ಸಹಾಯಕ ಪ್ರಾಧ್ಯಾಪಕರ ಹುದ್ದೆ: ಅರ್ಜಿ ಸಲ್ಲಿಕೆ ನ.20ರ ವರೆಗೆ ವಿಸ್ತರಣೆ
ಬೆಂಗಳೂರು, ನವೆಂಬರ್, 4: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ನ.20ರ ವರೆಗೆ ವಿಸ್ತರಿಸಲಾಗಿದೆ
ಕರ್ನಾಟಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಸಹಾಯಕ ಪ್ರಾಧ್ಯಾಪಕರ 1242 ಹುದ್ದೆಗಳ ನೇರನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್ಲೈನ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಆದರೆ, ಅರ್ಜಿ ಸಲ್ಲಿಸಲು ನ.6 ಸರ್ವರ್ ಸಮಸ್ಯೆ ಆಗುತ್ತಿರುವುದರಿಂದ ದಿನಾಂಕ ವಿಸ್ತರಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು.
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಫಲಿತಾಂಶ ನ.2 ರಂದು ಪ್ರಕಟವಾಗಿದೆ. ಈ ಫಲಿತಾಂಶದ ಮೂಲಕ ಅರ್ಹತೆ ಪಡೆದ ಅಭ್ಯರ್ಥಿಗೆಳಿಗೆ ಮತ್ತು ಈ ಮುಂಚೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಅನುಕೂಲ ಆಗುವ ದೃಷ್ಟಿಯಿಂದ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ನೇಮಕಾತಿಗೆ ಸಂಬಂಧಿಸಿದಂತೆ ಸೆ.30 ಹೊರಡಿಸಿರುವ ಅಧಿಸೂಚನೆಯ ಎಲ್ಲಾ ಮಾನದಂಡಗಳು ಯಥಾವತ್ತಾಗಿ ಅನ್ವಯ ಆಗುತ್ತವೆ. ಅರ್ಜಿ ಸಲ್ಲಿಕೆಗೆ ನ.20ರ ರಾತ್ರಿ 11.59ರವರೆಗೆ ಅವಕಾಶ ಇರುತ್ತದೆ. ಶುಲ್ಕ ಪಾವತಿಗೆ ಕೊನೆಯ ದಿನಾಂಕವನ್ನು ನ.30 ರವರೆಗೆ (ಕಚೇರಿ ವೇಳೆಯಲ್ಲಿ) ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ದಿನಾಂಕ ವಿಸ್ತರಿಸಲು ಮುಖ್ಯಮಂತ್ರಿಗೆ ಮನವಿ:
ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕವನ್ನು ವಿಸ್ತರಿಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ಬಾಬು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.
ಸಾಫ್ಟ್ವೇರ್ ತಾಂತ್ರಿಕ ದೋಷದಿಂದ ಅರ್ಜಿ ಸಲ್ಲಿಕೆ ಸುಗಮವಾಗಿ ನಡೆಯುತ್ತಿಲ್ಲ. ಅಲ್ಲದೆ, ಕೆ-ಸೆಟ್ ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕಾದ ಅಗತ್ಯ ಇರುವುದರಿಂದ ದಿನಾಂಕವನ್ನು ನ.30 ರವರೆಗೆ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿದ್ದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಾಕಷ್ಟು ಸಂಖ್ಯೆಯ ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇದ್ದರೂ ಸಹ ಕೇವಲ 1242 ಹುದ್ದೆಗಳ ನೇರನೇಮಕಾತಿ ಸಂಬಂಧ ಆದೇಶ ಹೊರಡಿಸಲಾಗಿದೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಪೂರ್ಣಪ್ರಮಾಣದಲ್ಲಿ ಭರ್ತಿ ಮಾಡುವಂತಹ ಕ್ರಮ ಹಲವು ವರ್ಷಗಳಿಂದ ನಡೆಯುತ್ತಿಲ್ಲ. ಅಲ್ಲದೆ, ಪ್ರಸ್ತುತ ಸರ್ಕಾರಿ ಮತ್ತ ಅನುದಾನಿತ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರಿಗೆ ಹಲವು ವರ್ಷಗಳಿಂದ ಪದೋನ್ನತಿ ನೀಡುವ ಕಾರ್ಯ ಆಗುತ್ತಿಲ್ಲ. ಪೂರ್ಣ ಪ್ರಮಾಣದಲ್ಲಿ ಪ್ರಾಂಶುಪಾಲರ ಹುದ್ದೆಗಳನ್ನೂ ಭರ್ತಿ ಮಾಡುತ್ತಿಲ್ಲ ಎಂದು ರಮೇಶ್ಬಾಬು ಕಾಲೇಜುಗಳ ಸಮಸ್ಯೆಗಳನ್ನು ಮುಖ್ಯಮಂತ್ರಿಗೆ ವಿವರಿಸಿದ್ದಾರೆ.
ಮುಖ್ಯಮಂತ್ರಿಗಳು ಈ ಸಬಂಧ ಕೂಡಲೇ ಗಮನವಹಿಸಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಪದೋನ್ನತಿಗೆ ಅಗತ್ಯ ಕ್ರಮ ವಹಿಸಬೇಕು ಎಂದು ರಮೇಶ್ಬಾಬು ಆಗ್ರಹಿಸಿದ್ದಾರೆ.