ಬಾದಾಮಿ : ಮುಂದುವರೆದ ತಿಮ್ಮಣ್ಣ ರಕ್ಷಣಾ ಕಾರ್ಯ
ಬಾಗಲಕೋಟೆ, ಆ.6 : ಬಾದಾಮಿ ತಾಲೂಕಿನ ಸೂಳಿಕೇರಿಯಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಆರು ವರ್ಷದ ಬಾಲಕ ತಿಮ್ಮಣ್ಣ ಹಟ್ಟಿಯನ್ನು ರಕ್ಷಿಸುವ ಕಾರ್ಯಾಚರಣೆ ಅವ್ಯಾಹತವಾಗಿ ಸಾಗಿದೆ. ರೋಬೋ ಮತ್ತು ಜೆಸಿಬಿ ಮೂಲಕ ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ. ಈ ಹರಸಾಹಸಕ್ಕೆ ಫಲ ಸಿಗಲಿ ಎನ್ನುವ ಹಾರೈಕೆ ನಮ್ಮದು. ಮಗು ಜೀವ ಉಳಿಸುವ ಪ್ರಯತ್ನದ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ.
ಸಮಯ 4.30 : ತಿಮ್ಮಣ್ಣ ಮೇಲೆ ಬಿದ್ದಿರುವ ಮಣ್ಣು ತೆಗೆಯಲು ಗುಳೇದಗುಡ್ಡ ಪುರಸಭೆಯ ಜೆಸಿ ಯಂತ್ರವನ್ನು ತರಲು ಚಿಂತನೆ ನಡೆಸಲಾಗುತ್ತಿದೆ.
ಸಮಯ 3.30 : ಜೆ.ಕೆ.ಸಿಮೆಂಟ್ ಕಂಪನಿಯ ವಿಶೇಷ ಯಂತ್ರ ತರುವ ಪ್ರಸ್ತಾಪ ಕೈ ಬಿಟ್ಟ ಜಿಲ್ಲಾಡಳಿತ. ಈ ಯಂತ್ರದ ಮೂಲಕ ತಿಮ್ಮಣ್ಣ ಮೇಲೆ ಬಿದ್ದ ಮಣ್ಣನ್ನು ತೆಗೆಯಲು ನಿರ್ಧರಿಸಲಾಗಿತ್ತು.
ಸಮಯ 2.30 : ಬಾಲಕ ತಿಮ್ಮಣ್ಣನ ರಕ್ಷಣಾ ಕಾರ್ಯ ಮುಂದುವರಿಯುತ್ತಿದೆ. ಯಾವುದೇ ಕಾರಣಕ್ಕೂ ಕಾರ್ಯಾಚರಣೆ ಸ್ಥಗಿತಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದ್ದಾರೆ.
ಸಮಯ 2 ಗಂಟೆ : "ಈಗಾಗಲೇ 5 ಎಕರೆ ಹೊಲ ನಾಶವಾಗಿದೆ. 15 ಲಕ್ಷ ರೂ. ಸಾಲ ಮಾಡಿದ್ದೇನೆ. ಈಗ ತೆರೆದಿರುವ ಮಣ್ಣನ್ನು ತುಂಬಿಸಲು ಪೂರ್ತಿ ಹೊಲವನ್ನು ಮಾರಾಟ ಮಾಡಿದರೂ ಸಾಧ್ಯವಾಗಲ್ಲ. ಪುನಃ ಮಣ್ಣು ಹಾಕಿಕೊಡುವುದಾದರೆ ಕಾರ್ಯಾಚರಣೆ ಮುಂದುವರೆಸಲಿ" ಎಂದು ಹನುಮಂತ ಹಟ್ಟಿ ಹೇಳಿದ್ದಾರೆ.

ಸಮಯ 1.20 : ತಿಮ್ಮಣ್ಣನ ರಕ್ಷಣಾ ಕಾರ್ಯಕ್ಕೆ ಮಳೆ ಅಡ್ಡಿಯಾಗಿದೆ. ಸೂಳಿಕೇರಿಯಲ್ಲಿ ಮಳೆ ಸುರಿಯುತ್ತಿದ್ದು, ಸುರಂಗ ತೊಡುವ ಕಾರ್ಯ ಸ್ಥಗಿತಗೊಂಡಿದೆ. ಕೊಳವೆ ಬಾವಿ ಇರುವ ಪ್ರದೇಶದಲ್ಲಿ ತಾತ್ಕಲಿಕ ಶೆಡ್ ನಿರ್ಮಿಸಿ ಮಳೆ ನೀರು ಬಾವಿಯೊಳಗೆ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ.
ಸಮಯ 12.30 : "ನನ್ನ ಮಗ ಬದುಕಿಲ್ಲ, ನನ್ನ ಹೊಲವನ್ನು ಮೊದಲಿನಂತೆ ಮಾಡಿಕೊಡಿ ಸಾಕು, ಮಗನನ್ನು ಹೊರತೆಗೆಯುವುದು ಬೇಡ" ಎಂದು ತಿಮ್ಮಣ್ಣ ಹಟ್ಟಿ ತಂದೆ ಹನುಮಂತ ಹಟ್ಟಿ ಜಿಲ್ಲಾಡಳಿತಕ್ಕೆ ಆಸ್ಪತ್ರೆಯಿಂದಲೇ ಮನವಿ ಮಾಡಿದ್ದಾರೆ.
ಸಮಯ 11.45 : ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆ ಮುಕ್ತಾಯಗೊಂಡಿದೆ. ತಿಮ್ಮಣ್ಣನ ಮೇಲೆ ಬಿದ್ದಿರುವ ತೇವಾಂಶಯುಕ್ತ ಮಣ್ಣನ್ನು ಜೆ.ಕೆ.ಸಿ ಸಿಮೆಂಟ್ ಕಂಪನಿಯ ವಿಶೇಷ ಯಂತ್ರ ಬಳಸಿ ತೆಗೆಯಲು ನಿರ್ಧರಿಸಲಾಗಿದೆ. ಈ ಬಗ್ಗೆ ಕಂಪನಿ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ಸಮಯ 11.30 : ತಿಮ್ಮಣ್ಣನ ರಕ್ಷಣಾ ಕಾರ್ಯವನ್ನು ಹೇಗೆ ಮಾಡಬೇಕು? ಎಂಬ ಕುರಿತು ಎನ್ ಡಿಆರ್ ಎಫ್ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಮಂಗಳವಾರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ತಿಮ್ಮಣ್ಣ ತಂದೆ ಹನುಮಂತ ಹಟ್ಟಿ ಇಂದು ಚೇತರಿಸಿಕೊಂಡಿದ್ದಾರೆ.
ಸಮಯ 11 ಗಂಟೆ : ಬಾಲಕನ ರಕ್ಷಣಾ ಕಾರ್ಯ ಮುಗಿದ ಬಳಿಕ ತೆಗೆದ ಗುಂಡಿಯನ್ನು ಮುಚ್ಚಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ. ರೈತನಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಮಯ 10.30 : ತಿಮ್ಮಣ್ಣನ ಮೇಲೆ ಬಿದ್ದಿರುವ ಮಣ್ಣನ್ನು ತೆಗೆಯುವ ಕಾರ್ಯಾಚರಣೆಯನ್ನು ರಕ್ಷಣಾ ಪಡೆಗಳು ಆರಂಭಿಸಿವೆ. ವ್ಯಾಕ್ಯೂಮ್ ಕ್ಲೀನರ್ ಮೂಲಕ ಮಣ್ಣು ತೆಗೆಯಲು ಸಿದ್ಧತೆ ನಡೆಸಲಾಗುತ್ತಿದೆ.
ಸಮಯ 9.30 : ಸುರಂಗ ತೋಡಿದ ನಂತರ ದೊರೆಯುತ್ತಿರುವ ಮಣ್ಣನ್ನು ವಿಲೇವಾರಿ ಮಾಡುವುದು ಸವಾಲಿನ ಕೆಲಸವಾಗಿದೆ. ಜಮೀನಿನಲ್ಲಿ ಕಬ್ಬಿನ ಬೆಳೆ ಇರುವುದರಿಂದ ಅಲ್ಲಿ ಮಣ್ಣು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಮಣ್ಣನ್ನು ನಾಲ್ಕು ಜೆಸಿಬಿಗಳ ಮೂಲಕ ಎರಡು ಹಂತದಲ್ಲಿ ಮೇಲೆತ್ತಿ, ಲಾರಿಗಳ ಮೂಲಕ ಜಮೀನಿನಿಂದ ಹೊರಗೆ ಸಾಗಿಸಲಾಗುತ್ತಿದೆ. ಸುರಂಗ ಕೊರೆಯುವ ಕಾಮಗಾರಿ ಆಳಕ್ಕೆ ಸಾಗಿದಂತೆ ಮಣ್ಣಿನ ವಿಲೇವಾರಿ ಕೆಲಸ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಮಯ 8.30 : ಬಾಲಕ ತಿಮ್ಮಣ್ಣನ ಮೇಲೆ ಬಿದ್ದಿರುವ ಮಣ್ಣನ್ನು ವ್ಯಾಕ್ಯೂಮ್ ಕ್ಲೀನರ್ ಸಹಾಯದಿಂದ ತೆಗೆಯಲಾಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ. ಮಣ್ಣು ತೇವಗೊಂಡಿರುವ ಕಾರಣ ಅದನ್ನು ತೆಗೆಯುವುದು ಸವಾಲಿನ ಕೆಲಸವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಮಯ 7.30 : ಮಗುವಿನ ಮೇಲೆ ಮಣ್ಣು ಬಿದ್ದಿರುವ ಕಾರಣ ಮಗುವನ್ನು ರಕ್ಷಿಸುವ ರೋಬೋ ಕೆಲಸಕ್ಕೆ ಅಡ್ಡಿ ಉಂಟಾಗುತ್ತಿದೆ. ಮಣಿಕಂಠನ್ ನೇತೃತ್ವದ ತಂಡ ತಡರಾತ್ರಿಯಿಂದ ಕಾರ್ಯಾಚರಣೆ ನಡೆಸುತ್ತಿದೆ. ಮಗುವಿನ ಮೇಲೆ ಬಿದ್ದಿರುವ ಮಣ್ಣನ್ನು ತೆಗೆದ ನಂತರ ರೋಬೋ ಕಾರ್ಯಾಚರಣೆ ಪುನಃ ಆರಂಭವಾಗಿದೆ.

ಭಾನುವಾರ ಮಧ್ಯಾಹ್ನ ಕೊಳವೆ ಬಾವಿಗೆ ಬಿದ್ದ ತಿಮ್ಮಣ್ಣನ ರಕ್ಷಣಾ ಕಾರ್ಯ ಸತತವಾಗಿ ಮುಂದುವರೆದಿದೆ. ಮಂಗಳವಾರ ರಾತ್ರಿಯ ತನಕ ಬೋರ್ ವೆಲ್ ಗೆ ಸಮಾನಂತರವಾಗಿ ಗುಂಡಿ ತೆಗೆಯುವ ಕಾರ್ಯಾಚರಣೆ ಮುಂದುವರೆದಿದ್ದು ಇದುವರೆಗೂ 110 ಅಡಿ ಮಣ್ಣನ್ನು ತೆಗೆಯಲಾಗಿದೆ. [ಮಂಗಳವಾರದ ಕಾರ್ಯಾಚರಣೆ ವಿವರಗಳು]
ಮೂರು ಬಾರಿ ರೋಬೋ ಕಾರ್ಯಾಚರಣೆ ವಿಫಲ : ಮಣಿಕಂಠನ್ ನೇತೃತ್ವದ ರೋಬೋ ತಂಡ ಮಂಗಳವಾರ ರಾತ್ರಿ 11 ಗಂಟೆಯಿಂದ ತಿಮ್ಮಣ್ಣನ ರಕ್ಷಣೆಗಾಗಿ ನಡೆಸಿದ ರೋಬೋ ಕಾರ್ಯಾಚರಣೆ ವಿಫಲವಾಗಿದೆ. ಬಾಲಕನ ಮೇಲೆ ಮಣ್ಣು ಬಿದ್ದಿರುವುದು, ಕಲ್ಲು ಅಡ್ಡ ಬರುತ್ತಿರುವುದರಿಂದಾಗಿ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಅತ್ತ ಎನ್ ಡಿಆರ್ ಎಫ್ ತಂಡ ಸುರಂಗ ಕೊರೆಯುವ ಕಾರ್ಯವನ್ನು ಮುಂದುದರೆಸಿದೆ.












Click it and Unblock the Notifications