ಅಷ್ಟಮಂಗಲ ಪ್ರಶ್ನೆಯಲ್ಲಿ ಬಯಲಾಯಿತು ದೇಗುಲದ ರಹಸ್ಯ
ಬೆಳ್ತಂಗಡಿ, ಜ 29: ಅಷ್ಟಮಂಗಲ ಪ್ರಶ್ನೆಯಲ್ಲಿ ಜೀರ್ಣಾವಸ್ಥೆಯಲ್ಲಿದ್ದ ದೇವಾಲಯದ ರಹಸ್ಯವೊಂದು ಬಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದಲ್ಲಿ ಈ ದೇವಾಲಯದ ಕುರುಹು ಪತ್ತೆಯಾಗಿತ್ತು.
ಗ್ರಾಮದ ಬಲ್ಲಂಗೇರಿ ಎಂಬಲ್ಲಿ ಜೀರ್ಣಾವಸ್ಥೆಯಲ್ಲಿದ್ದ ಕುರುಹೊಂದು "ಶ್ರೀ ಸೂರ್ಯ ನಾರಾಯಣ" ದೇಗುಲದ್ದು ಎನ್ನುವ ಎಂಬ ಅಂಶ ಈಗ ಅಷ್ಟಮಂಗಲ ಪ್ರಶ್ನೆಯಿಂದ ತಿಳಿದು ಬಂದಿದೆ. (ಉಡುಪಿ ಕ್ಷೇತ್ರಕ್ಕೆ ಕಾದಿದೆ ವಿಪತ್ತು)
ನೂರಾರು ವರುಷಗಳ ಹಿಂದೆಯೇ ಈ ಸ್ಥಳದಲ್ಲಿ ಪೂಜಾ ಕ್ಷೇತ್ರವೊಂದಿದ್ದು ಕಾಲನ ಮಹಿಮೆಗೆ ತುತ್ತಾಗಿ ನಶಿಸಿ ಹೋಗಿತ್ತು. ಈಗ ನದಿ ತಟದಲ್ಲಿ ಕ್ಷೇತ್ರದ ಕುರುಹುಗಳಷ್ಟೇ ಉಳಿದುಕೊಂಡಿವೆ. ಭಾರ್ಗವ ಋಷಿ ಗಾಯತ್ರಿ ಮಂತ್ರೋಪಾಸನೆಯ ಮೂಲಕ ಸೂರ್ಯನನ್ನು ಒಲಿಸಿಕೊಂಡು ಈ ಕ್ಷೇತ್ರ ನಿರ್ಮಾಣ ಮಾಡಿದ್ದರು ಎನ್ನುವ ವಿಷಯ ಅಷ್ಟಮಂಗಲ ಪ್ರಶ್ನೆಯ ವೇಳೆ ಬಹಿರಂಗವಾಗಿದೆ.

ಆರೋಗ್ಯ, ಸಿದ್ಧಿ ಮತ್ತು ಸಂತಾನಕ್ಕೆ ಭಕ್ತಿಯಿಂದ ಈ ಕ್ಷೇತ್ರದಲ್ಲಿ ಸೇವೆ ಮಾಡಿದರೆ ಇಷ್ಟಾರ್ಥ ಫಲಿಸುತ್ತಿತ್ತು. ಕ್ಷೇತ್ರದಲ್ಲಿ ಪ್ರಧಾನ ಶಕ್ತಿಯಾಗಿ ಸೂರ್ಯನಾರಾಯಣನ ಆರಾಧನೆ ನಡೆಯುತ್ತಿತ್ತು ಎಂದು ಅಷ್ಟಮಂಗಲ ಪ್ರಶ್ನೆ ನಡೆಸಿಕೊಡುವ ತಂತ್ರಿಗಳಾದ ಉದಯ ಪಾಂಗಣ್ಣಾಯ ಹೇಳಿದ್ದಾರೆ.
ಕ್ಷೇತ್ರದ ಶಕ್ತಿಗಳಾಗಿ ಗಣಪತಿ, ದುರ್ಗಾಪರಮೇಶ್ವರಿ, ಪೂರ್ಣ ಸಾನ್ನಿಧ್ಯದ ನಾಗ, ಸ್ಥಳದ ಮೂಲ ದೈವ ಪಂಜುರ್ಲಿ, ಗುಳಿಗ, ಕೊಡಮಣಿತ್ತಾಯಿಗಳಿಗೂ ಆರಾಧನೆ ಸಲ್ಲುತ್ತಿತ್ತು. ಇವುಗಳೆಲ್ಲವನ್ನೂ ಪುನರ್ ಪ್ರತಿಷ್ಠಾಪಿಸಿ ಕ್ಷೇತ್ರ ನಿರ್ಮಾಣವಾಗಬೇಕಾಗಿದೆ ಎಂಬ ಅಂಶ ಅಷ್ಟಮಂಗಲ ಪ್ರಶ್ನೆಯ ಸಂದರ್ಭದಲ್ಲಿ ತಿಳಿದು ಬಂದಿದೆ.
ತಂತ್ರಿಗಳಾದ ಉದಯ ಪಾಂಗಣ್ಣಾಯ ನೇತೃತ್ವದಲ್ಲಿ, ಅಜಿಲ ಅರಮನೆಯ ಪದ್ಮಪ್ರಸಾದ್ ಅಜಿಲರ ಮಾರ್ಗದರ್ಶನದಲ್ಲಿ, ದೈವಜ್ಞರಾದ ಮಾಡಾವು ವೆಂಕಟ್ರಮಣ ಭಟ್ ಹಾಗೂ ಕೇಕಣಾಜೆ ಗಣೇಶ್ ಭಟ್ ಅಷ್ಟಮಂಗಲ ಪ್ರಶ್ನೆ ಇರಿಸಿದ್ದರು.
ಅಷ್ಟಮಂಗಲ ಪ್ರಶ್ನೆಯೆಂದರೇನು: ಪ್ರಮುಖವಾಗಿ ಕರ್ನಾಟಕದ ಕರಾವಳಿ ಪ್ರದೇಶ ಮತ್ತು ಕೇರಳದಲ್ಲಿ 'ಅಷ್ಟಮಂಗಲ ಪ್ರಶ್ನೆ' ಪ್ರಕ್ರಿಯೆ ಹೆಚ್ಚಾಗಿ ನಡೆಯುತ್ತದೆ. ದೇವಾಲಯದ ಪ್ರಕ್ರಿಯೆಗಳು ಸುಗಮವಾಗಿ ನಡೆಯುತ್ತಿದೆಯೇ, ಅಲ್ಲಿರುವಂಥ ನೌಕರರು, ಅರ್ಚಕರು, ಆಡಳಿತ ಮೊಕ್ತೇಸರರ ನಡವಳಿಕೆ ಹೇಗಿದೆ, ಪೂಜಾ ವಿದಿವಿಧಾನದಲ್ಲಿ ಏನಾದರೂ ದೋಷಗಳಾಗಿದೆಯೇ? ದೋಷಗಳು ಕಂಡು ಬಂದರೆ ಅದಕ್ಕೆ ಸೂಕ್ತ ಪರಿಹಾರವೇನು? ಮುಂತಾದವುಗಳನ್ನು ಅರಿಯುವುದಕ್ಕೆ ಅಷ್ಟಮಂಗಲ ಪ್ರಶ್ನೆ ಪ್ರಕ್ರಿಯೆ ನಡೆಯುತ್ತದೆ.
ಅಲ್ಲದೇ, ಶಿಥಿಲಾವಸ್ಥೆಯಲ್ಲಿರುವ ದೇವಾಲಯದ ಪುನರ್ ನಿರ್ಮಾಣ, ದೇವಾಲಯದ ಜೀರ್ಣೋದ್ದಾರ, ಗ್ರಾಮದಲ್ಲಿ ಏನಾದರೂ ಸಮಸ್ಯೆ ಕಂಡುಬಂದರೂ ಅಷ್ಟಮಂಗಲ ಪ್ರಶ್ನೆಯ ಮೂಲಕ ಪರಿಹಾರ ಕಂಡುಕೊಳ್ಳುವ ಪದ್ದತಿಯೂ ಜಾರಿಯಲ್ಲಿದೆ.
ಅಷ್ಟಮಂಗಲ ಪ್ರಶ್ನೆ ಹೇಗೆ ನಡೆಯುತ್ತದೆ? ಅಷ್ಟಮಂಗಲ ಪ್ರಶ್ನೆಗೆ ಪ್ರಮುಖವಾಗಿ ಎಂಟು ವಸ್ತುಗಳು ಬೇಕಾಗುತ್ತದೆ. ಬಿಳಿ ಬಟ್ಟೆ, ಕನ್ನಡಿ, ತೆಂಗಿನಕಾಯಿ, ಕುಂಕುಮ, ವೀಳ್ಯದೆಲೆ, ಭತ್ತ, ಅಕ್ಕಿ, ಹೂವಿನ ಅಕ್ಷತೆ. ಒಬ್ಬರಿಗಿಂತ ಹೆಚ್ಚು (ಹೆಚ್ಚಾಗಿ ಎಂಟು ಮಂದಿ) ದೈವಜ್ಞರು ಇರುತ್ತಾರೆ.ಪ್ರಶ್ನೆ ಪ್ರಕ್ರಿಯೆ ಮುಗಿಯಲು ಕಾಲ ಮಿತಿಯಿಲ್ಲ.
ದೈವಜ್ಞರ ಬಳಿ ಪ್ರಶ್ನೆ ಕೇಳಲು ಬರುವ ಸಮಯದಿಂದ ಲೆಕ್ಕಚಾರ ಆರಂಭವಾಗುತ್ತದೆ. ಸಂಖ್ಯಾಶಾಸ್ತ್ರದಿಂದ ಮಾತ್ರವೇ ಅಲ್ಲದೇ, ಬಾಡಿ ಲಾಂಗ್ವೇಜ್ ಮುಖಾಂತರವೂ ಸಮಸ್ಯೆಗಳನ್ನು ಅರಿಯಲಾಗುತ್ತದೆ.












Click it and Unblock the Notifications