Basavaraj Bommai: ಸಚಿವ ಡಿ. ಸುಧಾಕರ್ ರಾಜೀನಾಮೆ ನೀಡಲಿ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ಯಾಕೆ?
ಬೆಂಗಳೂರು, ಸೆಪ್ಟೆಂಬರ್ 12: ಯೋಜನೆ ಮತ್ತು ಸಾಂಖಿಕ ಇಲಾಖೆ ಸಚಿವ ಡಿ.ಸುಧಾಕರ್ ಅವರಿಂದ ಜಾತಿ ನಿಂದನೆ ಆಗಿದ್ದರೆ, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಚಿವ ಸುಧಾಕರ್ ಅವರು ತಮ್ಮ ವಿರುದ್ದ ಕೇಳಿ ಬಂದಿರುವ ಆರೋಪಗಳಿಗೆ ಕಾನೂನು ರೀತಿ ನಡೆದುಕೊಳ್ಳಬೇಕು. ಅದನ್ನು ಹಿಟ್ಟು ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯಬಾರದು. ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಸಾಮಾನ್ಯ ಜನರನ್ನು ಹೇಗೆ ಪೊಲಿಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಾರೋ, ಅದೇ ರೀತಿ ಸಚಿವರನ್ನು ವಿಚಾರಣೆ ನಡೆಸಬೇಕು. ಪೊಲಿಸರು ಒತ್ತಡಕ್ಕೆ ಮಣಿದರೆ, ರಾಜ್ಯದ ದಲಿತರು ಸರ್ಕಾರದ ವಿರುದ್ದ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ನಾಯಕರು ಭಾಷಣದಲ್ಲಿ ಮಾತ್ರ ದಲಿತರ ಪರ ಮಾತನಾಡುತ್ತಾರೆ. ಆದರೆ, ಅವರ ಸಚಿವರ ನಡವಳಿಕೆ ಸಂಪೂರ್ಣ ದಲಿತ ವಿರೋಧಿಯಾಗಿದೆ. ಗ್ಯಾರೆಂಟಿ ಯೋಜನೆಗಳಿಗೆ ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂ. ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಲಿತರು ಇವರನ್ನು ಕ್ಷಮಿಸುವುದಿಲ್ಲ ಎಂದರು.
ಈ ಅನಿಷ್ಟ ಸರ್ಕಾರದ ವಿರುದ್ಧ ಹೋರಾಟ ಅವಶ್ಯಕತೆ ಇದೆ. ಹಾಗಾಗಿ ಜೆಡಿಎಸ್ ಜೊತೆ ಮೈತ್ರಿ ಅನಿವಾರ್ಯ. ಈಗಾಗಲೇ ಎರಡೂ ವಿರೋಧ ಪಕ್ಷಗಳು ಒಂದಾಗಬೇಕು ಎಂಬ ನಿರೀಕ್ಷೆ ಇದೆ. ಮುಂದಿನ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಬೇಕಿದೆ. ಎರಡೂ ಪಕ್ಷದ ವರಿಷ್ಠರು ಸೇರಿ ತೀರ್ಮಾನ ಮಾಡಲಿದ್ದಾರೆ ಎಂದರು
ಕಾಂಗ್ರೆಸ್ ಪಕ್ಷ ಟೀಕೆ ಎರಡೂ ಪಕ್ಷಗಳು ಅಸಹಾಯಕವಾಗಿವೆ ಎಂದು ಕಾಂಗ್ರೆಸ್ ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗ ಐಎನ್ ಡಿಐಎ ಒಕ್ಕೂಟ ಒಗ್ಗಟ್ಟಾಗಿದ್ದಾರೆ. ಒಬ್ಬರಿಗೊಬ್ಬರು ಆಗದ ಮಮತಾ ಬ್ಯಾನರ್ಜಿ, ಸಿಪಿಐ, ಸಿಪಿಎಂ, ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಎಲ್ಲರೂ ಒಟ್ಟಾಗಿದ್ದಾರೆ. ಎಲ್ಲ ವಿರೋಧ ಪಕ್ಷಗಳು ಒಟ್ಟಾಗಿವೆ, ಹಾಗಾದರೆ ಅವು ಅಸಹಾಯಕರಾ? ರಾಜಕಾರಣದ ಇತಿಹಾಸದಲ್ಲಿ ಅನೇಕ ಬದಲಾವಣೆ ಆಗಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಅಡ್ವಾಣಿ ಅವರನ್ನು ಭೇಟಿ ಆಗಿದ್ದರು ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಸಿದ್ದರಾಮಯ್ಯ ನವರೇ ಉತ್ತರ ನೀಡಿದ್ದಾರೆ. ನಾಯಕರ ಭೇಟಿ ಮಾಡಿದರೆ ಸಿದ್ಧಾಂತ ಬದಲಾಗುವುದಿ ಹೇಳಿದ್ದಾರೆ. ಅದರ ಅರ್ಥ ಏನು ಎಂದು ಪ್ರಶ್ನಿಸಿದರು
ಇದೇ ವೇಳೆ, ಇಂದಿನಿಂದ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುವುದಿಲ್ಲ ಅಂತ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ. ಸರ್ಕಾರ ತನ್ನ ಮಾತಿಗೆಎಷ್ಟು ಗಟ್ಟಿಯಾಗಿ ನಿಲ್ಲುತ್ತಾರೆ ಎಂದು ನೋಡೊಣ ಎಂದರು.
ರಾಜ್ಯ ಸರ್ಕಾರ ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಳಿ ಸರ್ವ ಪಕ್ದ ನಿಯೋಗ ಕರೆದುಕೊಂಡ ಹೋಗುವ ಬದಲು ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ರಾಜ್ಯದ ವಸ್ತುಸ್ಥಿತಿ ಮನವರಿಕೆ ಮಾಡಿ, ಅವರ ಮನವೊಲಿಸಬೇಕು. ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಇರುವುದರಿಂದ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಬರುವುದಿಲ್ಲ ಎಂದು ಹೇಳಿದರು.
ತಮಿಳು ನಾಡು ಅಗತ್ಯಕ್ಕಿಂತ ಹೆಚ್ಚು ನೀರನ್ನು ಕುರುವೈ ಬೆಳೆಗೆ ಅಕ್ರಮವಾಗಿ ಬಳಸಿಕೊಂಡಿದೆ ಎಂದು ರಾಜ್ಯ ಸರ್ಕಾರ ಸಿಡಬ್ಲುಎಂಎ ಸಭೆಯಲ್ಲಿ ಬಲವಾಗಿ ಹೇಳುತ್ತಿಲ್ಲ. ಸೆ. 12 ರ ನಂತರ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ತನ್ನ ನಿಲುವಿಗೆ ಎಷ್ಟು ಬದ್ದವಾಗಿರುತ್ತದೆ ಎಂದು ಕಾದು ನೋಡೋಣ ಎಂದರು.












Click it and Unblock the Notifications