ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಗೆ ಜಾಮೀನು ನಿರಾಕರಣೆ
ಬೆಂಗಳೂರು, ಫೆ 21: ಉದ್ಯಮಿ ಮೇಲೆ ಹಲ್ಲೆ ಮಾಡಿ ಜೈಲು ಸೇರಿರುವ ಬೆಂಗಳೂರು ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ನಗರದ ಸಿವಿಲ್ ಕೋರ್ಟ್ ಜಾಮೀನು ನಿರಾಕರಿಸಿದೆ.
ಎರಡು ದಿನಗಳ ಕಾಲ ಕಬ್ಬನ್ ಪಾರ್ಕ್ ಪೊಲೀಸರ ವಶದಲ್ಲಿದ್ದ ನಲಪಾಡ್ ಜಾಮೀನು ಅರ್ಜಿ ಸಲ್ಲಿಸಿದ್ದರು. ನಗರದ 63ನೇ ಸಿಟಿ ಸಿವಿಲ್ ಕೋರ್ಟ್, ಜಾಮೀನು ಅರ್ಜಿಯನ್ನು ತಿರಸ್ಕರಿ ಮಾರ್ಚ್ 7 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ಜಾಮೀನು ನಿರಾಕರಿಸಿದ್ದಕ್ಕೆ ನಾಳೆ (ಫೆ 22) ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ನಲಪಾಡ್ ಮತ್ತು ತಂಡವನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಪೊಲೀಸ್ ವ್ಯಾನಿನಲ್ಲಿ ನಲಪಾಡ್ ಕಣ್ಣೀರಿಟ್ಟ ಘಟನೆ ನಡೆದಿದೆ.
ತಂದೆ ಪ್ರತಿನಿಧಿಸುವ ಶಾಂತಿನಗರ ಕ್ಷೇತ್ರದಲ್ಲಿ ತನ್ನ ಗುಂಪುಗಳೊಂದಿಗೆ ಸ್ವೇಚ್ಛಾಚಾರವಾಗಿ ಮೆರೆಯುತ್ತಿದ್ದ ನಲಪಾಡ್, ಶಾಂತಿನಗರ ಮಾರ್ಗವಾಗಿಯೇ ಪರಪ್ಪನ ಅಗ್ರಹಾರ ಜೈಲು ಸೇರಿರುವುದು ವಿಪರ್ಯಾಸ.
ಕಬ್ಬನ್ ಪಾರ್ಕ್ ಪೊಲೀಸರ ಕಸ್ಟಡಿಯಲ್ಲಿದ್ದ ನಲಪಾಡ್ ಮತ್ತು ಅವನ 7 ಮಂದಿ ಗುಂಪುಗಳನ್ನು, ಪೊಲೀಸರು ಸಂಜೆ 4ಗಂಟೆ ಸುಮಾರಿಗೆ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಿ, ಕೋರ್ಟಿಗೆ ಹಾಜರು ಪಡಿಸಿದ್ದರು.
ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೇಸ್ ದಾಖಲಾಗಿರುವ ಹಿನ್ನೆಲೆಯಲ್ಲಿ ನ್ಯಾ. ಪರಮೇಶ್ವರ್, ನಲಪಾಡ್ ಮತ್ತು ತಂಡಕ್ಕೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದಾರೆ.