ಶಾಪಗ್ರಸ್ತ ನೀಲಕಂಠರಾಯನ ಗಡ್ಡೆಗೆ ಬಂದರು ಆಫೀಸರು!
ಯಾದಗಿರಿ, ಏಪ್ರಿಲ್ 25 : ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕು ನೀಲಕಂಠರಾಯನ ಗಡ್ಡೆ ಗ್ರಾಮಕ್ಕೆ ಇನ್ಮುಂದೆ ಒಂಚೂರಾದರೂ ಮೂಲಸೌಲಭ್ಯಗಳು ಸಿಗಬಹುದು, ಹಂತ ಹಂತವಾಗಿ ಬಹುತೇಕ ವ್ಯವಸ್ಥೆಗಳು ಅಲ್ಲಿ ಕಾಲಿಡಬಹುದು ಅನ್ನೋ ಒಂದಿಷ್ಟು ಆಶಾಭಾವನೆ ಮೂಡಿಸಿದೆ. ಯಾದಗಿರಿ ಜಿಲ್ಲಾಡಳಿತ ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡಿದೆ.
ಶಾಪಗ್ರಸ್ತ ಗ್ರಾಮವೆಂದೇ ಕರೆಸಯಿಸಿಕೊಳ್ಳುವ ನೀಲಕಂಠರಾಯನ ಗಡ್ಡೆ ಜನರ ಕರುಣಾಜನಕ ಬದುಕು ಕುರಿತ ಖಾಸಗಿ ಮಾಧ್ಯಮದ ವರದಿಯನ್ನ ಜಿಲ್ಲಾಧಿಕಾರಿ ಮನೋಜ್ ಜೈನ್, ಸಿಇಓ ವಿಕಾಸ್ ಕಿಶೋರ್ ಸುರಾಳಕರ್ ಹಾಗೂ ಅಪರ ಜಿಲ್ಲಾಧಿಕಾರಿ ಅಶೋಕ್ ಅವರ ಗಮನಕ್ಕೆ ತರಲಾಗಿತ್ತು. [ನೀಲಕಂಠರಾಯನಗಡ್ಡಿ ವಾಸಿಗಳಿಗೆ ನೀರು ಎಂದೂ ಶಾಪ!]

ಇದೀಗ ಜನರ ದುಮ್ಮಾನಗಳಿಗೆ ಸ್ಪಂದಿಸಲು ಮೂರು ಕಿ.ಮೀ. ಕಲ್ಲುಮುಳ್ಳುಗಳ, ಬೆಟ್ಟಗುಡ್ಡಗಳ ಹಾದಿಯಲ್ಲಿ ಯಾದಗಿರಿ ಜಿಲ್ಲಾಡಳಿತ ಕಾಲಿಟ್ಟಿದೆ. ಕುಡಿಯುವ ನೀರು, ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದ್ದು, ತಹಸೀಲ್ದಾರ್ ಅರುಣ್ ಕುಲಕರ್ಣಿ ಹಾಗೂ ವೈದ್ಯೆ ಡಾ. ವೀಣಾ ನೇತೃತ್ವದ ತಂಡ ಭಾನುವಾರ ಭೇಟಿ ನೀಡಿತ್ತು.

ಏನಾದ್ರೂ ಆಗಲಿ ಅಲ್ಲೊಂದಿಷ್ಟು ವ್ಯವಸ್ಥೆಯನ್ನ ಕಲ್ಪಿಸಿ ಬರೋಣವೆಂದು ದೃಢನಿರ್ಧಾರ ಮಾಡಿಕೊಂಡೇ ಬಂದಂತಿದ್ದ ಈ ಅಧಿಕಾರಿಗಳ-ವೈದ್ಯರ ತಂಡ, ಗಡ್ಡೆ ಗ್ರಾಮಸ್ಥರ ನೋವು-ನಲಿವುಗಳಿಗೆ ಕಿವಿಯಾದರು. ಅಲ್ಲೇ ಒಂದಿಷ್ಟು ಮಹಿಳೆಯರ ಹಾಗೂ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದ ವೈದ್ಯರ ತಂಡ, ಸಲಹೆ ಸೂಚನೆಗಳನ್ನ ಕೊಟ್ಟರು.

ಪ್ರತಿ ಹದಿನೈದು ಅಥವಾ ತಿಂಗಳಿಗೊಮ್ಮೆಯಾದ್ರೂ ಬಂದು ಆರೋಗ್ಯ ತಪಾಸಣೆ ನಡೆಸುವ ವಿಶ್ವಾಸದ ಮಾತು ನೀಡಿದರು. ಇನ್ನು, ಸೇತುವೆ ನಿರ್ಮಾಣದ ಬಗ್ಗೆ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ್ ಭರವಸೆ ನೀಡಿದ್ದಾರಂತೆ. ಸೇತುವೆಯೇ ಇಡೀ ಗ್ರಾಮದ ಭವಿಷ್ಯವನ್ನೇ ಬೆಳಗಲು ಸಹಕಾರಿಯಾಗಬಲ್ಲದು.

ಹೊರಜಗತ್ತಿನಿಂದ ಬಹುತೇಕ ದೂರವಾಗಿರುವಂತಿರುವ ನೀಲಕಂಠರಾಯನ ಗಡ್ಡೆ ಗ್ರಾಮಸ್ಥರ ಬದುಕು-ಬವಣೆ ನಿಜಕ್ಕೂ ಶೋಚನೀಯ, ಅಷ್ಟೇ ಆಘಾತವನ್ನೂ ಮೂಡಿಸುತ್ತದೆ. ಕನಿಷ್ಠ ಮೂಲಸೌಲಭ್ಯಗಳಿಂದ ವಂಚಿತವಾಗಿರೋ ಈ ಗ್ರಾಮ ಸಹಜ ಸ್ಥಿತಿಗೆ ಬರುವಂತಾಗಲಿ. ಭೀಕರ ಬರಗಾಲದಿಂದ ಗಡ್ಡೆಯ ಸುತ್ತಲಿನ ಕೃಷ್ಣಾ ನದಿ ಸಂಪೂರ್ಣ ಬತ್ತಿಹೋಗಿದೆ.












Click it and Unblock the Notifications