ಆತ್ಮನಿರ್ಭರ, ನಶಾ ಮುಕ್ತ ಭಾರತಕ್ಕೆ ಸಂಕಲ್ಪ: ಸ್ವದೇಶಿ ವಸ್ತುಗಳ ಬಳಕೆಗೆ ಮಾಜಿ ಸಿಎಂ ಕರೆ
ಹಾವೇರಿ, ಅಕ್ಟೋಬರ್ 11: ಭಾರತವು 2047ಕ್ಕೆ ವಿಶ್ವದ ನಂಬರ್ ಒನ್ ದೇಶ ಆಗಬೇಕೆಂದರೆ ವಿದೇಶಿ ವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ, ಸ್ವದೇಶಿ ವಸ್ತುಗಳನ್ನು ಬಳಸಬೇಕು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ತದಲ್ಲಿ ಭವ್ಯ ಭಾರತ, ಆತ್ಮನಿರ್ಭರ, ನಶಾ ಮುಕ್ತ ಭಾರತ ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಶನಿವಾರ ಹಾವೇರಿಯಲ್ಲಿ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಜನ್ಮದಿನೋತ್ಸವದ ಅಂಗವಾಗಿ ನಶೆ ಮುಕ್ತ ಭಾರತದ ಸಂಕಲ್ಪದೊಂದಿಗೆ ಆತ್ಮ ನಿರ್ಭರ ಭಾರತಕ್ಕಾಗಿ ಹಾವೇರಿ ನಮೋ ಯುವ ಓಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯುವಕರಲ್ಲಿ ದೇಶ ಪ್ರೇಮ ಮೂಡಿಸಬೇಕು. ಜಾಗೃತಿ ಮೂಡಿಸಬೇಕು. ಯುವಕರು ತಮ್ಮ ಬದುಕನ್ನು ಅತ್ಯಂತ ಯಶಸ್ವಿಯಾಗಿ ಅತ್ಯಂತ ತತ್ವನಿಷ್ಠೆಯಿಂದ ಬದುಕಬೇಕೆನ್ನುವುದು ಪ್ರಧಾನ ಮಂತ್ರಿಯವರ ಬಯಕೆ. ಅದಕ್ಕಾಗಿ ಎಲ್ಲ ಕಾರ್ಯಕ್ರಮಗಳಲ್ಲಿ ಯುವಕರನ್ನು ಜೋಡಿಸಿಕೊಂಡಿದ್ದಾರೆ. ಉದಾಹರಣೆಗೆ ಸ್ಟಾರ್ಟ್ ಆಪ್ ಅಂತ ಮಾಡಿದ್ದಾರೆ. ಅದರಲ್ಲಿ ಎಲ್ಲ ಯುವಕರಿಗೆ ಅವಕಾಶ ಕಲ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಸಾವಿರಾರು ಅದಾನಿ, ಅಂಬಾನಿಗಳು ಆಗುತ್ತಾರೆ. ಯಾವ ಸರ್ಕಾರಗಳು ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಪ್ರಧಾನಿ ಮೋದಿ ಯುವಕರ ಭಾವನೆ ಅರ್ಥ ಮಾಡಿಕೊಂಡು ಖೇಲೊ ಇಂಡಿಯಾ, ಫಿಟ್ ಇಂಡಿಯಾ ಅಂದರು. ಒಲಿಂಪಿಕ್ ಬಂದಾಗ ಜೀತೋ ಇಂಡಿಯಾ ಅಂತ ಹೇಳಿದರು. ಮೋದಿಯವರ ಕಾಲದಲ್ಲಿ ಭಾರತಕ್ಕೆ ಅತಿ ಹೆಚ್ಚು ಒಲಿಂಪಿಕ್ಸ್ ಮೆಡಲ್ ಸಿಕ್ಕಿದೆ. ಮೋದಿ ಎಂದರೆ ಪ್ರೇರಣಾದಾಯಕ ಶಕ್ತಿ ಎಂದರು.
ಕೆಲವರು ದೇಶವನ್ನು ಒಡೆಯುವ ಬಗ್ಗೆ ಮಾತನಾಡುತ್ತಾರೆ. ಹೊರ ದೇಶಕ್ಕೆ ಹೋದಾಗ ನಮ್ಮ ದೇಶದ ಪ್ರಜಾಪ್ರಭುತ್ವದ ಬಗ್ಗೆ ತುಚ್ಚವಾಗಿ ಮಾತನಾಡುತ್ತಾರೆ. ಆದ್ದರಿಂದ ನಮ್ಮ ಯುವಕರು ಜಾಗೃತರಾಗಿರಬೇಕು. ಶಿಕ್ಷಣ, ಉದ್ಯೋಗ ಎಲ್ಲದಕ್ಕೂ ಅವಕಾಶ ಇರುವ ದೇಶ ಭಾರತ, ದೇಶ ಉಳಿದರೆ ಮಾತ್ರ ನಾವು. ಪ್ರಧಾನಮಂತ್ರಿಯವರನ್ನು ನಿಮ್ಮ ಧರ್ಮ ಯಾವುದು ಎಂದು ಕೇಳಿದಾಗ ಸಂವಿಧಾನವೇ ನಮ್ಮ ಧರ್ಮ ಎಂದು ಹೇಳಿದರು. 25 ಕೋಟಿ ಜನರನ್ನು ಬಡತನದಿಂದ ಮುಕ್ತ ಮಾಡಿದ್ದಾರೆ. ಒಂದು ಕಾಲದಲ್ಲಿ ಗರೀಬಿ ಹಠಾವೊ ಅಂತ ರಾಜಕೀಯ ಪಕ್ಷದವರು ಹೇಳಿದರು. ಗರೀಬಿ ಹಠಾವೋ ಆಗಲಿಲ್ಲ. ಆ ನಾಯಕರೆ ಹಠಾವೊ ಆಗಿದ್ದಾರೆ. 25 ಕೋಟಿ ಜನರು ಬಡತನದಿಂದ ಮುಕ್ತವಾಗಿದ್ದು ವಿಶ್ವ ದಾಖಲೆ ಎಂದು ಹೇಳಿದರು.

ಪ್ರಧಾನಿ, ಕೃಷಿ ಸಚಿವರಿಗೆ ಅಭಿನಂದನೆ
ಪ್ರಧಾನಿಯವರು ಧನ್ ಧಾನ್ಯ ಯೋಜನೆ ಮೂಲಕ ರೈತರ ಆದಾಯ ದ್ವಿಗುಣಗೊಳಿಸಲು ಸಮಗ್ರ ಕೃಷಿ ಅಲ್ಪಾವಧಿ ಸಾಲ, ದೀರ್ಘಾವಧಿ ಸಾಲ ನೀಡುವ ಯೋಜನೆಯಲ್ಲಿ ಹಾವೇರಿ ಗದಗ ಜಿಲ್ಲೆಯನ್ನು ಸೇರಿಸಿಕೊಂಡಿದ್ದಾರೆ. ಅದಕ್ಕಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಭಾರತ ವಿಶ್ವದ ನಂಬರ್ ದೇಶ ಒನ್ ಆಗಬೇಕೆಂದರೆ ವಿದೇಶ ವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು. ನಾವು ಉತ್ಪಾದನೆ ಮಾಡವು ವಸ್ತುಗಳನ್ನು ನಾವೇ ಖರೀದಿಸಬೇಕು. ಸ್ವದೇಶಿ ವಸ್ತುಗಳನ್ನು ನಾವೇ ಉಪಯೋಗಿಸಬೇಕು. ಭಾರತೀಯರಿಂದ ಭಾರತೀಯರಿಗೋಸ್ಕರ ಉತ್ಪಾದನೆಯಾದ ವಸ್ತುಗಳನ್ನು ಬಳಸಬೇಕು. ವಿದೇಶಿ ವ್ಯಾಮೋಹ ಕಡಿಮೆ ಮಾಡಬೇಕು. ಫೋನ್ ನಮ್ಮ ದೇಶದಲ್ಲಿಯೇ ಉತ್ಪಾದನೆಯಾಗುತ್ತದೆ. ಅದು ವಿದೇಶಕ್ಕೆ ಹೋಗಿ ಅಲ್ಲಿಯ ಲೇಬಲ್ ಹಚ್ಚಿಕೊಂಡು ಬರುತ್ತದೆ. ಐಫೋನ್ ಶೇ 25 ರಷ್ಟು ನಮ್ಮ ಕರ್ನಾಟಕ ತಮಿಳುನಾಡಿನಲ್ಲಿ ತಯಾರಾಗುತ್ತವೆ. ಅಷ್ಟು ತಂತಜ್ಞಾನ ಬೆಳೆದಿದೆ ಎಂದು ತಿಳಿಸಿದರು.
ನಶಾ ಮುಕ್ತ ಭಾರತ: ಡ್ರಗ್ಸ್ ವಿರುದ್ಧ ಸಮರ
ನಶಾ ಮುಕ್ತ ಭಾರತ ಪ್ರಧಾನಿ ನರೇಂದ್ರಯವರ ಚಿಂತನೆ ಅವರು ಹೋಗುತ್ತಿರುವ ದಾರಿ ದಿಕ್ಕೂಚಿಯಾಗಿದೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭವ್ಯ ಭಾರತ ಆತ್ಮನಿರ್ಭರ, ನಶಾ ಮುಕ್ತ ಭಾರತ ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ, ನಾನು ಗೃಹ ಸಚಿವನಾಗಿದ್ದಾಗ ಡಗ್ ವಿರುದ್ಧ ಸಮರ ಸಾರಿದ್ದು ಅತಿ ಹೆಚ್ಚು ವಿದೇಶಿ ಡಗ್ಸ್ ಪತ್ತೆ ಹೆಚ್ಚಿ ಸುಟ್ಟು ಹಾಕಿದ್ದು ನಮ್ಮ ಬಿಜೆಪಿ ಅವಧಿಯಲ್ಲಿ ಯಾವುದೇ ಸಂಸ್ಥೆಯಲ್ಲಿ ಡ್ರಗ್ ಮಾರಾಟವಾದರೂ ಯುವಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಬೇಕು. ಯಾವ ಸಂಸ್ಥೆಯಲ್ಲಿ ಮಾರಾಟವಾಗುತ್ತದೆ ಆ ಆಡಳಿತ ಮಂಡಳಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ನಶೆ ಯುವಕರ ಬದುಕನ್ನು ನರಕ ಮಾಡುತ್ತದೆ. ಪ್ರತಿನಿತ್ಯ ನಾವು ವಿಷ ಕುಡಿದಂತೆ ಡ್ರಗ್ಸ್ ಸೇವನೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.












Click it and Unblock the Notifications