ಹಲಗೂರಿನ ಜನ ಹೆಜ್ಜೇನು ದಾಳಿಗೆ ಹೆದರಿ ಶವ ಬಿಟ್ಟು ಓಡಿದರು
ಮಂಡ್ಯ, ಜನವರಿ,11: ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಶವ ಸಂಸ್ಕಾರಕ್ಕೆ ತೆರಳುತ್ತಿದ್ದ ಮಳವಳ್ಳಿಯ ಹಲಗೂರಿನ ಜನರು ಶವವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ಸುಮಾರು 30 ಮಂದಿ ಹೆಜ್ಜೇನು ಕಡಿತದಿಂದ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಹಲಗೂರಿನ ನಿವಾಸಿಯಾಗಿದ್ದ ಚಿಕ್ಕಲಿಂಗಮ್ಮ (85) ಎಂಬುವರು ಸಾವನ್ನಪ್ಪಿದ್ದರು. ಹೀಗಾಗಿ ಅವರ ಶವಸಂಸ್ಕಾರ ನಡೆಸಲೆಂದು ಸಂಬಂಧಿಕರು ಮುತ್ತತ್ತಿ ರಸ್ತೆಯ ಭೀಮಾ ನದಿ ತೀರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹೆಜ್ಜೇನುಗಳು ದಾಳಿ ಮಾಡಿವೆ. ಅವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಕ್ಷಣಕ್ಕೆ ಬೇರೆ ದಾರಿ ಕಾಣದ ಜನ ಶವವನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾದರು.[ಹೂವಿನ ತೋಟದಲ್ಲಿ ಕಳೆದುಹೋದ ಹೂವಿನಂಥ ಹುಡುಗಿ]
ಸತೀಶ್, ಕೆಂಪಮ್ಮ, ಕರೀಗೌಡ, ಸ್ವಾಮಿ, ಮಂಜು, ಉಮೇಶ್ ಸೇರಿದಂತೆ ಸುಮಾರು 30 ಮಂದಿ ಮೇಲೆ ದಾಳಿ ಮಾಡಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಳವಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಜ್ಜೇನುಗಳು ಮತ್ತೆ ಗೂಡು ಸೇರಿದ ಮೇಲೆ ಶವಸಂಸ್ಕಾರ ನೆರವೇರಿಸಲಾಗಿದೆ.[ಬಾಲಕಿ ಪ್ರಾಣ ತೆಗೆದ ಲಾಲ್ ಬಾಗ್ ನ ಜೇನ್ನೊಣ]
ಪರಿಹಾರ ನೀಡದ ಸೆಸ್ಕ್ ನ ಲಾರಿ ವಶ
ಮೈಸೂರು,ಜನವರಿ,11: ವಿದ್ಯುತ್ ಅವಘಡದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸೆಸ್ಕ್ (Sarawak Energy Supply Corporation)ಪರಿಹಾರ ನೀಡದೆ ಸತಾಯಿಸಿದಕ್ಕೆ ನ್ಯಾಯಾಲಯವು ಸೆಸ್ಕ್ ನ ಲಾರಿಯನ್ನು ಜಪ್ತಿ ಮಾಡಿದೆ. ಪರಿಹಾರ ಹಣವನ್ನು ತಕ್ಷಣವೇ ಕೊಡಬೇಕೆಂದು ತಾಕೀತು ಮಾಡಿದೆ.
ನವೆಂಬರ್ 2000ದಲ್ಲಿ ಮಳವಳ್ಳಿ ತಾಲೂಕಿನ ಕರಡಹಳ್ಳಿಯ ನಿವಾಸಿ ಸಿದ್ದಯ್ಯ ಎಂಬುವರು ತಮ್ಮ ಜಮೀನಿನ ಬಳಿ ತೆರಳಿದ್ದಾಗ ಸೆಸ್ಕ್ ನ ನಿರ್ಲಕ್ಷ್ಯದಿಂದ ವಿದ್ಯುತ್ ಹರಿದು ಸಾವನ್ನಪ್ಪಿದ್ದರು. ಮೃತ ಸಿದ್ದಯ್ಯನ ಪತ್ನಿ ಚಿಕ್ಕತಾಯಮ್ಮ ಅವರು ನನ್ನ ಪತಿ ಸಾವಿಗೆ ಸೆಸ್ಕ್ ನಿರ್ಲಕ್ಷತೆ ಕಾರಣವಾಗಿದ್ದು, ಪರಿಹಾರ ನೀಡುವಂತೆ ನ್ಯಾಯಾಲಯ ಮೊರೆ ಹೋಗಿದ್ದರು.[ವಿದ್ಯುತ್ ಬಗ್ಗೆ ವರ್ಷಾರಂಭದಲ್ಲಿ ಸರಕಾರದ ಮಹತ್ವದ ತೀರ್ಮಾನ ಏನು?]
15 ವರ್ಷಗಳ ಕಾಲ ಮಳವಳ್ಳಿ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2015ರ ಡಿಸೆಂಬರ್ 22 ರಂದು ಮೃತ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಧೀಶರು ಸೆಸ್ಕ್ ಗೆ ಆದೇಶಿಸಿದ್ದರು. ಆದರೆ, ಇಲಾಖೆಯು ಪರಿಹಾರ ನೀಡದ ಹಿನ್ನೆಲೆಯಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಕೆಂಗಬಾಲಯ್ಯ ಸೆಸ್ಕ್ ಇಲಾಖೆಯ ಲಾರಿಯನ್ನು ಜಪ್ತಿ ಮಾಡುವಂತೆ ಆದೇಶ ನೀಡಿದ್ದು, ಅದರಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.