯ್ಯುತ್ತಾರೆ ಅನ್ನೋ ಭಯದಲ್ಲಿ ಈ ರೀತಿ ಸುಳ್ಳು ಹೇಳಿದೆ ಎಂದು ಬಾಲಕಿ ಪೊಲೀಸರಿಗೆ ಹೇಳಿದ್ದಾಳೆ. ಸತ್ಯಾಂಶ ಗೊತ್ತಾದ ಬಳಿಕ ಬಾಲಕಿಯ ಪೋಷಕರು ಫುಡ್ ಡೆಲಿವರಿ ಏಜೆಂಟ್ ಬಳಿ ಕ್ಷಮೆ ಯಾಚಿಸಿದ್ದಾರೆ












Click it and Unblock the Notifications