ಸೋಮವಾರದಿಂದ ಅಧಿವೇಶನ ಯಥಾ ಪ್ರಕಾರ ನಡೆಯಲಿದೆ: ಸಿಎಂ ಸ್ಪಷನೆ
ಮಂಗಳೂರು, ಡಿಸೆಂಬರ್ 26: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಎಂದಿನಂತೆ ಯಥಾವತ್ತಾಗಿ ನಡೆಯುತ್ತದೆ. ಇದರಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ಅಭಿವೃದ್ಧಿ ವಿಷಯಗಳ ಸೇರಿದಂತೆ ಉದ್ದೇಶಿತ ಪ್ರಮುಖ ವಿಷಯಗಳ ಕುರಿತು ಸದನದಲ್ಲಿ ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಮೂಡಬಿದಿರೆಯಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮುಖ್ಯಮಂತ್ರಿಗಳು ಸುದ್ದಿಗಾರರ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ಬೆಳಗಾವಿ ವಿಧಾನಮಂಡಲದ ಅಧಿವೇಶನ ಒಂದು ವಾರಕ್ಕೆ ಸಿಮೀತವಾಗಿದೆಯೇ? ಎಂಬ ಪ್ರಶ್ನೆಗೆ ಅವರು, ಹತ್ತು ದಿನಗಳವರೆಗೂ ಬೆಳಗಾವಿಯ ಚಳಿಗಾಲದ ಅಧಿವೇಶನ ನಡೆಯಲಿದ್ದು, ಯಾವುದೇ ಬದಲಾವಣೆಯ ನಿರ್ಧಾರ ಕೈಗೊಂಡಲ್ಲ ಎಂದು ತಿಳಿಸಿದರು.
ಮೂಡಬಿದಿರೆಯಲ್ಲಿ ಮೋಹನ್ ಆಳ್ವ ಮತ್ತು ಪಿಜಿಆರ್ ಸಿಂದ್ಯಾ ಅವರ ನೇತೃತ್ವದಲ್ಲಿ ಬಹಳ ಉತ್ತಮವಾದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೂರ್ವ ನಿಯೋಜಿಯ ಕಾರ್ಯಕ್ರಮಕ್ಕಾಗಿ ಅಧಿವೇಶನದ ಸಮಯದಲ್ಲಿ ಬಿಡುವು ಮಾಡಿಕೊಂಡು ಬಂದಿದ್ದೇನೆ. ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಎನ್.ಸಿ.ಸಿ ತರಹ ಮಕ್ಕಳಲ್ಲಿ ಶಿಸ್ತು ಮತ್ತು ದೇಶಪ್ರೇಮವನ್ನು ತರುವ ಸಂಸ್ಥೆಯಾಗಿದೆ.

ಕರ್ನಾಟಕ ರಾಜ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಉತ್ತಮವಾಗಿದ್ದು, ಸರ್ಕಾರ ಅದಕ್ಕೆ ಸದಾಕಾಲ ಸಹಕಾರ ನೀಡುತ್ತ ಬಂದಿದೆ. ಈ ಬಾರಿ ದೇಶ ವಿದೇಶದಿಂದ ಎಲ್ಲರೂ ಬಂದಿದ್ದಾರೆ. ಅಲ್ಲಿಗೆ ಹೋಗಿ ನನ್ನ ಬೆಂಬಲ ಮತ್ತು ಉತ್ತೇಜನ ಕೊಡುವುದು ನನ್ನ ಕರ್ತವ್ಯ. ಅದಕ್ಕಾಗಿ ಬಂದಿದ್ದೇನೆ ಎಂದು ವಿವರಿಸಿದರು.
ಸೂರತ್ಕಲ್ ಕೊಲೆ: ಪೊಲೀಸರಿಂದ ಕ್ರಮ
ಸೂರತ್ಕಲ್ನಲ್ಲಿ ಆ ಘಟನೆ (ಕೊಲೆ) ನಡೆಯಬಾರದಿತ್ತು. ಇದು ದುರದೃಷ್ಟಕರ ಘಟನೆ. ಈಗಾಗಲೇ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಪೊಲೀಸರ ತನಿಖೆ ಪ್ರಗತಿಯಲ್ಲಿದ್ದು ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ವಿಚಾರಣೆ ವೇಳೆ ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ?, ಹಿನ್ನೆಲೆ ಏನು? ಎಂಬ ಸತ್ಯಾಸತ್ಯತೆ ಹೊರ ಬರುತ್ತದೆ ಎಂದು ಭರವಸೆ ನೀಡಿದರು.

ದಕ್ಷಿಣ ಕನ್ನಡ ಜನತೆಗೆ ಸಿಎಂ ಶಾಂತಿ ಕಾಪಾಡಲು ಮನವಿ
ದಕ್ಷಿಣ ಕನ್ನಡ, ಉಡುಪಿಯ ಜನರು ಊಹಾಪೋಹಗಳಿಗೆ ಅವಕಾಶ ಕೊಡಬಾರದು. ಶಾಂತಿ- ಸುವ್ಯವಸ್ಥೆಗೆ ದಕ್ಕೆಯಾಗದಂತೆ ಯಾರು ಕೂಡ ನಡೆದುಕೊಳ್ಳಬಾರದು. ಶಾಂತಿಯುತವಾಗಿ ಪರಸ್ಪರ ವಿಶ್ವಾಸದಿಂದ ಹೋಗುವುದು ಅವಶ್ಯಕವಾಗಿದೆ. ಪೊಲೀಸರು ಯಾವುದೇ ಒತ್ತಾಯ, ಒತ್ತಡವಿಲ್ಲದೇ ಮುಕ್ತವಾಗಿ ತನಿಖೆ ಮಾಡುತ್ತಾರೆ. ಪ್ರಕರಣದಲ್ಲಿ ಯಾರೇ ಇರಲಿ, ಅವರ ಮೇಲೆ ನೂರಕ್ಕೆ ನೂರು ಕಾನೂನಾತ್ಮಕ ಕ್ರಮ ನಾವು ತೆಗೆದುಕೊಳ್ಳುತ್ತೇವೆ. ಸಮಾಜದಲ್ಲಿ ಹಿಂಸೆಗೆ ದಾರಿ ಮಾಡಿಕೊಡುವರನ್ನು ಹತ್ತಿಕ್ಕುವ ಅವಶ್ಯಕತೆ ಇದೆ. ಅದು ನಮ್ಮ ಕರ್ತವ್ಯ, ಸಮಾಜದ ಕರ್ತವ್ಯ. ಕ್ರಿಯೆಗೆ ಪ್ರತಿಕ್ರಿಯೆ ಅಂತ ಅಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ, ಮುಕ್ತವಾಗಿ ತನಿಖೆ ಮಾಡುತ್ತಾರೆ ಎಂದು ಹೇಳಿದರು.












Click it and Unblock the Notifications