ಬಾಕಿ ಬಿಲ್ ನೀಡುವಂತೆ ಸಿದ್ದು ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಬಿಎಂಪಿ ಗುತ್ತಿಗೆದಾರರ ಸಂಘ!
ಬೆಂಗಳೂರು: ಸರ್ಕಾರ ಮತ್ತು ಗುತ್ತಿಗೆದಾರರ ಸಂಘದ ಮಧ್ಯೆ ತಿಕ್ಕಾಟ ಬಲು ಜೋರಾಗಿದೆ. ಅತ್ತ ಬಿಜೆಪಿ ಸರ್ಕಾರ ಇದ್ದಾಗಲೂ ಹೀಗೆ ಗುತ್ತಿಗೆದಾರರ ಸಂಘ ಹಾಗೂ ರಾಜ್ಯ ಸರ್ಕಾರದ ನಡುವೆ ಫೈಟ್ ನಡೆದಿತ್ತು. ಇದೀಗ ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಗುತ್ತಿಗೆದಾರರು ನೇರವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದು, ಈ ಮೂಲಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಂದಹಾಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಬಿಬಿಎಂಪಿ ಗುತ್ತಿಗೆದಾರರ ಸಂಘ ಕಮಿಷನ್ ಆರೋಪ ಮಾಡಿತ್ತು. ಈ ಆರೋಪವು ರಾಜ್ಯ ರಾಜಕಾರಣದಲ್ಲಿ ಸಂಚಲವನ್ನೂ ಸೃಷ್ಟಿ ಮಾಡಿದೆ. ಈ ಬೆಳವಣಿಗೆ ಬೆನಲ್ಲೇ ಈಗ ಗುತ್ತಿಗೆದಾರರು, ಬಾಕಿ ಹಣ ಬಿಡುಗಡೆಗೆ ತಡೆ ಹಿಡಿದಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಜ್ಯಪಾಲರ ಮೊರೆ ಹೋಗಿದ್ದಾರೆ. ಇನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನ ಭೇಟಿ ಮಾಡಿದ ಗುತ್ತಿಗೆದಾರರ ಸಂಘದ ಸದಸ್ಯರು, ಸರ್ಕಾರ ತಡೆ ಹಿಡಿದಿರುವ ಬಾಕಿ ಬಿಲ್ ಬಗ್ಗೆ ದೂರು ನೀಡಿದ್ದಾರೆ.

ಗುತ್ತಿಗೆದಾರರ ಕೋಪಕ್ಕೆ ಬಗ್ಗುತ್ತಾ ಸರ್ಕಾರ?
ಇನ್ನು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ. ಈ ಮೂಲಕ ತಮ್ಮ ಬಾಕಿ ಬಿಲ್ ಬಿಡುಗಡೆ ಮಾಡಲು ಸರ್ಕಾರಕ್ಕೆ ಸೂಚನೆ ನೀಡುವಂತೆ ರಾಜ್ಯಪಾಲರ ಬಳಿಕ ಮನವಿಯನ್ನೂ ಮಾಡಿದ್ದಾರೆ. ಇನ್ನು ರಾಜ್ಯಪಾಲರಿಗೆ ಪತ್ರ ನೀಡಿದ ಬಳಿಕ ಬಿಬಿಎಂಪಿ ಗುತ್ತಿಗೆದಾರರ ಸಂಘ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದು, ಬಿಬಿಎಂಪಿಯ ಕಾಮಗಾರಿಗಳ ಬಿಲ್ ಬಿಡುಗಡೆಗೆ ಮನವಿ ಮಾಡಿದ್ದಾರೆ.
ಸಿಎಂ ಎದುರು ಗುತ್ತಿಗೆದಾರರ ಅಳಲು
ಇನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿರುವ ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು, ಬಿಬಿಎಂಪಿ ವ್ಯಾಪ್ತಿಯಲ್ಲಿ 28 ತಿಂಗಳ ಹಿಂದೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ ಚುನಾವಣೆ, ಹೊಸ ಸರ್ಕಾರ ರಚನೆ ಕಾರಣಕ್ಕಾಗಿ ಬಿಲ್ ಬಿಡುಗಡೆ ಆಗಿಲ್ಲ. 8 ತಿಂಗಳಿನಿಂದಲೂ ಗುತ್ತಿಗೆದಾರರ ಬಾಕಿ ಮೊತ್ತ ರಿಲೀಸ್ ಆಗುತ್ತಿಲ್ಲ. ಈ ಕಾರಣಕ್ಕೆ ಗುತ್ತಿಗೆದಾರರು ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಬಿಲ್ ಬಿಡುಗಡೆಗೆ ಗುತ್ತಿಗೆದಾರರ ಪರದಾಟ!
ಇನ್ನು ಬಿಬಿಎಂಪಿ ಗುತ್ತಿಗೆದಾರರ ಸಂಘ ನಿನ್ನೆ ಸುದ್ದಿಗೋಷ್ಠಿ ನಡೆಸಿ, 2023-24ನೇ ಸಾಲಿನಲ್ಲಿ ಬಿಬಿಎಂಪಿ ಬಳಿ ₹2 ಸಾವಿರ ಕೋಟಿ ತೆರಿಗೆ ಮೊತ್ತ ಹಾಗೂ ಸರ್ಕಾರ ನೀಡಿರುವ ₹675 ಕೋಟಿ ಅನುದಾನ ಇದ್ದರೂ ಬಿಲ್ ಬಿಡುಗಡೆ ಆಗಿಲ್ಲ. ಹೀಗಾಗಿ ಸಾಕಷ್ಟು ಸಂಕಷ್ಟ ಎದುರಾಗಿದೆ ಎಂದು ದೂರಿದ್ದರು. ಗುತ್ತಿಗೆದಾರರ ಕಾಮಗಾರಿಗಳಿಗೆ ಸಕಾಲದಲ್ಲಿ ಬಿಲ್ ಪಾವತಿಯಾಗದೇ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಬಿಲ್ ಪಾವತಿಸಲು ಒತ್ತಾಯಿಸಿದರೆ ತನಿಖೆ ಕೈಗೊಳ್ಳುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಸೋಮವಾರದಿಂದಲೇ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದರು. ಈಗ ಸಿಎಂ & ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಒಟ್ನಲ್ಲಿ ಗುತ್ತಿಗೆದಾರರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಕೇವಲ 3 ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ರಾಜ್ಯ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಆದ್ರೆ ಈ ಸಂದರ್ಭದಲ್ಲೇ ರಾಜ್ಯಪಾಲರಿಗೂ ದೂರು ನೀಡಿದ್ದಾರೆ. ಇದು ಹೇಗೆ ವರ್ಕೌಟ್ ಆಗುತ್ತೆ, ರಾಜ್ಯ ಸರ್ಕಾರ ಗುತ್ತಿಗೆದಾರರ ಒತ್ತಾಯಕ್ಕೆ ಮಣಿಯುತ್ತಾ? ಅಂತಾ ಕಾದು ನೋಡಬೇಕಿದೆ. ಅಕಸ್ಮಾತ್ ಬಾಕಿ ಬಿಲ್ ಬಿಡುಗಡೆ ಆಗದಿದ್ದರೆ ಹೋರಾಟದ ಎಚ್ಚರಿಕೆಯನ್ನೂ ನೀಡ್ತಿದ್ದಾರೆ ಗುತ್ತಿಗೆದಾರರು. ಪರಿಸ್ಥಿತಿ ಹೀಗಿರುವಾಗಲೇ ಇನ್ನೇನು ಬಿಬಿಎಂಪಿ ಎಲೆಕ್ಷನ್ ಕೂಡ ಹತ್ತಿರ ಬರುತ್ತಿದೆ. ಹೀಗಾಗಿ ಸರ್ಕಾರದ ನಿರ್ಧಾರದ ಮೇಲೆ ಎಲ್ಲಾ ಡಿಸೈಡ್ ಆಗಲಿದೆ.












Click it and Unblock the Notifications