ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಬಿಜೆಪಿ ಟಿಕೆಟ್ ಆಕಾಂಕ್ಷಿ- ಯಾರಿಗೆ ಸಿಗಲಿದೆ ಚಾನ್ಸ್?
ಬಾಗಲಕೋಟೆ, ಜನವರಿ 06: ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಭರ್ಜರಿ ಪ್ಲಾನ್ ನಡೆಸಿದೆ. ಅದರಂತೆ ಈ ಬಾರೀ 13 ಕ್ಕೂ ಹೆಚ್ಚು ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಸಿಗುವುದು ಡೌಟ್ ಎನ್ನಲಾಗಿದ್ದು, ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಹೊಸ ಆಕಾಂಕ್ಷಿಯ ಹೆಸರು ಕೇಳಿ ಬರುತ್ತಿದೆ.
ಹೌದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕಲಿದೆ ಎಂಬ ವಿಷಯ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಬಾಗಲಕೋಟೆ ಕ್ಷೇತ್ರದಲ್ಲೂ ಸತತ ನಾಲ್ಕು ಬಾರಿ ಗೆದ್ದಿರುವ ಸಂಸದ ಪಿ.ಸಿ.ಗದ್ದಿಗೌಡರಿಗೆ ಮೊದಲ ಬಾರಿಗೆ ಸ್ವಪಕ್ಷೀಯರಿಂದ ಪೈಪೋಟಿ ಎದುರಾಗಿದೆ. ಈ ಬಾರ 70 ವರ್ಷ ಮೇಲ್ಪಟ್ಟವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ ಡಾ.ಪ್ರಕಾಶ ಪರಪ್ಪ ಅವರು ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿ ರಾಜಕೀಯ ಚಟುವಟಿಕೆ ತೀವ್ರಗೊಂಡಿವೆ.

ನಿವೃತ್ತ ಐಎಎಸ್ ಅಧಿಕಾರಿ ಡಾ.ಪ್ರಕಾಶ ಪರಪ್ಪ ಅವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಅವರು, ಮೈಸೂರಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಪದವೀಧರರು. 1997ರಲ್ಲಿ ಐಎಎಸ್ ಪರೀಕ್ಷೆ ಉತ್ತೀರ್ಣರಾದ ಅವರು ಮುಂಬೈ ಸೇರಿ ವಿವಿಧೆಡೆ ಕೇಂದ್ರದ ಆರ್ಥಿಕ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದಿದ್ದಾರೆ. ಇನ್ನೂ 2020 ರಲ್ಲಿ ಬಿಜೆಪಿ ಪಕ್ಷವನ್ನ ಸೇರಿದ್ದಾರೆ. 2020 ಕ್ಕೂ ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯಲ್ಲಿದ್ದರು.
ನಿವೃತ್ತ ಐಎಎಸ್ ಅಧಿಕಾರಿ ಡಾ.ಪ್ರಕಾಶ ಪರಪ್ಪ ಅವರು ಬಿಜೆಪಿಯ ರಾಜ್ಯ ಪ್ರಬುದ್ಧರ ಪ್ರಕೋಷ್ಠದ ಸಹ ಸಂಚಾಲಕ, ಪ್ರಧಾನಿ ಮೋದಿ ಅವರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ರಾಜ್ಯ ಸಹ ಪ್ರಭಾರಿ, ರಾಜ್ಯ ಚುನಾವಣಾ ಪ್ರಣಾಳಿಕೆ ಸಮಿತಿ ಸಹ ಸಂಚಾಲಕ, ರಾಜ್ಯ ವಿಶೇಷ ಸಂಪರ್ಕ ಸಮಿತಿಯ ಸಹ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನೂ 2023ರ ವಿಧಾನಸಭಾ ಚುನಾವಣೆ ವೇಳೆ ಜಿಲ್ಲೆಯ 24 ಪ್ರಕೋಷ್ಠಗಳಿಗೆ ರಾಜ್ಯ ಪ್ರಭಾರಿಯಾಗಿದ್ದ ಅವರು, ಜಿಲ್ಲೆಯಾದ್ಯಂತ ಸಕ್ರಿಯರಾಗಿದ್ದಾರೆ. ಈಗಾಗಲೇ ಹಲವು ತಿಂಗಳಿನಿಂದ ಬಾಗಲಕೋಟೆಯಲ್ಲೇ ವಾಸವಿರುವ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಹಲವು ಸಭೆ ಸಮಾರಂಭ ಹಾಗೂ ಪ್ರತಿ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ.

ಗ್ರಾಮಗಳಲ್ಲಿ ಎಂ.ಪಿ (ಮೋದಿ, ಪ್ರಕಾಶ) ಚಾಯ್ ಅಭಿಯಾನ ಆರಂಭಿಸಿರುವ ಡಾ. ಪ್ರಕಾಶ ಅವರು ಪ್ರತಿಯೊಂದು ಗ್ರಾಮಸ್ಥರೊಂದಿಗೆ ಚಹಾ ಕುಡಿಯುತ್ತ ಸಮಸ್ಯೆ ಆಲಿಸುತ್ತಾರೆ. ಈಗಾಗಲೇ 200ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಭಿಯಾನ ಕೈಗೊಂಡು, ಗ್ರಾಮಸ್ಥರ ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ. ಹಲವು ವರ್ಷಗಳಿಂದ ಬಾಗಲಕೋಟೆ ಕ್ಷೇತ್ರವನ್ನು ಬಿಜೆಪಿ ಸಂಸದರು ಪ್ರತಿನಿಧಿಸಿದ್ದಾರೆ. ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಇದೆಲ್ಲದರ ಮಧ್ಯೆ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಪಕ್ಷದ ನಾಯಕನಾಗಿ ಗ್ರಾಮಸ್ಥರ ಅಹವಾಲು ಆಲಿಸಿದ್ದೇನೆ ಎಂದು ಡಾ. ಪ್ರಕಾಶ ತಿಳಿಸಿದರು.
ಇನ್ನೂ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಕುರಿತು ಡಾ.ಪ್ರಕಾಶ ಜೆ ಪರಪ್ಪ ಮಾತನಾಡಿ, ಚಿತ್ರದುರ್ಗ ಕ್ಷೇತ್ರ ಮೀಸಲು ಕ್ಷೇತ್ರ ಆಗಿರುವ ಕಾರಣ ಬೇರೆಡೆ ಸ್ಪರ್ಧಿಸಬೇಕು. ಇಲ್ಲಿ ವೈದ್ಯ ಸ್ನೇಹಿತರು ಸಂಬಂಧಿಗಳು ಇರುವ ಕಾರಣ ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ. ಪಕ್ಷದ ವರಿಷ್ಠರ ಸೂಚನೆಯೂ ಇದೆ ಎಂದು ಹೇಳಿದ್ದಾರೆ. ಇತ್ತ ಬಾಗಲಕೋಟೆಯ ಹಾಲಿ ಸಂಸದರಾಗಿರುವ ಪಿ.ಸಿ. ಗದ್ದಿಗೌಡರ ಸಂಸದ ಅವರಿಗೆ ಈ ಬಾರೀ ವಯಸ್ಸಿನ ಕಾರಣದಿಂದ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಅಲ್ಲದೇ ಮತ್ತೊಮ್ಮೆ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ. ಪಕ್ಷದ ಹೈಕಮಾಂಡ್ ಅವಕಾಶ ನೀಡಲಿದೆ ಎಂಬ ನಿರೀಕ್ಷೆ ಇದೆ ಎಂದು ಸಂಸದರಾದ ಪಿ.ಸಿ. ಗದ್ದಿಗೌಡರ ಹೇಳಿದ್ದಾರೆ.
ಒಟ್ನಲಿ, ಈ ಬಾರೀ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಪ್ರಬಲ ಟಿಕೆಟ್ ಆಕಾಂಕ್ಷಿಗಳಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಆಗುವರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಾರಿಗೆ ಟಿಕೆಟ್ ಸಿಕ್ಕರೂ ಅವರನ್ನು ಗೆಲ್ಲಿಸುತ್ತೇವೆ ಎಂದು ಬಿಜೆಪಿ ಜಿಲ್ಲಾ ನಾಯಕರು ಹೇಳಿದ್ದಾರೆ. ಆದರೆ ಈ ಬಾರಿ ಲೋಕಸಮರಕ್ಕೆ ಯಾರಿಗೆ ಚಾನ್ಸ್ ಸಿಗಲಿದೆ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications