Bangalore-Mysore Expressway; ಯೋಜನೆ ತಂದ್ದಿದ್ದು ಯಾರು?
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಯೋಜನೆಯನ್ನು ತಂದಿದ್ದು ಯಾರು? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಸಂಸದ ಪ್ರತಾಪ್ ಸಿಂಹ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು, ಫೆಬ್ರವರಿ 07; ಬಹು ನಿರೀಕ್ಷಿತ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇ ಮಾರ್ಚ್ನಲ್ಲಿ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ. ಬೈಪಾಸ್ ರಸ್ತೆ ಈಗಾಗಲೇ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಈ ರಸ್ತೆಗೆ ಯಾರ ಹೆಸರು ಇಡಬೇಕು ಎಂಬ ಚರ್ಚೆ ಒಂದು ಕಡೆ ಸಾಗಿದೆ.
ಬೆಂಗಳೂರು-ಮೈಸೂರು ನಗರವನ್ನು ಸಂಪರ್ಕಿಸುವ ಈ ಪ್ರಮುಖ ರಸ್ತೆ ಯೋಜನೆಯನ್ನು ತಂದಿದ್ದು ಯಾರು?. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಯೋಜನೆ ಘೋಷಣೆ ಆಗಿದ್ದು ಯಾವಾಗ, ಯಾರ ಕಾಲದಲ್ಲಿ ಆರಂಭವಾಗಿದ್ದು ಹೀಗೆ ಅನೇಕ ಪ್ರಶ್ನೆಗಳಿವೆ.
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಆಗಾಗ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಯೋಜನೆ ತಂದಿದ್ದು ಯಾರು? ಎಂದು ಜಟಾಪಟಿ ನಡೆಯುತ್ತದೆ. ಈಗ ಇಂತಹ ಮತ್ತೊಂದು ಜಟಾಪಟಿ ಆರಂಭವಾಗಿದ್ದು, ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಾ. ಎಚ್. ಸಿ. ಮಹದೇವಪ್ಪಗೆ ಸಂಸದ ಪ್ರತಾಪ್ ಸಿಂಹ ಉತ್ತರ ನೀಡಿದ್ದಾರೆ.
ಬೆಂಗಳೂರು-ಮೈಸೂರು ನಡುವಿನ 119 ಕಿ. ಮೀ. ಉದ್ದದ ಯೋಜನೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಮಾರ್ಚ್ನಲ್ಲಿ ಯೋಜನೆ ಲೋಕಾರ್ಪಣೆಗೊಳ್ಳಲಿದೆ. ಇನ್ನೂ ರಸ್ತೆಗೆ ಯಾರ ಹೆಸರು ಇಡಬೇಕು ಎಂಬ ಬಗ್ಗೆ ಅಂತಿಮ ತೀರ್ಮಾನವನ್ನು ಸರ್ಕಾರ ಕೈಗೊಂಡಿಲ್ಲ.

ಡಾ. ಎಚ್. ಸಿ. ಮಹದೇವಪ್ಪ ಟ್ವೀಟ್
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಯೋಜನೆ ಬಗ್ಗೆ ಲೋಕೋಪಯೋಗಿ ಇಲಾಖೆಯ ಮಾಜಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಟ್ವೀಟ್ ಮಾಡಿದ್ದಾರೆ.
'ಬೆಂಗಳೂರು-ಮೈಸೂರು- ಬಂಟ್ವಾಳ ರಸ್ತೆ ನಿರ್ಮಾಣಕ್ಕೆ ಕಾರಣಕರ್ತರು
1) ಆಸ್ಕರ್ ಫರ್ನಾಂಡೀಸ್
2) ಸಿದ್ದರಾಮಯ್ಯ
3) ಡಾ ಹೆಚ್ ಸಿ ಮಹದೇವಪ್ಪ
4) ನಿತಿನ್ ಗಡ್ಕರಿ. ಈ ಕೋಮು ಭಕ್ತರು ಬಾಯಿಗೆ ಬಂದಂತೆ ಮಾತಾಡಿದಾಕ್ಷಣ ಸತ್ಯವು ಎಂದಿಗೂ ಬದಲಾಗುವುದಿಲ್ಲ. ಈ ರಸ್ತೆಯನ್ನು ಮಂಜೂರು ಮಾಡಿಸಿ ಅನುದಾನ ಬಿಡುಗಡೆಯಾದಾಗ ಆ ಪ್ರತಾಪ್ ಸಿಂಹ
ಎಂಪಿಯೇ ಆಗಿರಲಿಲ್ಲ!' ಎಂದು ಹೇಳಿದ್ದಾರೆ.

ಸಂಸದ ಪ್ರತಾಪ್ ಸಿಂಹ ಟ್ವೀಟ್
ಬಿಜೆಪಿ ಸಂಸದ ಪ್ರತಾಪ್ ಸಿಂಹ ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯೋಜನೆಗೆ ಸಂಬಂಧಿಸಿದ ಕಡತಗಳ ಪ್ರತಿಯನ್ನು ಸಹ ಟ್ವೀಟ್ನಲ್ಲಿ ಹಾಕಿ ಉತ್ತರ ಕೊಟ್ಟಿದ್ದಾರೆ. 'ಏನಂದ್ರೀ ಎಚ್. ಸಿ. ಮಹದೇವಪ್ಪ ನವರೇ ಈ ರಸ್ತೆಯನ್ನು ಮಂಜೂರು ಮಾಡಿಸಿ ಅನುದಾನ ಬಿಡುಗಡೆಯಾದಾಗ ಆ ಪ್ರತಾಪ್ ಸಿಂಹ MPಯೇ ಆಗಿರಲಿಲ್ಲ!, ಹೌದಾ?! ಈ ಯೋಜನೆಯನ್ನು ಮೋದೀಜಿ ಮಹಾರಾಜ ಗ್ರೌಂಡ್ ನಲ್ಲಿ ಘೋಷಣೆ ಮಾಡಿದ್ದು 2018, Feb19 ರಂದು, ಪ್ರಧಾನಿ ಅಧ್ಯಕ್ಷತೆಯ CCEA ಮಂಜೂರು ಕೊಟ್ಟಿದ್ದು Feb 13 ಮತ್ತು 20ರಂದು, ನಾನು ಎಂಪಿ ಆಗಿದ್ದು 2014 ಮೇನಲ್ಲಿ!' ಎಂದು ಹೇಳಿದ್ದಾರೆ.

ಎಕ್ಸ್ಪ್ರೆಸ್ ವೇಗೆ ಯಾರ ಹೆಸರು ಇಡಬೇಕು
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿ ಕಡಿಮೆ ಮಾಡಲಿದೆ. ಈಗಾಗಲೇ ಈ ರಸ್ತೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಸಹ ಚಿತ್ರಗಳನ್ನು ಟ್ವೀಟ್ ಮಾಡಿದ್ದರು.
ಈ ರಸ್ತೆ ಬೆಂಗಳೂರು, ರಾಮನಗರ, ಮಂಡ್ಯ ಹಾಗೂ ಮೈಸೂರು ನಡುವೆ ಸಾಗುತ್ತದೆ. ಈ ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯವೇ ಪ್ರಾಬಲ್ಯ ಸಾಧಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ತಂತ್ರ ರೂಪಿಸಿರುವ ಬಿಜೆಪಿ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಗೆ ನಾಮಕರಣ ಮಾಡುವ ಸಾಧ್ಯತೆ ಇದೆ ಎಂಬ ಚರ್ಚೆ ನಡೆಯುತ್ತಿದೆ.

'ಕಾವೇರಿ' ಎಂದು ಹೆಸರು ಇಡಲು ಒತ್ತಾಯ
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಗೆ ಮೈಸೂರು, ಮಂಡ್ಯ ಪಾಲಿನ ಜೀವನದಿ ಕಾವೇರಿ ಹೆಸರು ಇಡಬೇಕು ಎಂಬ ಒತ್ತಾಯವಿದೆ. ಸಂಸದ ಪ್ರತಾಪ್ ಸಿಂಹ ಈ ಕುರಿತು ನಿತಿನ್ ಗಡ್ಕರಿಗೆ ಪತ್ರವನ್ನು ಬರೆದಿದ್ದಾರೆ. ಆದರೆ ಸರ್ಕಾರ ಇನ್ನು ಅಂತಿಮ ತೀರ್ಮಾನ ಕೈಗೊಂಡಿಲ್ಲ. ಉದ್ಘಾಟನೆ ವೇಳೆಗೆ ಹೆಸರು ಅಂತಿಮಗೊಳಿಸುವ ನಿರೀಕ್ಷೆ ಇದೆ.
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಿ ಎಂದು ಪತ್ರ ಬರೆದಿದ್ದಾರೆ. ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಹೆಸರು ಇಡಿ ಎಂದು ಒತ್ತಾಯಿಸಿದ್ದಾರೆ.












Click it and Unblock the Notifications